ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ; ದುರಸ್ತಿಗೆ ಆಗ್ರಹ
Team Udayavani, Feb 6, 2020, 5:20 AM IST
ಉಡುಪಿ: ಕುಂಜಿಬೆಟ್ಟು ರಾ.ಹೆ. 169 ಎಯಿಂದ ನೇರವಾಗಿ ಎಂಜಿಎಂ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಹಾಳಾಗಿ ವರ್ಷ ಕಳೆದಿದೆ. ಇದೀಗ ಸ್ಥಳೀಯರು ರಸ್ತೆ ದುರಸ್ತಿಗಾಗಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.
ಈ ಕೂಡು ರಸ್ತೆಯನ್ನು ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಅಗೆಯಲಾಗಿತ್ತು. ಇದರಿಂದಾಗಿ ಈ ರಸ್ತೆ ರಾ.ಹೆ. 169ಎ ಮತ್ತು ನಗರಸಭೆ ರಸ್ತೆ ನಡುವಿನ ಸಂಪರ್ಕ ಕಳೆದು ಹೋಗಿದೆ. ಕಾಮಗಾರಿ ಮುಗಿದು ವರ್ಷಗಳು ಕಳೆದರೂ ದುರಸ್ತಿಗೊಳಿಸುವ ಕಾರ್ಯಕ್ಕೆ ರಾ.ಹೆ. ಇಲಾಖೆ ಹಾಗೂ ಗುತ್ತಿಗೆದಾರ ಸಂಸ್ಥೆ ಕೈ ಹಾಕಿಲ್ಲ.
ಗಡ್ಕರಿಗೆ ಟ್ವೀಟ್ ಅಭಿಯಾನ
ಸ್ಥಳೀಯ ನಿವಾಸಿಗಳು ಇದೀಗ ರಾ.ಹೆ. ಇಲಾಖೆಯ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟ್ವೀಟ್ ಅಭಿಯಾನವನ್ನು ಆರಂಭಿಸುವ ಚಿಂತನೆ ನಡೆಸುತ್ತಿದ್ದಾರೆ.
ಗುಂಡಿಗಳ ಕೊಂಪೆ!
ಬಿಎಡ್, ಯು.ಪಿ.ಎಂ.ಸಿ., ಶಾರದಾ ವಸತಿ, ಕಾನೂನು ಕಾಲೇಜು ಸೇರಿದಂತೆ ಹಲವಾರು ವಸತಿ ಸಮುಚ್ಚಯಗಳು ಈ ಮಾರ್ಗದಲ್ಲಿ ಇದೆ. ಪ್ರತಿನಿತ್ಯ ಕನಿಷ್ಠ 4ರಿಂದ 5 ಸಾವಿರ ಜನರು ಸಂಚರಿಸುವ ರಸ್ತೆ ಇದಾಗಿದೆ.
ದೊಡ್ಡಣಗುಡ್ಡೆ , ಮೂಡುಸಗ್ರಿ ಮಾತ್ರವಲ್ಲದೆ ಪೆರಂಪಳ್ಳಿ ಸಂಪರ್ಕಿಸುವ ಪ್ರಧಾನ ಕೊಂಡಿಯಾಗಿದೆ. ಆದರಿಂದ ಶೀಘ್ರದಲ್ಲಿ ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅಪಘಾತ ಹೆಚ್ಚಳ
ಉಡುಪಿ -ಮಣಿಪಾಲ ರಸ್ತೆಯಿಂದ ಬಿಎಡ್ ಕಾಲೇಜು, ಎಸ್ಆರ್ಎಸ್ ಕಡೆಗೆ ತೆರಳುವ ಮಾರ್ಗದ ತಿರುವಿನಲ್ಲಿ ಭಾರೀ ಗಾತ್ರದ ಹೊಂಡಗಳಿರುವುದರಿಂದ ಅದನ್ನು ತಪ್ಪಿಸಲು ವಾಹನಗಳು ಸುದೀರ್ಘವಾದ ತಿರುವನ್ನು ಪಡೆಯುತ್ತವೆ. ಇದರ ಪರಿಣಾಮವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಮಣಿಪಾಲದ ಕಡೆಗೆ ಹೋಗುವವರು ತಬ್ಬಿಬ್ಬು ಆಗುತ್ತಾರೆ. ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರಾದ ಶ್ರೀನಿವಾಸ್ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
ಅನ್ಹ್ಯಾಪಿ ಸಂದೇಶ
ಕುಂಜಿಬೆಟ್ಟು ಪರಿಸರದ ಎಂಜಿಎಂ ಮೈದಾನದಲ್ಲಿ ಫೆ.7,8 ರಂದು ಬ್ರಹ್ಮಕುಮಾರಿ ಅವರ “ದ ಕೀ ಟೂ ಯೂವರ್ ಹ್ಯಾಪಿ ಹೋಮ್’ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರು ಸಂಚಾರಕ್ಕೆ ಯೋಗ್ಯವಲ್ಲದ ಈ ರಸ್ತೆಯಲ್ಲಿ ತೆರಳಬೇಕಾಗಿದೆ.
