ಮೂಲ ಯೋಜನೆಯೇ ಬೇರೆ ಯೋಜನೆಯಲ್ಲಿ ವಿಲೀನ
Team Udayavani, Jul 19, 2018, 1:01 PM IST
*ಯೋಜನೆ ಸ್ಥಗಿತ
*ಮಡಿಲು ಯೋಜನೆ ಕೂಡ ರದ್ದು
*ಫಲಾನುಭವಿಗೆ ದೊರೆಯದ ಹಣ
*ಹೊಸ ಯೋಜನೆ ಜತೆ ವಿಲೀನ
ಕುಂದಾಪುರ: ಸಮ್ಮಿಶ್ರ ಸರಕಾರ ಹೊಸದಾಗಿ ಮಾತೃಶ್ರೀ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಗರ್ಭಿಣಿ ಹಾಗೂ ಬಾಣಂತಿ ಯರ ಆರೈಕೆಗೆ ರಾಜ್ಯ ಆರೋಗ್ಯ ಇಲಾಖೆ ಮೂಲಕ ನೀಡುತ್ತಿದ್ದ ಪ್ರಸೂತಿ ಆರೈಕೆ ಅನುದಾನ ಎರಡು ವರ್ಷದಿಂದ ಇನ್ನೂ ಬಿಡುಗಡೆಯಾಗಿಲ್ಲ. ಈಗ ಯೋಜನೆಯನ್ನೇ ಕೇಂದ್ರ ಸರಕಾರದ ಮಾತೃವಂದನ, ರಾಜ್ಯದ ಮಾತೃಪೂರ್ಣ ಯೋಜನೆಯಲ್ಲಿ ವಿಲೀನಗೊಳಿಸಲಾಗುತ್ತಿದೆ.
ಪ್ರಸೂತಿ ಆರೈಕೆ
ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸಲು, ಗರ್ಭಿಣಿ ಮಹಿಳೆಯರಿಗೆ ರಕ್ತ ಹೀನತೆಯನ್ನು ತಡೆದು ಸುರಕ್ಷಿತ ಹೆರಿಗೆಯಾಗಿ ತಾಯಿ ಮತ್ತು ಮಗು ಆರೋಗ್ಯವಾಗಿರಲು ಈ ಯೋಜನೆ ಜಾರಿಗೊಳಿಸಲಾಗಿತ್ತು ಹೆರಿಗೆ ಅನಂತರ ಮಗುವಿಗೆ ಕನಿಷ್ಠ 6 ತಿಂಗಳವರೆಗೆ ತಾಯಿ ಹಾಲು ಕುಡಿಸಬೇಕು. ಅದಕ್ಕೆ ಪೂರಕವಾಗಿ ಪೌಷ್ಟಿಕಾಂಶ ಹೆಚ್ಚಿಸಲೆಂದು ಹೆರಿಗೆಯಾದ ಅನಂತರವೂ 300 ರೂ. ಪ್ರಸೂತಿ ಆರೈಕೆ ಕಾರ್ಯಕ್ರಮ ಮತ್ತು 700 ರೂ. ಗಳು ಜನನಿ ಸುರಕ್ಷಾ ಯೋಜನೆಯ ಮೊತ್ತ ಎಂದು ಒಟ್ಟು ಒಂದು ಸಾವಿರ ರೂ. ಗಳನ್ನು ನೀಡಲಾಗುತ್ತಿತ್ತು.
ಎರಡು ವರ್ಷದಿಂದ ಇಲ್ಲ
ಪ್ರಸೂತಿ ಆರೈಕೆಗೆ ಫಲಾನುಭವಿಗಳ ಖಾತೆಗೆ ನೇರ ಹಣ ಜಮೆ ಮಾಡಲು ಆರೋಗ್ಯ ಇಲಾಖೆಗೆ ರಾಜ್ಯ (ಸ್ಟೇಟ್ ಹೆಡ್) ನಿಧಿಯಿಂದಲೇ ಅನುದಾನ ನೀಡಲಾಗುತ್ತದೆ. ಆದರೆ ಎರಡು ವರ್ಷದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ. ಆದರೆ ಇತರ ಫಲಾನುಭವಿಗಳಿಗೆ ಸರಕಾರ ಅನುದಾನ ಒದಗಿಸಿಲ್ಲ.
ಮಾತೃವಂದನ ವಿಲೀನ
ಕೇಂದ್ರದ ಮಾತೃವಂದನ ಹಾಗೂ ರಾಜ್ಯದಲ್ಲಿ ಅಕ್ಟೋಬರ್ನಲ್ಲಿ ಅನುಷ್ಠಾನಕ್ಕೆ ಬಂದ ಮಾತೃಪೂರ್ಣ ಯೋಜನೆ ಜತೆ ಈಗ ಯೋಜನೆಯನ್ನು ವಿಲೀನಗೊಳಿಸಲಾಗಿದೆ. ಆದ್ದರಿಂದ ಮಾರ್ಚ್ ಅನಂತರ ಈ ಯೋಜನೆ ಮೂಲಕ ಹಣ ನೀಡಲು ಅವಕಾಶ ಇಲ್ಲ. ಆದರೆ ಈ ಕುರಿತು ಅಧಿಕೃತ ಸುತ್ತೋಲೆ ಇನ್ನೂ ಇಲಾಖೆಗಳಿಗೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಮಾತೃಪೂರ್ಣ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಊಟ ನೀಡಲಾಗುತ್ತಿದೆ. ಮಾತೃವಂದನ ಮೂಲಕ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಹಣ ಜಮೆ ಮಾಡಲಾಗುತ್ತದೆ.
