ಶೀರೂರು ಶ್ರೀ ವಿಧಿವಶ : ವಿಭಿನ್ನ ವಿಶೇಷ ವಿಶಿಷ್ಟ


Team Udayavani, Jul 20, 2018, 5:10 AM IST

swamiji-19-7.jpg

ನೇರ ನಡೆ, ಜನರೊಂದಿಗೆ ಸದಾ ಬೆರೆಯುವ ವ್ಯಕ್ತಿತ್ವದ ಶೀರೂರು ಶ್ರೀಗಳು ಇದೇ ಕಾರಣಕ್ಕೆ ಜನಸಾಮಾನ್ಯರ ಸ್ವಾಮೀಜಿ ಆದರು. ಕಲೋಪಾಸನೆ, ಅಪೂರ್ವ ಹವ್ಯಾಸಗಳೊಂದಿಗೆ ಅಚ್ಚರಿಯ ವ್ಯಕ್ತಿತ್ವದವರೂ ಆಗಿದ್ದರು. ಕಲೋಪಾಸನೆಯಲ್ಲಿ ಆಸಕ್ತಿ, ಅಪೂರ್ವ ಹವ್ಯಾಸಗಳೊಂದಿಗೆ ಅಚ್ಚರಿಯ ವ್ಯಕ್ತಿತ್ವದವರೂ ಆಗಿದ್ದರು. ಸಂಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿಯೇ ಅವರು ಜನಮಾನಸದಲ್ಲಿ ನೆಲೆಯಾಗಿದ್ದಾರೆ. 

ಶ್ರೀಗಳ ಬಾಲ್ಯ-ಸನ್ಯಾಸ ದೀಕ್ಷೆ
‘ಮಡಾಮಕ್ಕಿ’ ಆಗುಂಬೆ ತಪ್ಪಲಿನ ಸೀತಾನದಿ ತಟದಲ್ಲಿರುವ ಪುಟ್ಟ ಗ್ರಾಮ. ಇಲ್ಲಿ ಹುಲ್ಲು ಛಾವಣಿಯ ಪುಟ್ಟ ಮನೆಯಲ್ಲಿ ವಾಸವಿದ್ದ ವಿಠಲಾಚಾರ್ಯ – ಕುಸುಮಾ ಆಚಾರ್ಯ ದಂಪತಿಗೆ ಪುತ್ರೋತ್ಸವದ ಸಂಭ್ರಮ. ದೇಗುಲದ ಅರ್ಚಕರು ‘ಕೂಸು ದೇವತಾರ್ಚನೆಯ ದಾರಿಯಲ್ಲಿ ಸಾಗುತ್ತದೆ’ ಎಂದರಂತೆ. ಆ ಮಗು – ಶ್ರೀ ಶೀರೂರು ಮಠದ ಪರಂಪರೆಯ 30ನೇ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು. ಪೂರ್ವಾಶ್ರಮದ ಹೆಸರು ಹರೀಶ. ಉಡುಪಿ ಕಾರ್ಪೊರೇಶನ್‌ ಬ್ಯಾಂಕ್‌ ಸುವರ್ಣ ಮಹೋತ್ಸವ ಶಾಲೆಗೆ (ನಾರ್ತ್‌ ಸ್ಕೂಲ್‌) ಸೇರಿದರು. ಮಠದ ಚಾವಡಿಯಲ್ಲಿ ಓದುತ್ತಿದ್ದಾಗ ನಾಗರಹಾವು ಒಂದಡಿ ದೂರದಲ್ಲಿ ಹೆಡೆಯರಳಿಸಿ ನಿಂತಿತ್ತು.ಮೂರೇ ದಿನಗಳಲ್ಲಿ ಅವರು ಶೀರೂರು ಮಠದ 30ನೇ ಪೀಠಾಧಿಪತಿಯಾಗಿದ್ದರು. ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವೋತ್ತಮತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದು, ‘ಶ್ರೀಲಕ್ಷ್ಮೀವರತೀರ್ಥ’ ಎಂದು ನಾಮಾಂಕಿತರಾದರು.

ವಿದ್ಯಾಭ್ಯಾಸ- ಶಾಸ್ತ್ರ ಪಾಠ 
ಎಂಟರ ಎಳವೆಯಲ್ಲಿಯೇ ಶ್ರೀ ಮಧ್ವಾಚಾರ್ಯ ಕರಾರ್ಚಿತ ಶ್ರೀಕೃಷ್ಣ – ವಿಠಲ ದೇವರ ವಿಗ್ರಹದ ಪೂಜಾ ಕೈಂಕರ್ಯ ಸ್ವೀಕರಿಸಿದರು. ವಿದ್ವಾನ್‌ ಕೊಡಂಗಳ ಅನಂತರಾಮ ಭಟ್‌, ವಿದ್ವಾನ್‌ ಅಡ್ಡೆ ವೇದವ್ಯಾಸ ಆಚಾರ್ಯ, ವಿದ್ವಾನ್‌ ಅಗ್ರಹಾರ ನಾರಾಯಣ ತಂತ್ರಿ, ಅಗ್ನಿಹೋತ್ರಿ ಅಲೆವೂರು ಸೀತಾರಾಮ ಆಚಾರ್ಯ, ವಿದ್ವಾನ್‌ ಪಾದೂರು ವೆಂಕಟರಮಣ ಐತಾಳ ಅವರಿಂದ ವಿದ್ಯಾಭ್ಯಾಸ ನಡೆಯಿತು. ಮುಂದಿನ ಹಂತದ ಉಚ್ಚಮಟ್ಟದ ಶಾಸ್ತ್ರ ಪಾಠಗಳನ್ನು ಗುರುಗಳಾದ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದರಿಂದ ಕಲಿತರು. ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಒಟ್ಟು 21 ವರ್ಷಗಳ ಅಧ್ಯಯನ ನಡೆಸಿದರು.


ಸುಖೀ ಸಮಾಜದ ಚಿಂತನೆ

ಸಮಾಜದಲ್ಲಿ ನೋವು ನಶಿಸಬೇಕು ನಗುವು ಜಯಿಸಬೇಕು. ಕೇವಲ ಸುಖೀ ಸಮಾಜದ ಚಿಂತನೆಯಿದ್ದರೆ ಸಾಲದು, ಅನುಷ್ಠಾನಿಸಲು ಎಲ್ಲರೂ ಕೈಜೋಡಿಸಬೇಕು ಎನ್ನುವ ಕಾಳಜಿಯಿಂದ ತಮ್ಮ ತೃತೀಯ ಪರ್ಯಾಯದಲ್ಲಿ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದವರು ಶ್ರೀಗಳು. ಈ ಎಲ್ಲ ಯೋಜನೆಗಳನ್ನು ತನ್ನ ಪರ್ಯಾಯ ಅವಧಿಗೆ ಸೀಮಿತಗೊಳಿಸದೆ ಕೊನೆಯವರೆಗೂ ನಡೆಸಿದರು.

ಶ್ರೀಕೃಷ್ಣ ಆರೋಗ್ಯ ನಿಧಿ
ಶ್ರೀಕೃಷ್ಣ ಆರೋಗ್ಯ ನಿಧಿ ಮೂಲಕ ಪ್ರತಿ ತಿಂಗಳು 30ರಿಂದ 35 ರೋಗಿಗಳಿಗೆ 5 ಲಕ್ಷ ರೂ.ಗಳನ್ನು ಆಸ್ಪತ್ರೆ ವೆಚ್ಚಕ್ಕಾಗಿ ನೀಡಿದ್ದು ಕೃಷ್ಣ ಮಠದ ಇತಿಹಾಸದಲ್ಲೇ ಮೊದಲು. ತಮ್ಮ ಪರ್ಯಾಯದ ಅವಧಿಯಲ್ಲಿ 1 ಕೋಟಿ ರೂ.ಗಳನ್ನು ಶ್ರೀಕೃಷ್ಣ ಆರೋಗ್ಯ ನಿಧಿಗಾಗಿ ಶ್ರೀಗಳು ವ್ಯಯಿಸಿದ್ದರು. ಶ್ರೀಪಾದರು ತೆಕ್ಕಟ್ಟೆ, ಕಾಪು ಹಾಗೂ ಕೋಟೇಶ್ವರದ 4 ಪ್ರಸಿದ್ಧ ಸಂಘಟನೆಗಳಿಗೆ ಉಚಿತ ಆ್ಯಂಬುಲನ್ಸ್‌ ನೀಡಿದ್ದರು. ಬಡ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕಾಗಿ ಪ್ರತಿವರ್ಷ 5 ಲಕ್ಷ ರೂ. ವಿನಿಯೋಗಿಸುತ್ತಿದ್ದರು. ಗಾಲಿ ಕುರ್ಚಿ, ಹೊಲಿಗೆ ಯಂತ್ರ, ಬಟ್ಟೆಬರೆಗಳನ್ನು, ಪಠ್ಯಪುಸ್ತಕಗಳನ್ನು ನೀಡುತ್ತಿದ್ದರು.

