ಶೌರ್ಯ ಪ್ರಶಸ್ತಿ ಗೌರವಧನ : ಎರಡು ವರ್ಷಗಳಿಂದ ಚಿಕ್ಕಾಸೂ ಇಲ್ಲ !
| 4 ದಶಕಗಳಿಂದ ಪೊಲೀಸ್ ಪತ್ನಿಯ ಹೋರಾಟ | 100 ರೂ.ಗಾಗಿ ಸುರತ್ಕಲ್ನಿಂದ ಕಲ್ಲಿಕೋಟೆಗೆ !
Team Udayavani, Jan 26, 2021, 7:45 AM IST
ಉಡುಪಿ: ಶೌರ್ಯಪ್ರಶಸ್ತಿ ಪ್ರದಾನದ ಸಂಭ್ರಮ ಒಂದೆಡೆಯಾದರೆ(ಗಣರಾಜ್ಯೋತ್ಸವ ದಿನ) ಇನ್ನೊಂದೆಡೆ ಮಹಿಳೆಯೊಬ್ಬರು ತಮ್ಮ ಪತಿಯ ಶೌರ್ಯ ಪ್ರಶಸ್ತಿಯ ಗೌರವಧನಕ್ಕಾಗಿ ನಾಲ್ಕು ದಶಕಗಳಿಂದ ಹೋರಾಡುತ್ತಿದ್ದಾರೆ !
ಸುರತ್ಕಲ್ನಲ್ಲಿ ರುವ ಕಾಸರಗೋಡು ಮೂಲದ ವಿಜಯಲಕ್ಷ್ಮಿಯವರ ಕಥೆಯಿದು. 1961ರಲ್ಲಿ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣೆಯಲ್ಲಿದ್ದಾಗ ನಡೆಸಿದ ಶೌರ್ಯ ಸಾಧನೆಗಾಗಿ ಬಾಲಕೃಷ್ಣ ನಾಯರ್ ಅವರಿಗೆ 1963ರಲ್ಲಿ ರಾಷ್ಟ್ರಪತಿಗಳ ಶೌರ್ಯಪ್ರಶಸ್ತಿ ಬಂದಿತ್ತು. ಶೌರ್ಯಪ್ರಶಸ್ತಿಗಾಗಿ ತಿಂಗಳಿಗೆ 100 ರೂ. ವಿಶೇಷ ಪುರಸ್ಕಾರ ಪಡೆಯುತ್ತಿದ್ದ ನಾಯರ್ 1988ರಲ್ಲಿ ನಿಧನ ಹೊಂದಿದರು. ಪತ್ನಿ ವಿಜಯಲಕ್ಷ್ಮೀ ಅವರಿಗೆ ಈ ಮೊತ್ತ ಏರಿರುವುದೂ ಗೊತ್ತಿರಲಿಲ್ಲ. ಅವರು ಗಂಡನಿಗೆ ಸಿಗಬೇಕಾದ ಗೌರವಧನಕ್ಕೆ 4 ದಶಕಗಳಿಂದ ಹೋರಾಡುತ್ತಿದ್ದಾರೆ.
