ಹೆಬ್ರಿ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆ
ಔಷಧವೂ ಇಲ್ಲ, ಚಿಕಿತ್ಸೆಯೂ ಇಲ್ಲ; ರೋಗಿಗಳ ಪರದಾಟ
Team Udayavani, Jan 23, 2020, 5:10 AM IST
ತಿಂಗಳಿಗೆ ಸುಮಾರು 4ರಿಂದ 5 ಸಾವಿರ ರೋಗಿಗಳು ಭೇಟಿ ನೀಡುವ ಹೆಬ್ರಿ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಅಗತ್ಯ ಇದೆ. ಬಿಪಿ, ಸಕ್ಕರೆ ಕಾಯಿಲೆಗೆ ಔಷಧ ಇಲ್ಲವಾಗಿದೆ. ಮರಣೋತ್ತರ ಪರೀಕ್ಷೆ ಮತ್ತಿತರ ಸೇವೆಗಳಿಗೂ ತೊಡಕುಂಟಾಗುತ್ತಿದೆ. ಈ ಸಮಸ್ಯೆ ನಿವಾರಣೆಯಾದಲ್ಲಿ ಜನರಿಗೆ ಬಹಳ ಅನುಕೂಲ.
ಹೆಬ್ರಿ: ತಾಲೂಕು ಕೇಂದ್ರವಾಗಿ ಮಾರ್ಪಟ್ಟರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ಕೊರತೆಯಿಂದ ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಬಸ್ಸು ತಂಗುದಾಣ ಸಮೀಪ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯ ಕೇಂದ್ರ 2 ವರ್ಷಗಳ ಹಿಂದೆ ಸುಸಜ್ಜಿತ ಕಟ್ಟಡಕ್ಕೆ ವರ್ಗಾವಣೆಯಾಗಿದೆ. ಆದರೆ ಯಾವುದೇ ಆಧುನಿಕ ಚಿಕಿತ್ಸಾ ಸೌಲಭ್ಯಗಳಿಲ್ಲ.
ಹೆಚ್ಚುತ್ತಿರುವ ರೋಗಿಗಳು
ಪ್ರಸ್ತುತ ಹೆಬ್ರಿ ಆರೋಗ್ಯ ಕೇಂದ್ರಕ್ಕೆ ತಿಂಗಳಿಗೆ ಸುಮಾರು 4 ಸಾವಿರದಿಂದ 5 ಸಾವಿರ ರೋಗಿಗಳು ಬರುತ್ತಿದ್ದಾರೆ. ಆದರೆ ಇಲ್ಲಿ ಅಗತ್ಯ ಔಷಧ ಲಭ್ಯವಿಲ್ಲ. ಇದರಿಂದ ಅನ್ಯ ಆಸ್ಪತ್ರೆ, ಕ್ಲಿನಿಕ್ ಆಶ್ರಯಿಸಬೇಕಾಗಿದೆ ಅಥವಾ ಚಿಕಿತ್ಸೆ ಸಿಗದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಲ್ಕು ಹುದ್ದೆಗಳು ಖಾಲಿ
ಆಡಳಿತ ವೈದ್ಯಾಧಿಕಾರಿ, ಮಕ್ಕಳ ತಜ್ಞರು, ಹೆರಿಗೆ ತಜ್ಞರು, ಅರಿವಳಿಕೆ ತಜ್ಞರು ಹೀಗೆ ಒಟ್ಟು 4 ಖಾಯಂ ವೈದ್ಯರ ಹುದ್ದೆ ಖಾಲಿ ಇವೆ. ಈ ಹಿಂದೆ ಇಲ್ಲಿ ವೈದ್ಯಾಧಿಕಾರಿಗಳಾಗಿದ್ದವರು ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಇನ್ನೂ ಕೂಡ ಖಾಯಂ ವೈದ್ಯಾಧಿಕಾರಿಗಳು ನೇಮಕಗೊಂಡಿಲ್ಲ. ಇದರಿಂದ ಮರಣೋತ್ತರ ಪರೀಕ್ಷೆ ಸಹಿತ ಆಡಳಿತ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.
ಮಕ್ಕಳ ವೈದ್ಯರು ಅತಿ ಅಗತ್ಯ
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ಉಪಕೇಂದ್ರಗಳಿದ್ದು, ತಾಲೂಕು ಆದ ಬಳಿಕ 16 ಗ್ರಾ.ಪಂ. ವ್ಯಾಪ್ತಿಗಳು ಒಳಪಡುತ್ತವೆ. ಇಲ್ಲಿ ತೀರ ಅಗತ್ಯವಿರುವ ಮಕ್ಕಳ ವೈದ್ಯರಿಲ್ಲ ಎಂಬ ಕೊರತೆ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಈ ಬಗ್ಗೆ ಇನ್ನೂ ಸರಕಾರ ಆಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳಪೆ ಕಾಮಗಾರಿ?
2 ವರ್ಷಗಳ ಹಿಂದೆ ಕೋಟಿ ಹಣ ಖರ್ಚುಮಾಡಿ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ. ಆದರೆ ಇಲ್ಲಿನ ಕೆಲವು ಬಾಗಿಲುಗಳ ಚಿಲಕಗಳು ಕಿತ್ತು ಹೋಗಿವೆ. ಆಪರೇಷನ್ ಥಿಯೇಟರ್ನ ಟೈಲ್ಸ್ ಗಳು ಕಿತ್ತು ಹೋಗಿದ್ದು, ಪುನಃ ಅಳವಡಿಸಲಾಗಿದೆ.
ಬಿಪಿ, ಶುಗರ್ ಔಷಧವಿಲ್ಲ
ಆರೋಗ್ಯ ಕೇಂದ್ರಕ್ಕೆ ಬರುವವರು ಹೆಚ್ಚಾಗಿ ಬಡವರು. ಬಿಪಿ, ಸಕ್ಕರೆ ಕಾಯಿಲೆಗೆ ಉಚಿತ ಔಷಧಕ್ಕಾಗಿ ಅವರು ಇಲ್ಲಿಗೆ ಬಂದರೆ ಅದೂ ಸಿಗದಿರುವ ಪರಿಸ್ಥಿತಿ ಇದೆ. ಅದನ್ನೂ ಅವರು ಮೆಡಿಕಲ್ನಿಂದ ಹಣಕೊಟ್ಟು ಖರೀದಿಸಬೇಕಾಗಿದೆ.
ಖಾಯಂ ವೈದ್ಯರಿಲ್ಲದ ಕಾರಣ ವಾರದಲ್ಲಿ ಬೇರೆ ಆರೋಗ್ಯ ಕೇಂದ್ರದಿಂದ ನಿಯೋಜನೆಯ ಆಧಾರದಲ್ಲಿ 2 ದಿನಗಳಿಗೊಮ್ಮೆ ವೈದ್ಯರು ಬದಲಾಗುತ್ತಾರೆ. ಮೊದಲ ದಿನ ಬಂದ ರೋಗಿ ಚಿಕಿತ್ಸೆ ಪಡೆದು ಮತ್ತೆ 2 ದಿನ ಕಳೆದು ಬರುವಾಗ ವೈದ್ಯರು ಬದಲಾಗುತ್ತಾರೆ. ಇದರಿಂದ ಅವರು ಮತ್ತೆ ಖಾಯಿಲೆ ವಿವರ ಹೇಳಬೇಕಿದ್ದು, ಚಿಕಿತ್ಸೆಯೂ ಸಮರ್ಪಕವಾಗದೆ ಪರದಾಡುವ ಸ್ಥಿತಿ ಇದೆ.
ರಾತ್ರಿ ಹೊತ್ತು ವೈದ್ಯರಿಲ್ಲ
ಅಪಘಾತ ಅಥವಾ ತುರ್ತು ಚಿಕಿತ್ಸೆಗಾಗಿ ರಾತ್ರಿ ಹೊತ್ತು ಬಂದರೆ ವೈದ್ಯರು ಲಭ್ಯವಿರುವುದಿಲ್ಲ. ಇದು ಸಮಸ್ಯೆಯಾಗಿ ಪರಿಣಮಿಸಿದೆ. ಫೋನ್ ಕರೆಯ ಮೇಲೆ ತಾತ್ಕಾಲಿಕ ವೈದ್ಯರು ಮಾತ್ರ ಬರುತ್ತಾರೆ ವಿನಃ ಖಾಯಂ ಆಗಿ ರಾತ್ರಿ ಹೊತ್ತು ವೈದ್ಯರು ಇಲ್ಲದ್ದರಿಂದ ಗ್ರಾಮಾಂತರ ಪ್ರದೇಶದವರು ಕಷ್ಟ ಅನುಭವಿಸುತ್ತಿದ್ದಾರೆ.
