ಬುರ್ಖಾ ಧರಿಸಿ ಪರಾರಿಯಾಗಲು ಯತ್ನ:ರಮ್ಯಾ ಶೆಟ್ಟಿ ಪೊಲೀಸ್ ವಶಕ್ಕೆ!
Team Udayavani, Jul 24, 2018, 10:44 AM IST
ಬೆಳ್ತಂಗಡಿ: ಶೀರೂರು ಮಠದ ಲಕ್ಷ್ಮೀ ವರ ತೀರ್ಥ ಶ್ರೀಪಾದರ ಅನುಮಾನಾಸ್ಪದ ಸಾವಿನಲ್ಲಿ ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿ ವಿಫಲವಾಗಿದ್ದು,ಪೊಲೀಸರು ಸೋಮವಾರ ಸಂಜೆ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಇತರ ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ರಮ್ಯಾ ಶೆಟ್ಟಿ ಕಾರು ವೇಣೂರಿನ ಅಳದಂಗಡಿ ಬಳಿ ಪಂಕ್ಚರ್ ಆಗಿದೆ. ಅನುಮಾನಾಸ್ಪವಾಗಿ ಗ್ಯಾರೇಜ್ ಬಳಿ ಕಾರು ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಕೂಡಲೇ ತೆರಳಿದ ವೇಣೂರು ಪೊಲೀಸರು ಪರಿಶೀಲನೆ ನಡೆಸಿದಾಗ ರಮ್ಯಾ ಶೆಟ್ಟಿ, ಜೊತೆಗಿದ್ದ ಮೂವರು ಮಹಿಳೆಯರನ್ನು ಮತ್ತು ಕಾರು ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಉಡುಪಿ ಪೊಲೀಸರ ವಶಕ್ಕೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯಿಂದ ಈ ಕುರಿತಾಗಿ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಾಗಿದ್ದು ,ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.