ಸರ್ವಾಭೀಷ್ಟ ಪ್ರದಾಯಕ ಮುಖ್ಯಪ್ರಾಣ

ಶೀರೂರು ಮಠದ 23ನೇ ಯತಿಗಳಾದ ಶ್ರೀ ಲಕ್ಷ್ಮೀರಮಣತೀರ್ಥರಿಂದ ಸ್ವರ್ಣಾ ನದಿಯ ತೀರದಲ್ಲಿ ಪ್ರತಿಷ್ಠಾಪಿತ ಜಾಬಾಲಿ ಮುನಿ ಪೂಜಿತ ಶ್ರೀ ಮುಖ್ಯಪ್ರಾಣ ದೇವರ ಈ ಕ್ಷೇತ್ರ ವಿಶೇಷ ಸನ್ನಿಧಾನ ಹಾಗೂ ಅಪರಿಮಿತ ಕಾರಣಿಕ ಹೊಂದಿದೆ. ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಂದ ಪೂಜೆಗೊಂಡ ಮುಖ್ಯಪ್ರಾಣ ದೇವರು ಭಕ್ತರ ಸರ್ವಾಭೀಷ್ಟಗಳನ್ನು ಕ್ಷಿಪ್ರಸಮಯದಲ್ಲಿ ಕರುಣಿಸುತ್ತಾರೆ.

ಸ್ವರ್ಣಾನದಿ ತೀರದಲ್ಲಿ ಮಿಂದು ಶ್ರದ್ಧಾ ಭಕ್ತಿಯಿಂದ ವೇದೋಕ್ತ ಮಂತ್ರಗಳನ್ನು ಪ್ರಾಣದೇವರಿಗೆ ಅರ್ಪಿಸಿ ಸಿದ್ಧಿಸಾಧನೆ ಮಾಡಿಕೊಳ್ಳುವ ಭಕ್ತರ ಸಂಖ್ಯೆ ದೊಡ್ಡದು. ಶ್ರೀ ದೇವರಿಗೆ ರಂಗಪೂಜೆ ಸಹಿತ 12 ಸೇರು ಕಡಲೆ ಪಂಚಕಜ್ಜಾಯ, ಎಳ್ಳು ಪಂಚಕಜ್ಜಾಯ, ವಸಂತ ಪೂಜೆಯ ಸೇವೆ ಸಲ್ಲಿಸುತ್ತಾರೆ. ಮುಂಜಾನೆ ಶ್ರೀ ಪಟ್ಟಾಭಿ ರಾಮಚಂದ್ರ ದೇವರ ಪೂಜೆ ಬಳಿಕ ಪವಮಾನ ಹಾಗೂ ವಾಯುಸ್ತುತಿ ಪಠಣದೊಂದಿಗೆ ಪೂಜೆ ಜರಗುತ್ತಿದ್ದು ಸಂಧ್ಯಾಕಾಲದಲ್ಲಿ ರಾಮದೇವರ ಪೂಜಾನಂತರ ಮನ್ಯುಸೂಕ್ತ, ಋಷಭ ಸೂಕ್ತ, ಬಳಿತ್ಥಾ ಸೂಕ್ತದೊಂದಿಗೆ ದೀಪಾರಾಧನೆ ಸಹಿತ ರಂಗಪೂಜೆ ಸಲ್ಲುತ್ತದೆ. ಪೂಜೆಯ ಬಳಿಕ ಸೇವೆ ಸಲ್ಲಿಸಿದ ಭಕ್ತರಿಗೆ ಶೀರೂರು ಶ್ರೀಪಾದರು ಶ್ರೀ ದೇವರಲ್ಲಿ ಪ್ರಾರ್ಥಿಸಿ ಅನುಗ್ರಹಿಸುತ್ತಿದ್ದ ಮಂತ್ರಾಕ್ಷತೆ ಭಕ್ತಸ್ತೋಮಕ್ಕೆ ಸಂತೃಪ್ತಿ, ಸಾರ್ಥಕತೆ ಹಾಗೂ ಧನ್ಯತಾ ಭಾವ ಮೂಡಿಸುತ್ತಿತ್ತು.