ಇದರಿಂದಾಗಿ ಕಾರ್ಯಕ್ರಮಕ್ಕೆ ದುಃಖದಿಂದ ಸಾಗಿ ಸಂತೋಷ ಪಡೆಯಬೇಕಾಗಿದೆ (ಆನ್ಹ್ಯಾಪಿ) ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಪರ್ಕ ರಸ್ತೆಗೆ 1 ಕೋ.ರೂ. ಅಗತ್ಯ
ಕಲ್ಸಂಕ- ಮಣಿಪಾಲ ರಾ.ಹೆ. 169ಎ ಅಗಲೀಕರಣದಿಂದ ಕಲ್ಸಂಕದಿಂದ ಮಣಿಪಾಲದ ವರೆಗೆ ಹೆದ್ದಾರಿಯಿಂದ ವಿವಿಧ ನಗರಗಳಿಗೆ ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಸಂಪರ್ಕ ನಿರ್ಮಿಸಲು 1 ಕೋ.ರೂ. ಅಗತ್ಯವಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ.
-ಕೆ. ರಘುಪತಿಭಟ್, ಶಾಸಕ, ಉಡುಪಿ.
ರಾ.ಹೆ. ಪಕ್ಕದ ಸಂಪರ್ಕ ಕಡಿತವಾಗಿರುವುದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಈ ರಸ್ತೆ ದುರಸ್ತಿ ಕಾರ್ಯವನ್ನು ರಾ.ಹೆ. ಇಲಾಖೆ ಮಾಡಬೇಕಾಗಿದೆ.
-ಆನಂದ ಸಿ. ಕಲ್ಲೋಳಿಕರ್,
ಪೌರಾಯುಕ್ತ, ಉಡುಪಿ ನಗರಸಭೆ.
ದುರಸ್ತಿಗೆ ಕ್ರಮ ಕೈಗೊಳ್ಳಿ
ಪದೇ -ಪದೇ ವಾಹನಗಳು ಗುಂಡಿಗೆ ಬೀಳುತ್ತಿರುವುದರಿಂದ ವಾಹನದ ಬಿಡಿಭಾಗಗಳು ಜಖಂ ಆಗುತ್ತಿವೆ. ಅದರ ದುರಸ್ತಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ. ಸಂಬಂಧಪಟ್ಟವರು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕು.
-ರಾಜೇಂದ್ರ ಪ್ರಭು ,
ಸಂಗಮ್ ವ್ಯವಹಾರ್
ಕಾಮಗಾರಿ ಮುಗಿದರೂ
ಆಗದ ದುರಸ್ತಿ
ರಾ.ಹೆ. 169ಎ ಯಿಂದ ದೊಡ್ಡಣಗುಡ್ಡೆ , ಮೂಡುಸಗ್ರಿ ಮಾತ್ರವಲ್ಲ ಪೆರಂಪಳ್ಳಿ ಸಂಪರ್ಕಿಸುವ ಪ್ರಧಾನ ಕೊಂಡಿಯಾಗಿರುವ ಈ ಕೂಡು ರಸ್ತೆಯನ್ನು ರಾ.ಹೆ. 169ಎ ವಿಸ್ತರಣೆ ಸಂದರ್ಭದಲ್ಲಿ ಅಗೆದು ಹಾಕಲಾಗಿತ್ತು. ಇದೀಗ ಕಾಮಗಾರಿ ಮುಗಿದರೂ ದುರಸ್ತಿ ಮಾಡುವ ಗೋಜಿಗೆ ಹೋಗದೆ ಇರುವುದು ದುರದೃಷ್ಟಕರ.
-ಕೆ.ಎಸ್.ಎಂ. ಆಚಾರ್ಯ , ಸ್ಥಳೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು