ಪುರುಷೋತ್ತಮ ಮಾಸಾಚರಣೆ, ಭಕ್ತರಿಂದ 2.15ಲಕ್ಷ ಪ್ರದಕ್ಷಿಣೆ
Team Udayavani, Jun 2, 2018, 2:30 AM IST
ಹೆಬ್ರಿ: ಅಧಿಕ ಮಾಸದ ನಿಮಿತ್ತ ಶ್ರೀ ಪುರುಷೋತ್ತಮ ಮಾಸಾಚರಣೆ ಅಂಗವಾಗಿ ಹೆಬ್ರಿ ದೇವಸ್ಥಾನದಲ್ಲಿ ಮೇ 16ರಿಂದ ಜೂ.13ರವರೆಗೆ ಲಕ್ಷ ಪ್ರದಕ್ಷಿಣೆ ನಮಸ್ಕಾರ ನಡೆಯುತ್ತಿದ್ದು ಸಂಕಲ್ಪದಲ್ಲಿ ಸುಮಾರು 215ಭಕ್ತರಿಂದ 2.15ಲಕ್ಷ ಪ್ರದಕ್ಷಿಣಿ ನಡೆಯುತ್ತಿದೆ ಭಕ್ತರು ಭಗವನ್ನಾಮ ಹೇಳುತ್ತ, ಓರ್ವರು ನಿತ್ಯ 33 ಪ್ರದಕ್ಷಿಣೆ ಬರುತ್ತಾರೆ. ಇದರಿಂದ 30 ದಿವಸಗಳಲ್ಲಿ 990 ಪ್ರದಕ್ಷಿಣೆಯಂತೆ 108 ಭಕ್ತರು ಪ್ರದಕ್ಷಿಣೆ ನಡೆಸಿದರೆ, ಲಕ್ಷ ಪ್ರದಕ್ಷಿಣೆಯಾಗಲಿದೆ. ಬೆಳಗ್ಗೆ 5.30ರಿಂದ ಸಂಜೆ 7.30ರ ವರೆಗೆ ಭಕ್ತರು ಪ್ರದಕ್ಷಿಣೆ ಸಂಕಲ್ಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 33 ತಿಂಗಳ ಹಿಂದೆ ಇದೇ ರೀತಿ ನಡೆದ ಕಾರ್ಯಕ್ರಮದಲ್ಲಿ 350 ಮಂದಿ ಪಾಲ್ಗೊಂಡಿದ್ದರು.
ಏನಿದು ಅಧಿಕ ಮಾಸ
ಚೈತ್ರ ಯುಗಾದಿಯಿಂದ ಚೈತ್ರಾದಿಯ ತನಕದ ವರ್ಷ ಚಾಂದ್ರ ಸಂವತ್ಸರವೆನಿಸಿದೆ. ಇದರಲ್ಲಿ ಸುಮಾರು 354 ದಿನಗಳಿರುತ್ತವೆ. ಮೇಷದಿಂದ ಮೇಷ ಸಂಕ್ರಮಣದವರೆಗೆ ವರ್ಷ ಸಂವತ್ಸರ ಇದರಲ್ಲಿ 365.25 ದಿವಸಗಳಿರುತ್ತವೆ. ಹೀಗೆ ಸೌರ ಚಂದ್ರಗಳಲ್ಲಿ ವರ್ಷಕ್ಕೆ 11 ದಿನದ ವ್ಯತ್ಯಾಸ ಬೀಳುತ್ತದೆ. 33 ತಿಂಗಳುಗಳಿಗೊಮ್ಮೆ ಬರುವ ಈ ಮಾಸ ವಿಶೇಷ. ಯುವ ಚಂದ್ರ ಮಾಸದಲ್ಲಿ ಸಂಕ್ರಾಂತಿ ಇಲ್ಲದಿದ್ದರೆ ಅದು ಅಧಿಕ ಮಾಸ. ಒಂದು ಮಾಸದಲ್ಲಿ 2 ಸಂಕ್ರಾಂತಿ ಬಂದರೆ ಅದು ಕ್ಷಯ ಮಾಸ. ಕ್ಷಯ ಮಾಸದ ಹಿಂದೆ ಮತ್ತು ಮುಂದಿನ 2 ತಿಂಗಳುಗಳು ದ್ವಿಸಂಕ್ರಾಂತವಾಗಿದ್ದು ಅಧಿಕ ಮಾಸಗಳಾಗಿರುತ್ತವೆ. ಇಂತಹ ಕ್ಷಯ ಮಾಸ ಒದಗಿಸುವುದು 140 ವರ್ಷಗಳಿಗೊಮ್ಮೆ ಮಾತ್ರವಾಗಿದ್ದು ಕ್ಷಯಮಾಸವುಳ್ಳ ವರ್ಷದಲ್ಲಿ 13 ತಿಂಗಳು ಇರುತ್ತದೆ.
100 ಪ್ರದಕ್ಷಿಣೆ ಸಂಕಲ್ಪ
ಈಗಾಗಲೇ ಲಕ್ಷಪ್ರದಕ್ಷಿಣೆ ಆರಂಭಗೊಂಡಿದ್ದು ಇದುವರೆಗೆ ಬರಲು ಅನಾನುಕೂಲವಾದವರಿಗೆ ಜೂ.13ರ ಒಳಗೆ 100 ಪ್ರದಕ್ಷಿಣಿ ಬರುವುದರ ಮೂಲಕ ಸಂಕಲ್ಪದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಕಲ್ಪದ ಕೊನೆಯದಿನ ಪುರುಷೋತ್ತಮ ಪೂಜೆ, ಸಾಮೂಹಿಕ ಸತ್ಯನಾರಾಯಾಣ ಪೂಜೆ ನಡೆಯಲಿದೆ.
ಅಧಿಕ ಫಲ ಪ್ರಾಪ್ತಿ
ಅಧಿಕ ಮಾಸದ 30 ದಿನಗಳಲ್ಲಿ 33 ಭಗವನ್ನಾಮ ಉಚ್ಚರಿಸುತ್ತಾ ಪ್ರತಿನಿತ್ಯ ಮೂವತ್ತ ಮೂರು ಪ್ರದಕ್ಷಿಣೆ, ಭಗವಂತನ ಪ್ರಾರ್ಥನೆಯಿಂದ ಅಧಿಕ ಫಲದೊರೆಯುವುದು.
– ಗಿಲ್ಲಾಳಿ ವಾದಿರಾಜ ಆಚಾರ್ಯ, ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ಅರ್ಚಕರು