ಸಂಪುಟ ವಿಸ್ತರಣೆ ಶವಪೆಟ್ಟಿಗೆ ಕೊನೆ ಮೊಳೆ: ಶೋಭಾ
Team Udayavani, Jun 11, 2019, 10:03 AM IST
ಉಡುಪಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯು ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ಸೋಮವಾರ ಸಂಸದರ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೀಗೆ ಹೇಳಿದರು.
ಜಿಂದಾಲ್ಗೆ ಭೂಮಿ: ವಿರೋಧ
ಜಿಂದಾಲ್ ಕಂಪೆನಿಗೆ 3,666 ಎಕ್ರೆ ಭೂಮಿಯನ್ನು ಕ್ರಯ ಪತ್ರ ಮಾಡಿಕೊಡುವ ರಾಜ್ಯ ಸರಕಾರದ ನಿರ್ಣಯ ಖಂಡನೀಯ. ಇದುವರೆಗೆ ಲೀಸ್ (ಬಾಡಿಗೆ) ಆಧಾರದಲ್ಲಿ ಭೂಮಿ ನೀಡಲಾಗುತ್ತಿತ್ತು. ಇಂತಹ ಭೂಮಿಯನ್ನು ಲೀಸ್ ಅವಧಿ ಬಳಿಕ ವಾಪಸು ಪಡೆಯಬಹುದು. ಆದರೆ ಜಿಂದಾಲ್ಗೆ ಕ್ರಯ
ಪತ್ರ ಮಾಡಿಕೊಡುವುದರ ಹಿಂದೆ ಕಾಣದ ಕೈಗಳ, ಕಮಿಷನ್ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದರು.
8 ತಿಂಗಳಾದರೂ ಅಧಿಕಾರವಿಲ್ಲ
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು 8 ತಿಂಗಳಾದರೂ ಅಧಿಕಾರ ವಹಿಸಿಕೊಳ್ಳಲಾಗುತ್ತಿಲ್ಲ. ಉತ್ಛ ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿ ತಡೆಯಾಜ್ಞೆ ತೆರವು ಗೊಳಿಸುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ. ಬರ ತಾಂಡವವಾಡುತ್ತಿದ್ದರೂ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಸರಕಾರ ವಿಸರ್ಜಿಸಬೇಕು ಇಲ್ಲವೇ ಜನ ಪರವಾಗಿ ಕಾರ್ಯಾಚರಿಸಬೇಕು ಎಂದು ಆಗ್ರಹಿಸಿ ಜೂ. 14ರಂದು ಬಿಜೆಪಿ ಎಲ್ಲೆಡೆ ಹೋರಾಟ ನಡೆಸಲಿದೆ. ಇದರಲ್ಲಿ ಜಿಂದಾಲ್ಗೆ ಭೂಮಿ ಮಾರಾಟ ಮಾಡುವುದೂ ಸೇರಿದೆ ಎಂದು ಶೋಭಾ ಹೇಳಿದರು.
ಟ್ಯಾಂಕರ್ ನೀರೂ ಇಲ್ಲ
ಜಿಲ್ಲೆಯ ಮರಳು ಸಮಸ್ಯೆ ಪರಿಹಾರಕ್ಕೆ ಮೂರ್ನಾಲ್ಕು ತಿಂಗಳುಗಳಿಂದ ಪ್ರಯತ್ನಿಸಿದೆವು. ರಾಜ್ಯ ಸರಕಾರವಾಗಲೀ ಜಿಲ್ಲಾಡಳಿತವಾಗಲೀ ಪೂರಕವಾಗಿ ಸ್ಪಂದಿಸಲಿಲ್ಲ. ತಿಂಗಳಿನಿಂದ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಲು ಒತ್ತಾಯಿಸುತ್ತಲೇ ಇದ್ದೆವು. ಇಂದು ನಗರಸಭೆಯಿಂದ ಒಂದು ಟ್ಯಾಂಕರ್ ನೀರು ಸರಬರಾಜು ಕೂಡ ಆಗಲಿಲ್ಲ ಎಂದು ಎಂದು ಶೋಭಾ ಆರೋಪಿಸಿದರು.
ಪಕ್ಷ ಸಂಘಟನೆಗೆ ಆದ್ಯತೆ
ರಾಜ್ಯದಲ್ಲಿ ಬಿಜೆಪಿ ಸರಕಾರ ಸ್ಥಾಪನೆಯಾಗುವ ತನಕ ಬಿಜೆಪಿಯನ್ನು ಸಂಘಟಿತವಾಗಿ ಕಟ್ಟುವ ಕೆಲಸವನ್ನು ನಾಯಕರು ಮಾಡಲಿದ್ದಾರೆ. ಇದರಲ್ಲಿ ತಾನೂ ಸಮಯ ಕೊಟ್ಟು ಕೆಲಸ ಮಾಡುತ್ತೇನೆ ಎಂದರು.
ಅಭಿವೃದ್ಧಿ ಕೆಲಸ
ಕೇಂದ್ರದಿಂದ ಎಲ್ಲ ಸವಲತ್ತುಗಳನ್ನು ಕೊಡಿಸುವ ಯತ್ನ ಮಾಡುವೆ ಎಂದು ಶೋಭಾ ಹೇಳಿದರು. ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದರು.