ದ್ವಿತೀಯ ದಿನವೂ ವಿದ್ಯಾರ್ಥಿಗಳ ಭರಪೂರ ಸ್ಪಂದನೆ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉದಯವಾಣಿ ಫೋನ್ಇನ್
Team Udayavani, Mar 14, 2020, 6:13 AM IST
ಉಡುಪಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಉದಯವಾಣಿ ದಿನಪತ್ರಿಕೆಯು ಗುರುವಾರ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಫೋನ್ಇನ್ ಕಾರ್ಯಕ್ರಮ ಶುಕ್ರವಾರವೂ ಮಣಿಪಾಲದ ಕಚೇರಿಯಲ್ಲಿ ಮುಂದುವರಿಯಿತು. ಇಂಗ್ಲಿಷ್, ಹಿಂದಿ, ಸಂಸ್ಕೃತ, ಸಮಾಜಶಾಸ್ತ್ರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಎರಡನೇ ದಿನವೂ ಕರೆಗಳ ಮಹಾಪೂರವೇ ಹರಿದುಬಂತು. ಬೈಲೂರು, ಜಮಖಂಡಿ, ಮಂಗಳೂರು, ಮುದರಂಗಡಿ, ಬಂಟ್ವಾಳ, ಹಿರಿಯಡಕ್ಕ, ಕಾರವಾರ, ಸುರತ್ಕಲ್, ಕುಂದಾಪುರ, ಬೈಕಂಪಾಡಿ, ಮಣ್ಣಗುಡ್ಡೆ ಸಹಿತ ಹಲವಾರು ಹಲವಾರು ಕಡೆಗಳಿಂದ ಕರೆಗಳು ಬಂದವು. ವಿದ್ಯಾರ್ಥಿಗಳಿಂದ ತೂರಿಬಂದ ಪ್ರಶ್ನೆಗೆ ಸಂಪನ್ಮೂಲ ವ್ಯಕ್ತಿಗಳು ಅಷ್ಟೇ ಸರಳವಾಗಿ ಉತ್ತರಿಸಿದರು.
ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಮುಂಡ್ಕೂರಿನ ಶಿಕ್ಷಕ ಕೆ. ವಿವೇಕಾನಂದ ಹೆಗ್ಡೆ ಹಾಗೂ ಕಾರ್ಕಳದ ಎಂ.ವಿ. ಶಾಸ್ತ್ರಿ ಹೈಸ್ಕೂಲಿನ ಶಿಕ್ಷಕ ಪ್ರಕಾಶ್ ರಾವ್ ಅವರು ಇಂಗ್ಲಿಷ್, ಕಲ್ಯಾಣಪುರದ ಡಾ| ಟಿಎಂಎ ಪೈ ಹೈಸ್ಕೂಲಿನ ಶಿಕ್ಷಕ ವೆಂಕಟೇಶ್ ಎಚ್.ಎನ್. ಅವರು ಹಿಂದಿ ಹಾಗೂ ಸಂಸ್ಕೃತ ವಿಷಯ, ಸಮಾಜ ವಿಜ್ಞಾನ ವಿಷಯದಲ್ಲಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಶೇಖರ ಭೋವಿ, ಕನ್ನಡ ವಿಷಯದಲ್ಲಿ ಕಾವಡಿ ಸರಕಾರಿ ಪ.ಪೂ. ಕಾಲೇಜಿನ ಕಿರಣ್ ಹೆಗ್ಡೆ ಮಾಹಿತಿ ನೀಡಿದರು.
1 ಗಂಟೆಯಿಂದ 2 ಗಂಟೆಗಳಿಗೆ ವಿಸ್ತಾರ
ವಿದ್ಯಾರ್ಥಿಗಳ ದೂರವಾಣಿ ಕರೆಗಳು ಕಚೇರಿಗೆ ನಿರಂತರ ಬರತೊಡಗಿದವು. ಹಲವಾರು ರೀತಿಯ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ವಿಸ್ತಾರವಾಗಿ ಉತ್ತರಿಸಿದರು. ಸಂಜೆ 6ಗಂಟೆಗೆ ಆರಂಭಗೊಂಡ 1 ಗಂಟೆಯ ಪೋನ್ ಇನ್ ಕಾರ್ಯಕ್ರಮಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಮತ್ತೂ 1 ಗಂಟೆ ವಿಸ್ತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಕೂಡ ವಿದ್ಯಾರ್ಥಿಗಳ ಸ್ಪಂದನೆ ಕಂಡು ಖುಷಿಪಟ್ಟರು.
ಪರೀಕ್ಷೆ ತಯಾರಿ ಹೇಗೆ?
ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಪರೀಕ್ಷೆ ಪೂರ್ವದಲ್ಲಿ ಅಭ್ಯಾಸ ಮಾಡಿ ಕೊಂಡು ಸಮಗ್ರ ವಿಷಯದ ಕೀ ನೋಟ್ ತಯಾರಿಸಿಕೊಳ್ಳಬೇಕು. ಪರೀಕ್ಷೆ ಹಿಂದಿನ ದಿನ ಕೀ ನೋಟ್ ಓದಿದ ತತ್ಕ್ಷಣ ಎಲ್ಲ ವಿಷಯಗಳು ನೆನಪಿಗೆ ಬರವಂತೆ ನೋಡಿಕೊಳ್ಳಬೇಕು.
