ಡಿ. 27: ರಾಷ್ಟ್ರಪತಿ ಆಗಮನ ಹಿನ್ನೆಲೆ ಅಂಗಡಿಗಳನ್ನು ಮುಚ್ಚಲು ಆದೇಶ
Team Udayavani, Dec 20, 2018, 10:38 AM IST
ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ. 27ರಂದು ಉಡುಪಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಹಲವು ಕ್ರಮ ಕೈಗೊಂಡಿದ್ದಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಸನ್ಯಾಸಾಶ್ರಮ ಸ್ವೀಕಾರದ 80ನೇ ವರ್ಧಂತಿ ಅಂಗವಾಗಿ ಅವರ ಶಿಷ್ಯೆ, ಕೇಂದ್ರ ಸಚಿವೆ ಉಮಾಶ್ರೀಭಾರತಿ ಅವರು ಡಿ. 27ರಂದು ಶ್ರೀಕೃಷ್ಣ ಮಠದಲ್ಲಿ ಆಯೋಜಿಸುವ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 6ರಿಂದ 4 ಗಂಟೆಯವರೆಗೆ ಸಂಸ್ಕೃತ ಕಾಲೇಜು ಪಕ್ಕದ ಗೇಟ್ನಿಂದ ರಥಬೀದಿಯ ಸುತ್ತ ಮತ್ತು ರಾಜಾಂಗಣದ ಸುತ್ತಮುತ್ತ ಇರುವ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು; ಬೆಳಗ್ಗೆ 6ರಿಂದ ಅಪರಾಹ್ನ 3 ಗಂಟೆಯ ವರೆಗೆ ಸಾರ್ವಜನಿಕರಿಗೆ ಶ್ರೀಕೃಷ್ಣ ಮಠದ ಭೇಟಿ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ರಾಷ್ಟ್ರಪತಿಯವರ ಜತೆ ಪ್ರೊಟೊಕಾಲ್ ಪ್ರಕಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸರಕಾರಿ ಪ್ರವಾಸಿ ಬಂಗಲೆಯಲ್ಲಿ ರಾಷ್ಟ್ರಪತಿಯವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಐಬಿ ರಸ್ತೆಗಳು ಸಹಿತ ನಗರದ ರಸ್ತೆಗಳ ದುರಸ್ತಿ ನಡೆಯುತ್ತಿದೆ.