ಕಾಪು ತಾಲೂಕಿಗೆ ಶೀಘ್ರ ಗಜೆಟ್ ನೋಟಿಫಿಕೇಶನ್ : ಶಾಸಕ ಸೊರಕೆ
Team Udayavani, Aug 16, 2017, 7:40 AM IST
ಕಾಪು: ಈಗಾಗಲೇ ಬಜೆಟ್ನಲ್ಲಿ ಕಾಪು ತಾಲೂಕು ಘೋಷಣೆಯಾಗಿದ್ದು, ಶೀಘ್ರದಲ್ಲಿ ಗಜೆಟ್ ನೋಟಿಫಿಕೇಶನ್ ಕೂಡಾ ಆಗಲಿದೆ. ಆ ಬಳಿಕ ವೇಗವಾಗಿ ತಾಲೂಕು ರಚನೆಯ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಬಂಗ್ಲೆ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಿನಿ ವಿಧಾನಸೌಧಕ್ಕೆ ಕ್ರಿಯಾಯೋಜನೆ: ತಾಲೂಕು ಘೋಷಣೆಯಾಗಿರುವ ಕಾಪುವಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಮಿನಿ ವಿಧಾನಸೌಧ ಮಂಜೂರಾತಿ ಹಂತದಲ್ಲಿದೆ. 5 ಕೋಟಿ ರೂ. ವೆಚ್ಚದ ಕಾಪು ಪುರಸಭೆಯ ಮೊದಲ ಅಂತಸ್ತಿನ ಕಾಮಗಾರಿಯು ಭರದಿಂದ ನಡೆಯುತ್ತಿದ್ದು, ಡಿಸೆಂಬರ್ನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ ಎಂದರು.
ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುಮೋದನೆ : ಪುರಸಭಾ ವ್ಯಾಪ್ತಿಯ 9 ಕೆರೆಗಳು ಹಾಗೂ 5 ರುದ್ರಭೂಮಿಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ವಾರ್ಷಿಕ ವರ್ಷದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ 10 ಸಾವಿರ ಗಿಡ ನೆಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 4.5 ಕೋಟಿ ರೂ. ವೆಚ್ಚದ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಕರ್ನಾಟಕ ಜಲ ಮಂಡಳಿಯಿಂದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಹೆಜಮಾಡಿಯಲ್ಲಿ ಬಂದರು, ಬೆಳಪುವಿನಲ್ಲಿ
ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಒತ್ತು 140 ಕೋಟಿ ರೂ. ವೆಚ್ಚದ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುಮೋದನೆ ದೊರಕುವ ನಿರೀಕ್ಷೆಯಿದೆ. 130 ಕೋಟಿ ವೆಚ್ಚದಲ್ಲಿ ಬೆಳಪುವಿನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಕಳತ್ತೂರಿನಲ್ಲಿ ಮೊರಾರ್ಜಿ ವಸತಿ ಶಾಲೆ, ಎಲ್ಲೂರಿನಲ್ಲಿ ಐಟಿಐ ಸ್ಥಾಪನೆಯಾಗಲಿದ್ದು, ಕಾಪು ಕ್ಷೇತ್ರಕ್ಕೆ ಮೌಲಾನ ಆಜಾದ್ ಶಾಲೆ ಮಂಜೂರಾತಿಯಾಗಲಿದೆ. ಆ ಮೂಲಕ ಕಾಪು ಕ್ಷೇತ್ರವನ್ನು ಶೈಕ್ಷಣಿಕ ಅಭಿವೃದ್ಧಿ ಹೊಂದಿದ ಕ್ಷೇತ್ರವನ್ನಾಗಿ ಪರಿವರ್ತಿಸಲಾಗುವುದು ಎಂದರು.
ಕಾಪುವಿನ ಅಭಿವೃದ್ಧಿಗೆ ಎಲ್ಲರ ಸಹಕಾರ
ಹೊಸದಾಗಿ ರಚನೆಗೊಂಡಿರುವ ಪುರಸಭೆಗಳ ಪೈಕಿ ಕಾಪು ಪುರಸಭೆ ಪ್ರಥಮ ಸ್ಥಾನದಲ್ಲಿದ್ದು, ಇದಕ್ಕೆ ಸರ್ವರ ಸಹಕಾರವೇ ಕಾರಣವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಗೆ ಕ್ಷೇತ್ರದ ಹಿಂದಿನ ಶಾಸಕರುಗಳಾದ ಭಾಸ್ಕರ ಶೆಟ್ಟಿ, ವಸಂತ ವಿ.ಸಾಲ್ಯಾನ್ ಮತ್ತು ಲಾಲಾಜಿ ಆರ್. ಮೆಂಡನ್ ಅವರು ತಮ್ಮದೇ ಆದ ರೀತಿಯಲ್ಲಿ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ಕಾಪುವಿನ ಸಮಗ್ರ ಅಭಿವೃದ್ಧಿಗೆ ರಾಜಕೀಯ ರಹಿತವಾದ ಬೆಂಬಲದ ಅಗತ್ಯವಿದ್ದು, ಸಾರ್ವಜನಿಕರೂ ಉತ್ತಮ ರೀತಿಯ ಸಹಕಾರ ನೀಡಬೇಕು ಎಂದರು. ಕಾಪು ಪುರಸಭಾ ಅಧ್ಯಕ್ಷೆ ಕು| ಸೌಮ್ಯಾ, ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಕರ್ನಾಟಕ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ , ಕಂದಾಯ ನಿರೀಕ್ಷಕ ರವಿಶಂಕರ್, ಉಪ ತಹಶೀಲ್ದಾರ್ ಬಾಲಕೃಷ್ಣ ರೈ, ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಕಾಪು ಪುರಸಭೆ, ತಾ. ಪಂ., ಜಿ. ಪಂ., ಗ್ರಾ. ಪಂ. ಸದಸ್ಯರುಗಳು, ವಿವಿಧ ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಕಾಪು ಬಂಗ್ಲೆ ಮೈದಾನ ಗೆಳೆಯರ ಬಳಗದ ಸಂಚಾಲಕ ರವೀಂದ್ರ ಎಂ. ಕಾಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.