ಕೃಷಿಯಲ್ಲಿ ಮಾದರಿಯಾದ ಪದವೀಧರ ಕೃಷಿಕ ರಾಘವೇಂದ್ರ ನಾಯಕ್
ಮಲ್ಚಿಂಗ್ ಶೀಟ್ , ಗ್ರೋ ಬ್ಯಾಗ್ ತಂತ್ರಜ್ಞಾನ ಪರಿಚಯ
Team Udayavani, Dec 24, 2019, 7:45 AM IST
ಹೆಸರು : ರಾಘವೇಂದ್ರ ನಾಯಕ್
ಏನೇನು ಕೃಷಿ : ಮಲ್ಲಿಗೆ, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು,ತರಕಾರಿ.
ಎಷ್ಟು ವರ್ಷ: ಸುಮಾರು 30 ವರ್ಷಗಳಿಂದ
ಕೃಷಿ ಪ್ರದೇಶ: ಸುಮಾರು 3.5 ಎಕ್ರೆ
ಸಂಪರ್ಕ: 8861866920.
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಶಿರ್ವ: ಪದವಿ,ಉನ್ನತ ಶಿಕ್ಷಣ ಪಡೆದ ಯುವಕರಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ, ಕೃಷಿಯಿಂದ ಬದುಕು ದುಸ್ತರವಾಗುತ್ತಿದೆ,ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿಬರುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಬಿ.ಎ ಪದವೀಧರನಾಗಿದ್ದುಕೊಂಡು ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆದು ಇತರರಿಗೆ ಮಾದರಿಯಾದ ಕೃಷಿಕ ಕಾಪು ತಾಲೂಕಿನ ಶಿರ್ವ ಕಲ್ಲೊಟ್ಟು ರಾಘವೇಂದ್ರ ನಾಯಕ್. ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ 3.5 ಎಕ್ರೆ ಭೂಮಿಯಲ್ಲಿ ಒಂದಿಂಚೂ ಜಾಗವನ್ನು ಬಿಡದೆ ಸಂಪೂರ್ಣ ಕೃಷಿ ತೋಟವನ್ನಾಗಿ ಪರಿವರ್ತಿಸಿಕೊಂಡು ಕಳೆದ 30 ವರ್ಷಗಳಿಂದ ಕೃಷಿಯನ್ನೇ ತನ್ನ ಜೀವನಾಧಾರ ವಾಗಿರಿಸಿಕೊಂಡಿದ್ದಾರೆ. 2019-20ನೇ ಸಾಲಿನಲ್ಲಿ ಶಿರ್ವ ಹಾಗೂ ಆಸುಪಾಸಿನ ಗ್ರಾಮಗಳಿಗೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯೋಜನೆಯಡಿ ಜೀವಾಮೃತ, ಜಲಾಮೃತವನ್ನು ರೈತರಿಗೆ ಪರಿಚಯಿಸುವುದರ ಮೂಲಕ ರಾಸಾಯನಿಕ ಮುಕ್ತ ಕೃಷಿಗೆ ಪ್ರೇರೇಪಣೆ ನೀಡಿದ್ದಾರೆ. ನೀರಿನ ಮಿತ ಬಳಕೆಗೂ ಸಹಕಾರಿಯಾಗುವ ಮಲಿcಂಗ್ ಶೀಟ್ ಅಳವಡಿಸುವುದರ ಮೂಲಕ ಉತ್ತಮ ಇಳುವರಿ ತೆಗೆದು ಯಶಸ್ಸನ್ನು ಕಂಡಿದ್ದಾರೆ.
ಮಾದರಿ ಕೃಷಿ ಪಂಡಿತ
ರಾಘವೇಂದ್ರ ನಾಯಕ್ ತನ್ನ ಜಮೀನಿನಲ್ಲಿ ಮಲ್ಲಿಗೆ ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಯುವುದರೊಂದಿಗೆ ಮುಂಗಾರು ಹಂಗಾಮಿಗೆ ಭತ್ತ ಬೆಳೆಯುತ್ತಿದ್ದಾರೆ. ಹಾಲು ಬೆಂಡೆ, ಹರಿವೆ, ಗುಳ್ಳ, ಕೆಂಪುಗೆಣಸು, ತೊಂಡೆ, ಸೌತೆ, ಹೀರೆ, ಬಸಳೆಯನ್ನು ಬೆಳೆದು ಸರಾಸರಿ ತಿಂಗಳಿಗೆ 40 ರಿಂದ 45 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಕಲ್ಲೊಟ್ಟು ಪರಿಸರದ ಹೈನುಗಾರರಿಗಾಗಿ ಶಿರ್ವ ಹಾಲು ಉತ್ಪಾದಕರ ಘಟಕ ಪ್ರಾರಂಭಿಸಿ ಮಾದರಿ ಕೃಷಿ ಪಂಡಿತರೆನಿಸಿಕೊಂಡಿದ್ದಾರೆ.