ಮುಖ್ಯಮಂತ್ರಿ ಮಾತೃಶ್ರೀ
ಇದೀಗ ಹೊಸದಾಗಿ ಸಮ್ಮಿಶ್ರ ಸರಕಾರ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದು ಬಿಪಿಎಲ್ ಕುಟುಂಬದ ಗರ್ಭಿಣಿ ಹಾಗೂ ಬಾಣಂತಿಯರಿಗೆ 6 ಸಾವಿರ ರೂ. ನೇರ ಖಾತೆಗೆ ಜಮೆಯಾಗ
ಲಿದೆ. ಇದಕ್ಕಾಗಿ 350 ಕೋ.ರೂ. ಮೀಸಲಿಡಲಾಗಿದ.
ತಾಯಿಭಾಗ್ಯ ರದ್ದು
ಮೊದಲು ಪ್ರಸೂತಿ ಆರೈಕೆ ಹಾಗೂ ತಾಯಿ ಭಾಗ್ಯ ಎಂದು ಹಣ ನೀಡಲಾಗುತ್ತಿತು. ಆದರೆ ಮಾರ್ಚ್
ನಿಂದ ತಾಯಿಭಾಗ್ಯ ರದ್ದಾಗಿದೆ. ಪ್ರಸೂತಿ ಆರೈಕೆಗೆ ಮಾತ್ರ 1 ಸಾವಿರ ರೂ. ನೀಡಲಾಗುತ್ತದೆ. ಬಿಪಿಎಲ್ನವರು ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ 300 ರೂ. ಹಾಗೂ ಜನನಿ ಸುರಕ್ಷಾ ಯೋಜನೆಯಲ್ಲಿ 700 ರೂ. ನೀಡಲಾಗುತ್ತದೆ. 2007ರಲ್ಲಿ ಜಾರಿಗೆ ಬಂದ ಮಡಿಲು ಯೋಜನೆಯ ಇಲ್ಲ. ಹೆರಿಗೆ ಬಳಿಕ ಬಿಪಿಎಲ್ನವರಿಗೆ 22 ವಸ್ತುಗಳುಳ್ಳ ಮಡಿಲು ಕಿಟ್ನ್ನು ನೀಡಲಾಗುತ್ತಿತ್ತು. ಆದರೆ ಮಾರ್ಚ್ನಿಂದ ಅದು ಕೂಡಾ ರದ್ದಾಗಿದೆ.
1.5 ಕೋ.ರೂ. ಬಾಕಿ
ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 15,500 ಮಂದಿಗೆ ಹೆರಿಗೆಯಾಗುತ್ತದೆ. ಇದರಲ್ಲಿ ಶೇ.50ರಷ್ಟು ಬಿಪಿಎಲ್ನವರು. ಪ್ರಸೂತಿ ಭಾಗ್ಯವಷ್ಟೇ ಲೆಕ್ಕ ಹಿಡಿದರೂ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಗೆ ಅಂದಾಜು 1.5 ಕೋ.ರೂ.ಗಳಷ್ಟು ಹಣ ಬರಬೇಕಿದೆ.
ಎರಡೇ ಕಂತು ಬಂದದ್ದು
ನನ್ನ ಪತ್ನಿಗೆ ಪೂರ್ಣ ಪ್ರಮಾಣದ ಹಣ ಬಂದಿಲ್ಲ. ಕೇಳಿದರೆ ಅನುದಾನ ಇಲ್ಲ ಎನ್ನುತ್ತಾರೆ.
– ಸುರೇಶ್ ಕಲ್ಲಾಗರ, ಕುಂದಾಪುರ
ಗಮನಕ್ಕೆ ತರುತ್ತೇನೆ
ಫಲಾನುಭವಿಗಳಿಗೆ ನೀಡಲು ಹಣ ಬಿಡುಗಡೆಯಾಗಿಲ್ಲ. ಇದನ್ನು ಸರಕಾರದ ಗಮನಕ್ಕೆ ತರುತ್ತೇನೆ. ಮುಂದಿನ ದಿನಗಳಲ್ಲಿ ಈ ಯೋಜನೆ ಇರುವುದಿಲ್ಲ ಎಂದು ಮೌಖೀಕವಾಗಿ ಸೂಚನೆ ಬಂದಿದೆ.
– ಡಾ| ರೋಹಿಣಿ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ
*ಲಕ್ಷ್ಮಿ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