ಎರಡು ಸಾಧನೆಗೆ ಬಂದ ಪ್ರಶಸ್ತಿ :
ನಾಯರ್ ಮಂಗಳೂರಿನ ಬಂದರು ಠಾಣೆಯಲ್ಲಿ ಎಸ್ಐ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಅನಂತರ ಹಂಪನಕಟ್ಟೆ, ಬದಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಸರಗೋಡಿನಲ್ಲಿದ್ದ ಕಾರಣ ಕೇರಳ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. 1961ರಲ್ಲಿಮಂಜೇಶ್ವರ ಠಾಣೆಯಲ್ಲಿದ್ದಾಗ ಬದಿಯಡ್ಕದ ಒಬ್ಬರ ಮನೆಗೆ ಡಕಾಯಿತ ಕಿಟ್ಟು ಅಗಸ ದಾಳಿ ನಡೆಸಲಿದ್ದಾನೆ ಎಂಬ ರಹಸ್ಯ ಮಾಹಿತಿಪಡೆದ ನಾಯರ್ ಪೊಲೀಸ್ ಮಾಹಿತಿದಾರ ಮಹಮ್ಮದ್ ಅವರೊಂದಿಗೆ ಧಾವಿಸಿದರು. ಸುಳಿವು ದೊರೆತ ಕಿಟ್ಟು ಗುಂಡು ಹಾರಿಸಿದಾಗ ಮಹಮ್ಮದರ ಕಣ್ಣಿಗೆ ಬಿದ್ದು ಸ್ಥಳದಲ್ಲೇ ಕುಸಿದರು. ಪಿಸ್ತೂಲು ಧಾರಿಯಾಗಿದ್ದ ಕಿಟ್ಟುವಿನ ಮೇಲೆ ಮುಗಿಬಿದ್ದ ನಾಯರ್ ಆತನನ್ನು ದಸ್ತಗಿರಿ ಮಾಡಿದ್ದಲ್ಲದೆ ಮಹಮ್ಮದರನ್ನು ಬೆಳಗ್ಗಿನ ಜಾವ ಮೋಟಾರ್ ಸೈಕಲ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಬದುಕಿಸಿದರು. ಇವೆರಡು ಸಾಧನೆಗೆ ನಾಯರ್ 1963ರಲ್ಲಿ ರಾಷ್ಟ್ರಪತಿಗಳ ಶೌರ್ಯಪ್ರಶಸ್ತಿಗೆ ಭಾಜನರಾದರು.
ನೂರು ರೂ.ಗೆ ನೂರಾರು ಖರ್ಚು! :
ಕೇಂದ್ರ ಸರಕಾರ ರೂಪಿಸಿದ ನಿಯಮದಂತೆ ರಾಷ್ಟ್ರಪ್ರಶಸ್ತಿ ಪಡೆದ ಸೈನಿಕರು ಅಥವಾ ಪೊಲೀಸರು ವೇತನದೊಂದಿಗೆ ವಿಶೇಷ ನಗದು ಬಹುಮಾನ ಪಡೆಯುತ್ತಾರೆ. ನಿವೃತ್ತರಾದರೂ ಸಿಗುತ್ತದೆ, ನಿಧನ ಬಳಿಕ ಪತ್ನಿಗೂ ಸಿಗುತ್ತದೆ. ನಾಯರ್ 1981ರಲ್ಲಿ ನಿವೃತ್ತರಾದರು. 1961 ರಿಂದ 75ರ ವರೆಗೆ 25 ರೂ. ಪುರಸ್ಕಾರ ಪಡೆ
ಯುತ್ತಿದ್ದ ನಾಯರ್ ಜೀವಿತಾವಧಿವರೆಗೆ ತಿಂಗಳಿಗೆ 100 ರೂ. ಪಡೆಯುತ್ತಿದ್ದರು. 1988ರಲ್ಲಿ ಪತಿಯ ನಿಧನದ ಬಳಿಕ ಪತ್ನಿ ಸುರತ್ಕಲ್ನಲ್ಲಿ ನೆಲೆಸಿದರು. ಪ್ರಶಸ್ತಿ ಬಾಬ್ತು ಸಿಗುವ 100 ರೂ. ಪಡೆಯಲು ಪ್ರತಿ ತಿಂಗಳೂ ಕಲ್ಲಿಕೋಟೆಯ ಕೊಯಿಲಾಂಡಿಗೆ ಹೋಗುತ್ತಿದ್ದರು. ಈ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಮಾಡಿದ ವಿನಂತಿ ವ್ಯರ್ಥವಾಗಿತ್ತು. ಹಾಗಾಗಿ 5-6 ತಿಂಗಳಿಗೊಮ್ಮೆ ಕೊಯಿಲಾಂಡಿಗೆ ಹೋಗುವುದು ಅನಿವಾರ್ಯವಾಗಿದೆ.
