ಶ್ರೀ ವಾದಿರಾಜರ ಪಾವನ ಕ್ಷೇತ್ರಗಳ ಅಭಿವೃದ್ಧಿಗೆ ಚಿಂತನೆ
Team Udayavani, Jul 23, 2017, 7:40 AM IST
ಕಾಪು: ಸೋದೆ ಮಠದ ಗುರುಗಳಾದ ಶ್ರೀ ವಾದಿರಾಜ ಸ್ವಾಮೀಜಿಯವರು ತಮ್ಮ ಜೀವಿತ ಕಾಲದಲ್ಲಿ ಸಂದರ್ಶಿಸಿದ ಸ್ಥಳಗಳನ್ನೆಲ್ಲಾ ಜೀರ್ಣೋದ್ಧಾರಗೊಳಿಸುವ ಇಚ್ಛೆಯನ್ನು ಹೊಂದಲಾಗಿದೆ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ಎಲ್ಲೂರು ಗ್ರಾಮದ ಕೆಮ್ಮುಂಡೇಲು ಗಂಗೆಮಾರು ಗದ್ದೆಯಲ್ಲಿರುವ ಇತಿಹಾಸ ಪ್ರಸಿದ್ಧ ಕಮಂಡಲ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಜೊತೆಗೂಡಿ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಶ್ರೀ ವಾದಿರಾಜರು ಕೆಮ್ಮುಂಡೇಲು ಗ್ರಾಮದ ಜಲಕ್ಷಾಮ ನಿವಾರಣೆಗಾಗಿ ಮತ್ತು ತನ್ನ ಸಂಧ್ಯಾ ವಂದನೆಗೆ ಪೂರಕವಾಗಿ ತನ್ನ ಕಮಂಡಲವನ್ನು ಇರಿಸಿ ತೀಥೋìದ್ಭವಗೊಳಿಸಿದ ಇತಿಹಾಸ ಪ್ರಸಿದ್ಧವಾಗಿರುವ ಕಮಂಡಲ ತೀರ್ಥ ಕ್ಷೇತ್ರವನ್ನೂ ಗ್ರಾಮಸ್ಥರ, ಭಕ್ತಾದಿಗಳ ಸಹಕಾರದೊಂದಿಗೆ ಉನ್ನತಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕೆಮ್ಮುಂಡೇಲು ಗಂಗೆಮಾರು ಗದ್ದೆಯ ಮಾಲಕಿ ಶಾಂತಾ ಶೆಡ್ತಿ, ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ, ಎಲ್ಲೂರು ಗ್ರಾ. ಪಂ. ಉಪಾಧ್ಯಕ್ಷ ಜಯಂತ್ ಕುಮಾರ್ ಸಜೆ, ಶ್ರೀ ಪಾಂಡುರಂಗ ಭಜನ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಪಿ. ಕೃಷ್ಣಾನಂದ ರಾವ್, ಅರ್ಚಕ ಶ್ರೀಪತಿ ಆಚಾರ್ಯ, ಸುಬ್ರಹ್ಮಣ್ಯ ರಾವ್, ರಾಘವೇಂದ್ರ ರಾವ್, ಸತ್ಯನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.