ಸಮಸ್ಯೆ ಬಗ್ಗೆ ಪರಿಶೀಲನೆ
ಯಾವುದೇ ಖಾಯಂ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಹೆಬ್ರಿ ಸಮಸ್ಯೆಗೆ ಗುತ್ತಿಗೆ ಆಧಾರದಲ್ಲಿ ಒಂದು ವಾರದಲ್ಲಿ ವೈದ್ಯರನ್ನು ನೇಮಿಸಲಾಗುತ್ತಿದೆ. ಮಕ್ಕಳ ಹಾಗೂ ಹೆರಿಗೆ ತಜ್ಞರ ನೇಮಕಾತಿಗೆ ಹಲವಾರು ಬಾರಿ ಪತ್ರಿಕಾ ಪ್ರಕಟನೆ ನೀಡಿದರೂ ಯಾರೂ ಬರುತ್ತಿಲ್ಲ. ಔಷಧ ಸಿಗುತ್ತಿಲ್ಲ ಎನ್ನುವುದರ ಬಗ್ಗೆ ಪರಿಶೀಲಿಸುತ್ತೇನೆ.
-ಡಾ| ಸುಧೀರ್ಚಂದ್ರ,
ಜಿಲ್ಲಾ ಆರೋಗ್ಯ ಅಧಿಕಾರಿ
ಸಂಬಂಧಪಟ್ಟವರಿಗೆ ತಿಳಿಸಲಾಗಿದೆ
ಮೆಡಿಸಿನ್ ವಿಭಾಗದಲ್ಲಿ ತೆರವಾದ ಹುದ್ದೆಗೆ ಖಾಯಂ ವೈದ್ಯರಿಲ್ಲದೆ ವಾರದಲ್ಲಿ ಮೂರು ವೈದ್ಯರು ನಿಯೋಜನೆಯ ಆಧಾರದ ಮೇಲೆ ಬರುತ್ತಿದ್ದರು. ಇದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಗುತ್ತಿಗೆ ಆಧಾರದಲ್ಲಿ ವಾರಪೂರ್ತಿ ಸೇವೆ ನೀಡುವ ವೈದ್ಯಾಧಿಕಾರನ್ನು ನೇಮಕ ಮಾಡಲಾಗಿದೆ. ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಡಾ| ಗಾಯತ್ರಿ,
ವೈದ್ಯಾಧಿಕಾರಿ (ಪ್ರಭಾರ),ಸ.ಆ.ಕೇಂದ್ರ ಹೆಬ್ರಿ
ಸಂಜೆ 4ರ ಮೇಲೆ ವೈದ್ಯರಿಲ್ಲ
ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಆರೋಗ್ಯ ಕೇಂದ್ರ ಪ್ರಯೋಜನಕ್ಕಿಲ್ಲದಂತಾಗಿದೆ. ಸಂಜೆ 4 ಗಂಟೆ ಮೇಲೆ ವೈದ್ಯರು ಇಲ್ಲಿಲ್ಲ. ಖಾಯಂ ವೈದ್ಯರಿಲ್ಲದೆ ಸಮಸ್ಯೆಯಾಗಿದೆ.
-ಪಾಂಡುರಂಗ ಪೂಜಾರಿ
ಆರೋಗ್ಯ
ಖಾಯಂ ವೈದ್ಯರ ಕೊರತೆಯಿಂದಾಗಿ ವೈದ್ಯರು ಬದಲಾಗುತ್ತಿರುತ್ತಾರೆ. ಇದು ರೋಗಿಗಳಿಗೆ ತೊಂದರೆ ಉಂಟುಮಾಡುತ್ತಿದೆ.
-ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