ಸಂಸ್ಕೃತ ಎಲ್ಲ ಸಂಶೋಧನೆಗೂ ಮೂಲ: ಮಾಂಡವೀಯ
ಉಡುಪಿಯಲ್ಲಿ ಸಂಸ್ಕೃತೋತ್ಸವ
Team Udayavani, Aug 17, 2019, 6:01 AM IST
ಉಡುಪಿ: ದೇವಭಾಷೆಯಾದ ಸಂಸ್ಕೃತ ಎಲ್ಲ ಸಂಶೋಧನೆಗೂ ಮೂಲವಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಎಲ್. ಮಾಂಡವೀಯ ಅಭಿಪ್ರಾಯಪಟ್ಟರು. ಸಚಿವರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆಯುತ್ತಿರುವ ಉಡುಪಿ ಸಂಸ್ಕೃತ ಕಾಲೇಜಿನ ಸಂಸ್ಕೃತೋತ್ಸವ ಸಮಾರಂಭಕ್ಕೆ ಶುಕ್ರವಾರ ಅನಿರೀಕ್ಷಿತವಾಗಿ ಆಗಮಿಸಿ ಪಾಲ್ಗೊಂಡರು. ಯೋಗ, ಆಯುರ್ವೇದ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಇದಕ್ಕೆ ಮೂಲ ಕಾರಣ ಸಂಸ್ಕೃತ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಶ್ರೀಪಾದರು ಆಶೀರ್ವಚನ ನೀಡಿ, ಭಾರತ ದೇಶದ ಶಿರಸ್ಸು ಕಾಶ್ಮೀರ ಇಂದು ಸರಿಯಾಗಿದೆ. ಆದ್ದರಿಂದ ಇನ್ನು ದೇಶವೂ ಸರಿಯಾಗಿರುತ್ತದೆ. ಯಥಾ ರಾಜಾ ತಥಾ ಪ್ರಜಾ ಎಂಬಂತೆರಾಜರಾದವರು ಸಂಸ್ಕೃತಕ್ಕೆ ಪ್ರೋತ್ಸಾಹ ನೀಡುತ್ತಿರುವುದರಿಂದ ಸಂಸ್ಕೃತ ಭಾಷೆಯು ನಿರಂತರ ಮುಂದುವರಿಯುವಲ್ಲಿ ಸಂಶಯವಿಲ್ಲ ಎಂದರು. ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಅಭ್ಯಾಗತರಾಗಿ ಶಾಸಕ ರಘುಪತಿ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ನವಮಂಗಳೂರು ಬಂದರಿನ ಅಧ್ಯಕ್ಷ ವೆಂಕಟರಾಮನ್ ಅಕ್ಕರಾಜು, ವಿ| ವಾಗೀಶ ಎಸ್. ಶಾಸಿŒ, ಡಾ| ಮಧುಸೂದನ ಅಡಿಗ, ವಿ| ವೇದವ್ಯಾಸ ತಂತ್ರಿ, ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಯು. ರತ್ನಕುಮಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ| ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿ, ಉಪನ್ಯಾಸಕ ವಿ. ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ದ್ವಾರಕೆ ಸಂಸದನಿಂದ ದ್ವಾರಕಾ ಕೃಷ್ಣ ದರ್ಶನ
ಸಚಿವ ಮನ್ಸುಖ್ ಮಾಂಡವೀಯ ಅವರು ಗುಜರಾತ್ನ ದ್ವಾರಕಾ ಕ್ಷೇತ್ರದ ಸಂಸದರು. ಮಂಗಳೂರಿಗೆ ಸರಕಾರಿ ಕಾರ್ಯಕ್ರಮಕ್ಕೆ ಬಂದವರು ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಆಗಮಿಸಿದರು. “ಶ್ರೀಕೃಷ್ಣ ಮಠಕ್ಕೆ ಬರುತ್ತಲೇ ಸ್ವಾಮೀಜಿಯವರು ಸಂಸ್ಕೃತೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ತಿಳಿದು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದೇನೆ’ ಎಂದರು.