ಗ್ರೋ ಬ್ಯಾಗ್ ತಂತ್ರಜ್ಞಾನ
ಕೃಷಿ ಮಾಡಲು ನಮಗೆ ಜಾಗವೇ ಇಲ್ಲ ಎನ್ನುವ ಕೃಷಿಕರಿಗಾಗಿ ಮನೆಯ ತಾರಸಿ ಅಥವಾ ಲಭ್ಯವಿದ್ದ ಜಾಗದಲ್ಲಿ ಮಲ್ಲಿಗೆ ಯಾ ಇನ್ನಿತರ ತರಕಾರಿ ಬೆಳೆ ಬೆಳೆಯುವಲ್ಲಿ ಹೊಸ ತಾಂತ್ರಿಕತೆಯ ಗ್ರೋ ಬ್ಯಾಗ್ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಚೆನ್ನೈನಿಂದ ತರಿಸಲಾದ 2, 11/2ಅಡಿ (ಎರಡು,ಒಂದೂವರೆ ಅಡಿ)ಸುತ್ತಳತೆಯ ಗ್ರೋಬ್ಯಾಗ್ನಲ್ಲಿ ಬೆಳೆ ಬೆಳೆಸುವ ಪ್ರಯೋಗವನ್ನು ನಡೆಸುತ್ತಿದ್ದಾರೆ. ಗ್ರೋಬ್ಯಾಗ್ನಲ್ಲಿ ಅರ್ಧದಷ್ಟು ಸಾವಯವ ಗೊಬ್ಬರ ತುಂಬಿಸಿ ನಾಟಿ ಮಾಡುವುದರಿಂದ ಕೀಟ ರೋಗ ಬಾಧೆ,ನೀರು ನಿರ್ವಹಣೆ,ಬೇರೆ ಮರಗಳ ಬೇರುಗಳಿಂದ ತೊಂದರೆಯನ್ನು ತಪ್ಪಿಸಬಹುದೆಂದು ಸಲಹೆ ನೀಡಿದ್ದಾರೆ.
ಮಣ್ಣಿನ ಸಂರಕ್ಷಣೆ
ಕೃಷಿ ಎನ್ನುವುದು ಇಂದು ನಾಳೆಯ ಯೋಚನೆ ಯಾಗಬಾರದು. ಭವಿಷ್ಯದ ಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಸಾವಯವ ವಿಧಾನ, ಲಘು ಪೋಷಕಾಂಶ ಬಳಕೆ, ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ಸಸ್ಯ ಸಂರಕ್ಷಣೆ, ಗೋಬರ್ ಗ್ಯಾಸ್, ಬಯೋ ಡೈಜೆಸ್ಟರ್, ಜೀವಾಣು ಹಾಗೂ ಹಸಿರೆಲೆ ಗೊಬ್ಬರ ಬಳಕೆ, ಪರ್ಯಾಯ ಬೆಳೆ ಅನುಸರಿಸುತ್ತಿದ್ದಾರೆ. ಪುನರ್ಪುಳಿ, ಗೇರು ಜ್ಯೂಸ್ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಹಲಸಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಟಿಲ್ಲರ್, ಬಯೋಮಾಸ್ ಡ್ರೈಯರ್, ಪವರ್ ಸ್ಪ್ರೆಯರ್, ಜೀಪ್, ಹುಲ್ಲು ಕತ್ತರಿಸುವ, ಕಳೆ ಕೊಚ್ಚುವ ಯಂತ್ರಗಳನ್ನು ಹೊಂದಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು
ಮಾದರಿ ಕೃಷಿಕನಿಗೆ ಅನೇಕ ಕೃಷಿ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. 2017-18ರಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, 2015ರಲ್ಲಿಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಗತಿಪರ ರೈತ ಪ್ರಶಸ್ತಿ,2015ರಲ್ಲಿ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ,2013ರಲ್ಲಿ ಭತ್ತದ ಬೆಳೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಕೃಷಿಕ ಪ್ರಶಸ್ತಿಯ ಜತೆಗೆ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಕೃಷಿಯ ಕುರಿತು ಮಾರ್ಗದರ್ಶನ
ಯುವಜನತೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಯಾಂತ್ರಿಕ ಮತ್ತು ತಾಂತ್ರಿಕತೆ ಅಳವಡಿಸಿಕೊಂಡು ರೈತ ಕ್ಷೇತ್ರ ಪಾಠಶಾಲೆಗಳ ಮೂಲಕ ಯುವಕರಿಗೆ, ಆಸಕ್ತ ಕೃಷಿಕರಿಗೆ ಮಾಹಿತಿ ನೀಡುತ್ತಿದ್ದೇನೆ. ವಿವಿಧ ಶಾಲೆಗಳಿಗೆ ಹೋಗಿ ರೈತ ಕೃಷಿ ಮಾಹಿತಿ ಶಿಬಿರ ನಡೆಸಿ ತರಕಾರಿ ಬೀಜ ವಿತರಣೆ ,ಶಾಲಾ ಕೈತೋಟ ರಚಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನದ ಮೂಲಕ ಪ್ರೇರಣೆ ನೀಡಲಾಗುತ್ತಿದೆ.ಅಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹುಮಾನವನ್ನು ವಿತರಿಸಲಾಗುತ್ತಿದೆ.ಸಾವಯವ ಪದ್ಧತಿಯ ಮೂಲಕ ಕೃಷಿ ಸರಳವೂ ಲಾಭದಾಯಕವೂ ಆಗಿದ್ದು ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಲಾಭಗಳಿಸಲು ಸಾಧ್ಯವಿದೆ.
-ಕಲ್ಲೊಟ್ಟು ರಾಘವೇಂದ್ರ ನಾಯಕ್,ಕೃಷಿಕ.
ಸತೀಶ್ಚಂದ್ರ ಶೆಟ್ಟಿ, ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