ನಿರಂತರ 9 ಶನಿವಾರಗಳಲ್ಲಿ ಶೀರೂರು ಮುಖ್ಯಪ್ರಾಣ ದೇವರ ಕ್ಷೇತ್ರಕ್ಕೆ ಆಗಮಿಸಿ ಸದ್ಭಕ್ತಿಯಿಂದ ಶರಣು ಎನ್ನಿ, ನಿಮ್ಮ ಮನೋಕಾಮನೆಗಳನ್ನು ಶ್ರೀ ಮುಖ್ಯಪ್ರಾಣ ದೇವರು ಆ ಕ್ಷಣದಲ್ಲೇ ನೆರವೇರಿಸುತ್ತಾರೆ ಎಂದು ಶೀರೂರು ಶ್ರೀ ಲಕ್ಷ್ಮೀವರ ಶ್ರೀಪಾದರು ಭಕ್ತರಿಗೆ ಇನ್ನೂ ಹೇಳುತ್ತಿರುವಂತೆ ಭಾಸವಾಗುತ್ತಿದೆ. 

1978 -80 ಪ್ರಥಮ ಪರ್ಯಾಯ 
ಮೊದಲ ಪರ್ಯಾಯದಲ್ಲಿ ಶ್ರೀಗಳು ಶ್ರೀಕೃಷ್ಣನಿಗೆ ಅಲಂಕಾರಕ್ಕಾಗಿ ಬೆಳ್ಳಿ, ಚಿನ್ನದ ಸಾಮಗ್ರಿಗಳ ಅರ್ಪಣೆ, ಸ್ವರ್ಣಪಾಲಕಿ – ಆಭರಣಗಳನ್ನು ಇರಿಸಲು ಭದ್ರತಾ ಕೊಠಡಿ ನಿರ್ಮಾಣ, ಶ್ರೀಕೃಷ್ಣ ಮಠದ ಹೆಬ್ಟಾಗಿಲಿಗೆ ನೂತನ ಗೋಪುರ, ಬಾಗೀರಥಿ ಗುಡಿ ನವೀಕರಣ, ಪಾಜಕ ಕ್ಷೇತ್ರದಲ್ಲಿ ಮಣಿಮಂತ ದೈತ್ಯನ ಸಂಹಾರ ಮಾಡಿದ ಸ್ಥಳದಲ್ಲಿ ಶ್ರೀ ಮಧ್ವಾಚಾರ್ಯರ ಪಾದದ ಕುರುಹು ಇರುವ ಸನ್ನಿಧಿಗೆ ಗುಡಿ ನಿರ್ಮಾಣ.


1994 – 96 ದ್ವಿತೀಯ ಪರ್ಯಾಯ 

ಎರಡನೇ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿರಂತರ 300 ಅಲಂಕಾರ ಸೇವೆಯನ್ನು ಸಮರ್ಪಿಸಿ ಅಲಂಕಾರದ ಸವಿನೆನಪಿಗಾಗಿ ‘ಸ್ವರ್ಣಗೀತಾರಥ’ ಸಮರ್ಪಿಸಿದರು. ನವಗ್ರಹ ಗುಡಿ ನಿರ್ಮಿಸಿದರು. ಶಿಕ್ಷಣ ವ್ಯವಸ್ಥೆಯ ಪರೋಕ್ಷ ಬೆಂಬಲವಾಗಿ ಭೋಜನದ ವ್ಯವಸ್ಥೆಯನ್ನು 28 ಶಾಲಾ -ಕಾಲೇಜುಗಳಿಗೆ ವಿಸ್ತರಿಸಿದರು. ಧಾರ್ಮಿಕ, ಸಾಂಸ್ಕೃತಿಕ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು ಉಲ್ಲೇಖೀಸಬೇಕಾದದ್ದು.

2010 – 12 ತೃತೀಯ ಪರ್ಯಾಯ 
‘ಸಂಪೂರ್ಣ ದರ್ಶನ-ಸಂತೃಪ್ತ ಭೋಜನ’ ಎಂಬ ಸರಳ ಘೋಷಣೆ ಈ ