ದೇಶದ ಏಕತೆಗೆ ಮಧ್ವರ ಕೊಡುಗೆ: ನಿರ್ಮಲಾ ಸೀತಾರಾಮನ್
Team Udayavani, Jan 18, 2020, 11:53 PM IST
ಉಡುಪಿ: ಆಚಾರ್ಯ ಮಧ್ವರು ಭಕ್ತಿ ಸಿದ್ಧಾಂತದ ಮೂಲಕ ಭಾರತದ ಏಕತ್ವವನ್ನು ಸಾಧಿಸಲು ಪ್ರಯತ್ನಿಸಿದವರು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಶ್ರೀ ಅದಮಾರು ಮಠದ ಪರ್ಯಾಯ ದರ್ಬಾರ್ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀಕೃಷ್ಣ ಮಠದ ಕಾಸ್ಮಿಕ್ ಕಿರಣ
ನನಗೆ ಬಾಲ್ಯದಿಂದಲೂ ಉಡುಪಿಯ ಮಠಗಳ ಸಂಪರ್ಕ ಒಂದಲ್ಲ ಒಂದು ರೀತಿಯಲ್ಲಿ ಸಿಕ್ಕಿದೆ. ನನ್ನ ಮಾವ ಲಕ್ಷ್ಮೀನಾರಾಯಣ್ ಅವರು ಸಿಂಡಿಕೇಟ್ ಬ್ಯಾಂಕ್ನಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕಾರಣ ಇಲ್ಲಿಗೆ ಆಗಾಗ್ಗೆ ಬರುತ್ತಿದ್ದೆ. ಹೀಗಾಗಿ ಉಡುಪಿ ಶ್ರೀಕೃಷ್ಣ ಮಠದ ಕಾಸ್ಮಿಕ್ ಕಿರಣ ನನ್ನ ಮೇಲೆ ಬಿದ್ದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
16 ವರ್ಷಗಳ ಹಿಂದೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರ ಪರ್ಯಾಯ ಅವಧಿಯಲ್ಲಿ ಭೇಟಿಯಾಗಿದ್ದೆ. ಹಲವು ವರ್ಷಗಳಿಂದ ಸಂಪರ್ಕದಲ್ಲಿರುವ ಪೇಜಾವರ ಶ್ರೀಗಳು ದಿಲ್ಲಿಯಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ನಮ್ಮ ಮನೆಗೆ ಬಂದು ಆಶೀರ್ವದಿಸಿದ್ದರು ಎಂಬುದನ್ನು ಸಚಿವೆ ನಿರ್ಮಲಾ ನೆನಪಿಸಿಕೊಂಡರು.