ಪರೀಕ್ಷೆ ಕೊಠಡಿ ಹೋಗುವ ಮುನ್ನ ಯಾವುದೇ ಚರ್ಚೆ ಹಾಗೂ ಗೊಂದಲಕ್ಕೆ ತುತ್ತಾಗಬಾರದು. ಪೂರ್ವದಲ್ಲಿ ತಯಾರಿಸಲಾದ ಕೀ ನೋಟ್ ಸಹಾಯದಿಂದ ಮತ್ತೂಮ್ಮೆ ವಿಷಯವನ್ನು ಅವಲೋಕನ ಮಾಡಬೇಕು. ಗೆಳೆಯರೊಂದಿಗೆ ಪ್ರಶ್ನೆಗಳ ಚರ್ಚಿಸಿದರೆ ಒತ್ತಡಕ್ಕೆ ತುತ್ತಾಗುವ ಸಾಧ್ಯತೆ ಇದೆ.
ತಜ್ಞರಿಂದ ವಿದ್ಯಾರ್ಥಿಗಳಿಗೆ ಸಲಹೆ
ಆಂಗ್ಲ ವಿಷಯ
ಆಂಗ್ಲ ವಿಷಯದಲ್ಲಿ ಮೊದಲ ಬಾರಿಗೆ ಪತ್ರ ಬರೆವಣಿ ಗೆಗೆ 5 ಅಂಕ ನೀಡಲಾಗಿದೆ. ಆ ಬಗೆಗಿನ ಹಂತಗಳನ್ನು ಕಲಿಯಬೇಕು. ಒಟ್ಟು ಸಾರಾಂಶದಲ್ಲೂ 2 ಪಾಯಿಂಟ್ಗಳಿರಬೇಕು. 3 ಪದ್ಯಗಳು 4 ಪಠ್ಯಗಳಿಂದ 7 ಅಂಕ ಸುಲಭದಲ್ಲಿ ಗಳಿಸಿಕೊಳ್ಳಬಹುದು. ಗ್ರ್ಯಾಂಡ್ ಮಾ ಕ್ಲೈಂಬ್ಸ್ ಎ ಟ್ರೀ, ಜಾಜ್ ಪೊಯಮ್, ದ ಸಾಂಗ್ ಆಫ್ ಇಂಡಿಯಾ, ಐ ಆ್ಯಮ್ ದ ಲ್ಯಾಂಡ್ ಇವಿಷ್ಟು ವಿಷಯದಲ್ಲಿ 4 ಅಂಕ ಹಾಗೂ
3 ಅಂಕಗಳ ಪ್ರಶ್ನೆಗಳು ಸಿಗಲಿವೆ.
ಹಿಂದಿ ಭಾಷೆ
ರಜಾ ಪತ್ರಕ್ಕೆ 5 ಅಂಕಗಳಿರುತ್ತವೆ. 4 ಅಂಕದ ಕಂಠಪಾಠ ಪದ್ಯಕ್ಕೆ ಹೆಚ್ಚು ಒತ್ತು ನೀಡಬೇಕು. 3 ಅಂಕದ ಸಮ್ಮರಿ ಪದ್ಯವನ್ನು ತಿಳಿದುಕೊಳ್ಳಬೇಕು. 3 ಅಂಕದ ಭಾವಾರ್ಥಕ್ಕೆ ಹೆಚ್ಚು ಮಹತ್ವ ನೀಡಬೇಕು. 15 ಅಂಕಗಳಿಗೆ ಆಗುವಷ್ಟು ಗದ್ಯಪಾಠದಿಂದ ಪ್ರಶ್ನೆಗಳನ್ನು ಕೇಳುತ್ತಾರೆ ಇದಕ್ಕೆ ತಯಾರಿ ನಡೆಸಬೇಕು. ಕರ್ನಾಟಕ ಸಂಪದ, ಗಿಲ್ಲು, ಇಂಟರ್ನೆಟ್ಕ್ರಾಂತಿ, ಇಮಾನ್ದಾರ್ ಕೀ ಸಮ್ಮಿಲನ್ನಿಂದ ಹೆಚ್ಚು ಓದಿದರೆ ಒಳ್ಳೆಯದು. ಇದರಿಂದ 3-4 ಅಂಕದ ಪ್ರಶ್ನೆ ಅಧಿಕ ಬರುವ ಸಾಧ್ಯತೆಗಳಿವೆ.
ಸಮಾಜ ವಿಜ್ಞಾನ
ಸಮಾಜ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗೊಂದಲವಿದ್ದ ವಿವಿಧ ಕದನ, ಒಪ್ಪಂದ, ನಕ್ಷೆ ಗುರುತಿಸು ವುದು, ಇತಿಹಾಸ, ರಾಜ್ಯ ಶಾಸ್ತ್ರ, ಭೂಗೋಳ ಶಾಸ್ತ್ರ ಸೇರಿ ದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು.
ಕನ್ನಡ
ವ್ಯಾಕರಣ, ಸಂದರ್ಭ ಸಹಿತ ವಿವರಿಸಿ, ಗಾದೆ ಮಾತು, ಪದ್ಯ, ಪ್ರಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಕೊನೆಯ ಅವಧಿ ತಯಾರಿ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.