ಗೊತ್ತೇ ಆಗದ ಮೊತ್ತ ಏರಿಕೆ :
ಈ ಮೊತ್ತ ನಾಲ್ಕೈದು ವರ್ಷಗಳಿಗೊಮ್ಮೆ ಪರಿಷ್ಕೃತಗೊಳ್ಳುತ್ತದೆ ಎಂಬ ವಿಷಯ ಗೊತ್ತಾದಾಗ ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಕಲೆ ಹಾಕಿದರು. 100 ರೂ. ಪುರಸ್ಕಾರ 1997ರಿಂದ 200 ರೂ.ಗೆ, 2013ರಲ್ಲಿ 3,000 ರೂ.ಗೆ ಏರಿತ್ತು. ಆದರೆ ವಿಜಯಲಕ್ಷ್ಮೀ ಅವರಿಗೆ ಸಿಗುತ್ತಿದ್ದುದು 100 ರೂ. ಮಾತ್ರ. ಎರಡು ವರ್ಷಗಳಿಂದ ಅದೂ ಸಿಕ್ಕಿಲ್ಲ.
ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನವನ್ನು ಸಂಪರ್ಕಿಸಿದಾಗ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗರು ಕಾನೂನು ಹೋರಾಟ ಆರಂಭಿಸಿದ್ದಾರೆ. ಸೋಮವಾರ ಉಡುಪಿಯ ಕಚೇರಿಯಿಂದಲೇ ತಿರುವನಂತಪುರದ ಪತ್ರಕರ್ತರೊಂದಿಗೆ ಆನ್ಲೈನ್ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಉಡುಪಿಯಲ್ಲಿಯೂ ಪ.ಗೋಷ್ಠಿ ಡೆಸಿದರು. ವಿಜಯಲಕ್ಷ್ಮೀ ಮತ್ತು ಪುತ್ರಿ ಬೀನಾ ಅವರು ತಮಗೆ ಆದ ಕಹಿ ಅನುಭವಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು.
ಇದುವರೆಗೆ ಸುಮಾರು 2 ಲ.ರೂ. ಖರ್ಚಾಗಿದೆ. ನ್ಯಾಯಾಲಯದಲ್ಲಿ ದಾವೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯೂ ಇಲ್ಲ. – ವಿಜಯಲಕ್ಷ್ಮೀ, ಬೀನಾ
ನಾಯರ್ ಅವರಿಗೆ ಪೊಲೀಸ್ ಆಯುಕ್ತರ ಹುದ್ದೆ ಸಿಗಬೇಕಿತ್ತಾದರೂ ರಾಜಕಾರಣಿಗಳಿಂದಾಗಿ ಒಂದೇ ಒಂದು ಭಡ್ತಿ ದೊರಕಿ ಸರ್ಕಲ್ ಇನ್ಸ್ಪೆಕ್ಟರ್ ಆದರು. 2016ರಿಂದ ಶೌರ್ಯ ಪ್ರಶಸ್ತಿಯ ಗೌರವ ಧನವನ್ನು ತಿಂಗಳಿಗೆ 6,000 ರೂ.ಗೆ ಏರಿಸಲಾಗಿದೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ಮೆಟ್ಟಿಲು ಏರುವುದು ಕಾನೂನಿನ ಬಗ್ಗೆ ಗೊಂದಲಗಳಿದ್ದಾಗ. ನಾವೀಗ ಕೇರಳಾದ್ಯಂತ ಸಾರ್ವಜನಿಕ ಅಭಿಪ್ರಾಯ ರೂಪಿಸಲು ತಿರುವನಂತಪುರ, ಕಲ್ಲಿಕೋಟೆಯ ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳನ್ನು ಸಂಪರ್ಕಿಸಿದ್ದೇವೆ. ಇಂತಹ ಪ್ರಕರಣಗಳು ಬೇರೆ ಎಷ್ಟಿವೆ ಎಂದು ಗೊತ್ತಿಲ್ಲ. ಕೆಲವು ಸಂಸದರ ಗಮನಕ್ಕೂ ತರಲಾಗಿದೆ. ಬಡ್ಡಿಸಹಿತ ಬಾಕಿ ಹಣ ಬರುವವರೆಗೆ ಬಿಡುವುದಿಲ್ಲ. – ಡಾ| ರವೀಂದ್ರನಾಥ ಶಾನುಭಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