ಕನಕೋಡ, ಪಡುಕರೆ ಪರಿಸರದಲ್ಲಿ ಕಡಲ ಅಬ್ಬರ
ಸಂಸದೆ ಶೋಭಾ, ಶಾಸಕ ಮೆಂಡನ್ ಭೇಟಿ
Team Udayavani, Jun 11, 2019, 10:42 AM IST
ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕೋಡ, ಪಡುಕರೆ ಪರಿಸರದಲ್ಲಿ ಕಡಲಬ್ಬರ ಸೋಮವಾರವೂ ಮುಂದುವರಿದಿದ್ದು, ಬೃಹತ್ ಗಾತ್ರದ ತೆರೆಗಳು ತಡೆಗೋಡೆ ದಾಟಿ ರಸ್ತೆ ಮೇಲೆ ಹರಿಯುತ್ತಿವೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ರಸ್ತೆ ಹಾಳಾಗಿರುವ ಬಗ್ಗೆ ಸ್ಥಳೀಯರು ಗಮನಸೆಳೆದರು. ನದಿ ಕೊರೆತ ತೀವ್ರವಾಗಿದ್ದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದೆ, ಕಡಲು ಮತ್ತು ಹಿನ್ನೀರಿನ ಕೊರೆತ ಹೆಚ್ಚು ಬಾಧಿಸುತ್ತಿದೆ. ಕಡಲಿನ ಅಬ್ಬರವೂ ಜೋರಾಗಿಯೇ ಇದೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಸರಕಾರವೂ ಗಮನಹರಿಸಬೇಕು. ಪ್ರಕೃತಿ ವಿಕೋಪ ನಿಧಿ ಬಳಸಿಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎಂದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಮಾಜಿ ಜಿ.ಪಂ. ಸದಸ್ಯೆ ನಯನಾ ಗಣೇಶ್, ಗ್ರಾ.ಪಂ. ಸದಸ್ಯರಾದ ಕೃಷ್ಣ ಕೋಟ್ಯಾನ್, ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.