ಮರಳುಗಾರಿಕೆ ಸ್ಥಗಿತ: ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ
Team Udayavani, Mar 26, 2019, 6:31 AM IST
ಉಡುಪಿ: ಬದುಕಿಗೆ ಆಧಾರವಾಗಿದ್ದ ಮರಳುಗಾರಿಕೆ ನಿಂತಿರುವುದರಿಂದ ಜೀವನ ದುಸ್ತರವಾಗಿರುವುದರಿಂದ ಕುಟುಂಬ ಸಮೇತ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆೆ ಎಂದು ಕಟಪಾಡಿ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆಯಿಂದ ಕಳೆದ 4 ವರ್ಷಗಳಿಂದ ಮರಳುಗಾರಿಕೆ ಸ್ಥಗಿತವಾಗಿದೆ. ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಕೃತಕ ಮರಳಿನ ಅಭಾವ ಸೃಷ್ಟಿಸಿದ್ದಾರೆ. ಬ್ಯಾಂಕ್ ಸಾಲ ಮಾಡಿ ಟಿಪ್ಪರ್ ಲಾರಿಗಳನ್ನು ಖರೀದಿಸಿದ್ದು, ತಿಂಗಳಿಗೆ 30 ಸಾವಿರ ರೂ. ಸಾಲ ಪಾವತಿಸಬೇಕಿದೆ. ಇದೀಗ ಕೆಲಸವಿಲ್ಲದೆ ಸಾಲ ಮರುಪಾವತಿಯೂ ಅಸಾಧ್ಯವಾಗಿದೆ. ಏನು ಮಾಡಬೇಕು ಎಂದೇ ದಿಕ್ಕು ತೋಚದಂತಾಗಿದ್ದು, ದಯಾಮರಣ ನೀಡಲು ಮನವಿ ಮಾಡಲಾಗಿದೆೆ ಎಂದರು.
ಮರಳು ಹೋರಾಟ ಸಮಿತಿ ಕಾರ್ಯದರ್ಶಿ ಸತ್ಯರಾಜ್ ಬಿರ್ತಿ, ಸಮರ್ಥ ಕಟಪಾಡಿ, ಅನ್ಸರ್ ಅಹಮದ್ ಉಪಸ್ಥಿತರಿದ್ದರು.
ನಿರ್ಲಕ್ಷ್ಯ ಆರೋಪ
ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದಾಗ ಸಾಂತ್ವನ ಹೇಳಬೇಕಾದ ಜಿಲ್ಲಾಧಿಕಾರಿಗಳು ಬ್ಯಾಂಕ್ನಲ್ಲಿ ನೀವು ಮಾಡಿರುವ ಸಾಲಕ್ಕೆ ನೀವು ಕಂತು ಕಟ್ಟಲೇ ಬೇಕು ಎಂದು ನಿರ್ಲಕ್ಷ್ಯದ ಭಾವದಿಂದ ಹೇಳಿದ್ದಾರೆ. ಉನ್ನತ ಸ್ಥಾನದಲ್ಲಿ ಇರುವ ಅಧಿಕಾರಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಕಟಪಾಡಿ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ ಪ್ರಶ್ನಿಸಿದರು.