ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಪ್ರತಿಭಟನೆ
Team Udayavani, Jul 4, 2019, 5:55 AM IST
ಹೆಬ್ರಿ :ಹೆಬ್ರಿಯ ಇಂದಿರಾನಗರ ವಾರ್ಡ್ ಪೊಲೀಸ್ ವಸತಿ ಗೃಹದ ಹತ್ತಿರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಗ್ರಾಮಸ್ಥರು ಜು.3ರಂದು ಪ್ರತಿಭಟನೆ ನಡೆಸಿದರು.
ಮುಳ್ಳುಂಬ್ರಿ, ರಾಗಿಹಕ್ಲು, ಸೇಳಂಜೆ, ಅಡಾಲ್ಬೆಟ್ಟು, ವಿನೂ ನಗರ ಹಾಗೂ ಮಠದಬೆಟ್ಟುವಿನ ಗ್ರಾಮಸ್ಥರು ಇಂದಿರಾನಗರದಿಂದ ಹೆಬ್ರಿ ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮಹೇಶ್ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಹೆಬ್ರಿ ಗ್ರಾ.ಪಂ.ಗೆ ತೆರಳಿ ಅಧ್ಯಕ್ಷ ಹೆಚ್.ಕೆ.ಸುಧಾಕರ ಅವರಿಗೆ ಮನವಿ ಸಲ್ಲಿಸಿದರು.
ಉದ್ದೇಶಿತ ಸ್ಥಳದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡುವುದರಿಂದ ತ್ಯಾಜ್ಯ ಕೊಳೆತು ಅಂತರ್ಜಲ ಸೇರುತ್ತದೆ, ಸಮೀಪದಲ್ಲೇ ಸೀತಾನದಿಯೂ ಹರಿಯುವುದರಿಂದ ನೀರು ಕಲ್ಮಷಗೊಂಡು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಘಟಕವನ್ನು ಇಂದಿರಾನಗರ ವಾರ್ಡ್ನಿಂದ ಸ್ಥಳಾಂತರಿಸಲು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭ ಗಣಪತಿ ನಾಯಕ್, ಪ್ರವೀಣ್ ಬಲ್ಲಾಳ್, ಪಂ.ಮಾಜಿ ಸದಸ್ಯ ಕರುಣಾಕರ್ ರಾವ್, ಶ್ರೀಧರ ಹೆಗ್ಡೆ, ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ನಾಯ್ಕ, ನಾಗರಾಜ್, ಶ್ರೀಕಾಂತ್ ಹೆಗ್ಡೆ, ಸುನಿಲ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.