ರಸ್ತೆ ವಿಸ್ತರಣೆ ಕಾಮಗಾರಿ: ಕತ್ತಲಲ್ಲಿ ಮಣಿಪಾಲ
Team Udayavani, Apr 24, 2019, 6:36 AM IST
ಉಡುಪಿ: ನಗರದ ಹೃದಯ ರಸ್ತೆ, ವಾಣಿಜ್ಯ ವಹಿವಾಟು ನಡೆಯುವ ಮಣಿಪಾಲದ ರಾ.ಹೆ. 169ಎ ಹೆ¨ªಾರಿ, ಸಂಜೆಯಾದರೆ ಕತ್ತಲ ಕೂಪಕ್ಕೆ ಜಾರುತ್ತಿದೆ.
ರಸ್ತೆ ಕಾಮಗಾರಿ ಆರಂಭವಾಗಿ 5 ತಿಂಗಳು ಕಳೆಯುತ್ತಿದ್ದರೂ ಕೂಡ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ವ್ಯಾಪಾರ, ವಾಣಿಜ್ಯ, ವೈದ್ಯಕೀಯ, ಶಿಕ್ಷಣ ಕ್ಷೇತ್ರಗಳಿಗೆ ಪ್ರಸಿದ್ಧಿಯಾದ ಮಣಿಪಾಲದಲ್ಲಿ ಈ ಸಮಸ್ಯೆ ಇರುವುದರಿಂದ ವಿದ್ಯಾರ್ಥಿಗಳು ಸಹಿತ ಹಲವಾರು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ.
ಕಡಿಯಾಳಿಯಿಂದ ಮಣಿಪಾಲದ ಟೈಗರ್ ಸರ್ಕಲ್ವರೆಗಿನ ಬೀದಿದೀಪಗಳನ್ನು ತೆಗೆಯ ಲಾಗಿತ್ತು. ಪ್ರಸ್ತುತ ಸಿಂಡಿಕೇಟ್ ಸರ್ಕಲ್ನಿಂದ ಟೈಗರ್ ಸರ್ಕಲ್ವರೆಗೆ ಯಾವುದೇ ಬೀದಿದೀಪಗಳೂ ಉರಿಯುತ್ತಿಲ್ಲ. ಸಾರ್ವಜನಿಕರು ಮತ್ತು ವಾಹನ ಸವಾರರು ವಾಹನಗಳ ಬೆಳಕನ್ನೇ ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಈ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಭಾರಿ ಗಾತ್ರದ ವಾಹನಗಳು, ಖಾಸಗಿ, ಕೆಎಸ್ಆರ್ಟಿಸಿ ಬಸ್ಗಳು, ಕಾರು- ಆಟೋಗಳು ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಬೆಳಕು ಇಲ್ಲದ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಎಲ್ಲಿ ತಮ್ಮ ಮೇಲೆ ಘನ ವಾಹನಗಳು ಬಂದು ಬಿಡುತ್ತವೋ ಎಂಬ ಆತಂಕ ಸಾಗುವಂತಹ ಪರಿಸ್ಥಿತಿ ಇದೆ. ಕೂಡಲೇ ನಗರಸಭೆಯವರು ಬೀದಿದೀಪಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹ.
ಕುಡುಕರ ಕಾಟ
ಬಸ್ ತಂಗುದಾಣದಲ್ಲಿ ಕುಡುಕರು ರಾತ್ರಿ ವೇಳೆ ಮಲಗುತ್ತಿದ್ದು, ಇದೂ ಕೂಡ ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ.
5 ತಿಂಗಳಿನಿಂದ ಕತ್ತಲು!
ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆ ಸಾರ್ವ ಜನಿಕರನ್ನು ಕಾಡುತ್ತಿದೆ. ಹಗಲು ಹೊತ್ತು ಬ್ಲಾಕ್, ರಾತ್ರಿ ವೇಳೆ ಕತ್ತಲು ಇರುವುದರಿಂದ ಸವಾರರು ಸಹಿತ ಪಾದಚಾರಿಗಳು ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.
ಮೊಬೈಲ್ ಲೈಟೇ ಆಧಾರ
ರಾತ್ರಿ 12ರಿಂದ 1 ಗಂಟೆವರೆಗೂ ಇಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಓಡಾಡುತ್ತಾರೆ. ಮೊಬೈಲ್ ಲೈಟ್ ಹಾಕಿಯೇ ಹೆಚ್ಚಿನ ವಿದ್ಯಾರ್ಥಿಗಳು ನಡೆದು ಹೋಗುತ್ತಾರೆ. ನಗರ ಸಭೆ ಶೀಘ್ರ ಸರಿಪಡಿಸಲಿ.
-ರಾಘವೇಂದ್ರ, ಸ್ಥಳೀಯ ವ್ಯಾಪಾರಸ್ಥರು
ಕ್ರಮ ಅಗತ್ಯ
ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಇಲ್ಲಿನ ಬೀದಿ ದೀಪಗಳನ್ನು ತೆಗೆಯಲಾಗಿದೆ. ನಗರಸಭೆ ತತ್ಕ್ಷಣ ಕ್ರಮ ಕೈಗೊಳ್ಳಬೇಕು.
-ಮಂಜುನಾಥ್, ಎಂಜಿನಿಯರ್, ಹೆದ್ದಾರಿ ಇಲಾಖೆ
ಹೆದ್ದಾರಿ ಕಾಮಗಾರಿ ಬಳಿಕ ಅಳವಡಿಕೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈಗ ಇರುವ ಡಿವೈಡರ್ ಬದಲಿಸುವ ಕಾರಣ ಬೀದಿದೀಪಗಳನ್ನು ತೆಗೆಯಲಾಗಿದೆ. ಕಾಮಗಾರಿ ಮುಗಿದ ಅನಂತರ ಬೀದಿದೀಪಗಳನ್ನು ಅಳವಡಿಸಲಾಗುವುದು.
-ಆನಂದ್ ಕೆ., ಪೌರಾಯುಕ್ತರು, ಉಡುಪಿ ನಗರಸಭೆ
ಪ್ರಯಾಣಿಕರಿಗೆ ಸಂಕಷ್ಟ
ಬೇರೆ ಊರುಗಳಿಗೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಇಲ್ಲಿನ ಬಸ್ಸು ತಂಗುದಾಣಗಳಲ್ಲಿ ನಿಲ್ಲುತ್ತಾರೆ. ಸೂಕ್ತ ಬೀದಿದೀಪಗಳು ಇಲ್ಲದ ಕಾರಣ ಹಲವಾರು ಮಂದಿ ಸಮಸ್ಯೆ ಅನುಭವಿಸುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಅಭಿವೃದ್ಧಿ ನಿಟ್ಟಿನಲ್ಲಿ ಕತ್ತಲ ಭಾಗ್ಯ ಕರುಣಿಸಿದಂತಿದೆ.
-ಜೋಸೆಫ್, ಬಸ್ಸು ಚಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