ಪುನಾರುಕೆರೆ: ರೈತರೊಂದಿಗೆ ಸಂವಾದ, ಮಾಹಿತಿ
Team Udayavani, Jun 22, 2019, 6:02 AM IST
ಬೆಳ್ಮಣ್: ಅಂತರ್ಜಲ ಕೊರತೆಯ ಬಗ್ಗೆ ಸಮರ್ಪಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದೆ ಜಲಕ್ಷಾಮದ ಭಾರೀ ಅನಾಹುತ ಎದುರಿಸಬೇಕಾದೀತು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಿಟ್ಟೆ ನವೀನಚಂದ್ರ ಜೈನ್ ಹೇಳಿದರು.
ಗುರುವಾರ ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯ ಪುನಾರುಕೆರೆ ಹಾಲು ಉತ್ಪಾದಕರ ಸಂಘದಲ್ಲಿ ಕಾರ್ಕಳದ ಭಾರತೀಯ ಕಿಸಾನ್ ಸಂಘ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಬೆಳ್ಮಣ್ ಗ್ರಾ.ಪಂ. ಸಹಭಾಗಿತ್ವದಲ್ಲಿ ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅವರ ಸಂಯೋಜನೆಯ “ಅಂತರ್ಜಲ ಹೆಚ್ಚಳ ನಮ್ಮ ಛಲ’ ಅಭಿಯಾನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರ್ಜಿ ಸ್ವೀಕಾರ
ರೇಷ್ಮಾ ಶೆಟ್ಟಿ ಮಾತನಾಡಿ, ಬೆಳ್ಮಣ್, ಬೋಳ, ನಿಟ್ಟೆ, ನಂದಳಿಕೆ, ಮುಂಡ್ಕೂರು, ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರಿಗೆ ಅಂತರ್ಜಲ ಹೆಚ್ಚಿಸುವ ಜಾಗೃತಿ ಹಾಗೂ ಪೂರಕ ಕೃಷಿ ಹೊಂಡ, ಇಂಗುಗುಂಡಿ, ಜಲ ಮರುಪೂರಣದ ವಿವಿಧ ಆಯಾಮಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅ ಧಿಕಾರಿಗಳು ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ಕೃಷಿ ಅಧಿಕಾರಿ ಉಳ್ಳಾಗಡ್ಡಿ, ತೋಟಗಾರಿಕಾ ಇಲಾಖೆಯ ಲಿಂಗಪ್ಪ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ತಂತ್ರಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವೇಂದ್ರ ನಾಯಕ್, ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಸಾಲಿಯಾನ್, ತಾ.ಪಂ. ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಎಪಿಎಂಸಿ ಸದಸ್ಯ ಮೋಹನದಾಸ್ ಶೆಟ್ಟಿ, ಪಿಡಿಒ ಪ್ರಕಾಶ್ ಉಪಸ್ಥಿತರಿದ್ದರು.
ಈ ಸಂದರ್ಭ ಹಡೀಲು ಗದ್ದೆಗಳಲ್ಲಿ ಮುಂಗಾರು ಭತ್ತದ ಬೆಳೆ, ಕೃಷಿ ಹೊಂಡ, ಇಂಗು ಗುಂಡಿ, ಮಳೆ ಕೊಯ್ಲು, ಫಸಲ್ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸ್ವೀಕಾರ ನಡೆಯಿತು. ಭಾರತೀಯ ಕಿಸಾನ್ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.