ಒಂಟಿ ಮಹಿಳೆ ಕೊಲೆ: ಬಾಡಿಗೆ ಮನೆಯಲ್ಲಿದ್ದ ದಂಪತಿ ಬಂಧನ
ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿ ಜು.2ರಂದು ಕೃತ್ಯ ; ಗೋವಾದಲ್ಲಿ ಸಿಕ್ಕಿಬಿದ್ದ ಜೋಡಿ
Team Udayavani, Jul 11, 2019, 5:12 AM IST
ಸಾಂದರ್ಭಿಕ ಚಿತ್ರ.
ಉಡುಪಿ: ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದ್ದ ಒಂಟಿ ವೃದ್ಧೆ ರತ್ನಾವತಿ ಜಿ.ಶೆಟ್ಟಿ (80) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಪಾದಿತ ದಂಪತಿಯನ್ನು ಗೋವಾದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ನರಗುಂದ ಮೂಲದ ಅಂಬಣ್ಣ ಅಲಿಯಾಸ್ ಅಂಬರೀಶ್ ಅಲಿಯಾಸ್ ಅಂಬಣ್ಣ ಬಸಪ್ಪ ಜಾಡರ್ ಅಲಿಯಾಸ್ ಶಿವ (31) ಮತ್ತು ಆತನ ಪತ್ನಿ ರಶೀದಾ ಅಲಿಯಾಸ್ ಖಾಜಿ ಆಲಿಯಾಸ್ ಜ್ಯೋತಿ (26) ಬಂಧಿತರು.
ಬಾಡಿಗೆಗೆಂದು ಬಂದಿದ್ದರು
ರತ್ನಾವತಿ ಜಿ.ಶೆಟ್ಟಿ ಅವರ ಮನೆಯ ಹಿಂಭಾಗದಲ್ಲಿ ನಾಲ್ಕು ಬಾಡಿಗೆ ಕೋಣೆಗಳಿದ್ದವು. ಎರಡರಲ್ಲಿ ತಲಾ ಒಬ್ಬೊಬ್ಬರು ವಾಸವಾಗಿದ್ದರು. ಅವರು ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದರು.
ಜು.1ರಂದು ಬಾಡಿಗೆ ಮನೆ ಕೇಳಿಕೊಂಡು ದಂಪತಿ ಬಂದಿದ್ದು, ಅವರಿಗೆ ರತ್ನಾವತಿ ಅವರು ಬಾಡಿಗೆ ಕೋಣೆ ನೀಡಿದ್ದರು. ಅಂದು ಆ ಕೊಠಡಿಯಲ್ಲಿ ವಾಸವಿದ್ದ ಈ ಜೋಡಿ ಮರುದಿನ ಅಪರಾಹ್ನ 3.30ರ ವೇಳೆಗೆ ರತ್ನಾವತಿ ಅವರನ್ನು ಮಲಗುವ ಕೋಣೆಯಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಕಾಲ್ಕಿತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರತ್ನಾವತಿ ಅವರ ಶವ ಜು.5ರಂದು ರಾತ್ರಿ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಚಿನ್ನಾಭರಣಕ್ಕಾಗಿ ಕೊಲೆ
ಆರೋಪಿಗಳು ದುಂದುವೆಚ್ಚ ಮಾಡುತ್ತಿದ್ದು, ಚಿನ್ನಾಭರಣ ಮತ್ತು ಹಣಕ್ಕಾಗಿಯೇ ಕೊಲೆ ನಡೆಸಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರು ರತ್ನಾವತಿ ಶೆಟ್ಟಿ ಮೈಮೇಲಿದ್ದ ಸುಮಾರು 2 ಲ.ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕೊಂಡೊಯ್ದಿದ್ದು, ಅದನ್ನು ಇನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
ಬಂಧಿತರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಚಿನ್ನ ನೋಡಿ ಬಾಡಿಗೆ ಮನೆ ಫಿಕ್ಸ್ !
ಆರೋಪಿಗಳು ಬಾಡಿಗೆ ಮನೆಯನ್ನು ಒಪ್ಪಿಕೊಳ್ಳುವ ಮೊದಲು ರತ್ನಾವತಿ ಜತೆ ತುಂಬಾ ಹೊತ್ತು ಮಾತನಾಡಿದ್ದರು. ಈ ವೇಳೆ ರತ್ನಾವತಿ ಮೈಮೇಲಿದ್ದ ಚಿನ್ನಾಭರಣಗಳನ್ನು ಗಮನಿಸಿದ್ದರು. ಮನೆಯಲ್ಲಿ ಇನ್ನೂ ಚಿನ್ನಾಭರಣಗಳು ಇರಬಹುದು ಎಂದು ಸ್ಕೆಚ್ ಹಾಕಿ ಬಾಡಿಗೆ ಮನೆಯನ್ನು ಒಪ್ಪಿಕೊಂಡಿದ್ದರು.
ಆರೋಪಿಗಳು ಗೋವಾದ ಓಲ್ಡ್ ಗೋವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವುದನ್ನು ಉಡುಪಿ ಪೊಲೀಸರು ಖಚಿತಪಡಿಸಿಕೊಂಡಿದ್ದರು. ಕೂಡಲೇ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ಪಡೆಯುವಂತೆ ಕೋರಿಕೊಂಡಿದ್ದರು. ಅನಂತರ ಉಡುಪಿಯ ವಿಶೇಷ ತಂಡ ಗೋವಾಕ್ಕೆ ತೆರಳಿತ್ತು.
ಎಸ್ಪಿ ನಿಶಾ ಜೇಮ್ಸ್ ನಿರ್ದೇಶನ, ಎಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಸಿಐ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣಾಧಿಕಾರಿ ಮಧು, ಉಡುಪಿ ಎಎಸ್ಐ ಗೋಪಾಲಕೃಷ್ಣ, ಡಿಸಿಐಬಿ ಸಿಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