“ಮೋದಿ ನೋಡಿ ಶೋಭಾಗೆ ಓಟುಕೊಟ್ಟರೆ ತಂದೆಯನ್ನು ನೋಡಿ ಮಗನಿಗೆ ಹೆಣ್ಣು ಕೊಟ್ಟಂತೆ ‘
Team Udayavani, Apr 5, 2019, 6:30 AM IST
ಕೋಟ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನರೇಂದ್ರ ಮೋದಿಯವರ ಹೆಸರಲ್ಲಿ ಮತಯಾಚಿಸುತ್ತಿದ್ದಾರೆ. ಆದರೆ ಮೋದಿಯನ್ನು ನೋಡಿ ಶೋಭಾಗೆ ಮತ ನೀಡಿದರೆ ಕೆಟ್ಟಚಟಗಳ ದಾಸನಾದ ಹುಡುಗನೊಬ್ಬನಿಗೆ ಆತನ ತಂದೆ ಒಳ್ಳೆಯವನು ಎನ್ನುವ ಕಾರಣಕ್ಕೆ ಹೆಣ್ಣು ಕೊಟ್ಟು ಸಂಸಾರವನ್ನೇ ಬಲಿಕೊಟ್ಟಂತಾಗುತ್ತದೆ ಇದು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕಾರ್ಯಕರ್ತರ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.
ಅವರು ಎ.2ರಂದು ಮಂದಾರ್ತಿಯಲ್ಲಿ ನಡೆದ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಂದಾರ್ತಿ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯವರ ಗೋ ಬ್ಯಾಕ್ ಅಭಿಯಾನ ಯಶಸ್ವಿಗೊಳಿಸಿ
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೇಲೆ ಸ್ವತಃ ಅವರ ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸವಿಲ್ಲ. ಹೀಗಾಗಿ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮುನ್ನ ಗೋ ಬ್ಯಾಕ್ ಶೋಭಾ ಎನ್ನುವ ಅಭಿಯಾನವನ್ನು ಆರಂಭಿಸಿದ್ದರು. ಆದರೆ ಇಂದು ಮುಲಾಜುಗಳಿಗೆ ಒಳಗಾಗಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿಯವರು ಆರಂಭಿಸಿದ ಈ ಅಭಿಯಾನವನ್ನು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಯಶಸ್ವಿಗೊಳಿಸಬೇಕಿದೆ ಎಂದರು.
ಅಭಿವೃದ್ಧಿಯೇ ನನ್ನ ಅಜೆಂಡ:-
ನಾವು ಯಾವುದೇ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಓಟು ಕೇಳುವುದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವುದಿಲ್ಲ. ನಮಗೆ ಇರುವುದು ಅಭಿವೃದ್ಧಿ ಒಂದೇ ಮುಖ್ಯ ಅಜೆಂಡ. ಆದ್ದರಿಂದ ಚುನಾವಣೆಯಲ್ಲಿ ನನ್ನ ಗೆಳೆಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಪ್ರಮೋದ್ ವಿನಂತಿಸಿದರು.
ಟೋಲ್, ಮರಳು, ಚತುಷ್ಪಥ ಸಮಸ್ಯೆಗೆ ಶೋಭಾ ಕಾರಣ
ಉಡುಪಿ ಜಿಲ್ಲೆಯನ್ನು ಕಿತ್ತು ತಿಣ್ಣುತ್ತಿರುವ ಟೋಲ್ ಸಮಸ್ಯೆ, ಮರಳು ಸಮಸ್ಯೆ ಹಾಗೂ ಅಸಮರ್ಪಕ ಚತುಷ್ಪಥ ಕಾಮಗಾರಿಗಳಿಗೆ ಶೋಭಾ ಕರಂದ್ಲಾಜೆಯವರ ಕಾರ್ಯವೈಖರಿಯೇ ಪ್ರಮುಖ ಕಾರಣ. ಇದುವರೆಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸದ ಶೋಭಾ ಯಾವ ಮುಖಹೊತ್ತು ಓಟು ಕೇಳುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಿಶನ್ ಹೆಗ್ಡೆ ಪ್ರಶ್ನೆ ಮಾಡಿದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೆ.ಪಿ.ಸಿ.ಸಿ. ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡ ಎಂ.ಎ. ಗಪೂರ್, ಶಂಭು ಪೂಜಾರಿ, ಮಮತಾ ಶೆಟ್ಟಿ ಮಂದಾರ್ತಿ, ಯುವ ಕಾಂಗ್ರೆಸ್ನ ಇಚ್ಛಿತಾರ್ಥ ಶೆಟ್ಟಿ, ಜೆಡಿಎಸ್ ಮುಖಂಡ ಅರುಣ್ ಕುಮಾರ್ ಕಲ್ಲುಗದ್ದೆ ಉಪಸ್ಥಿತರಿದ್ದರು.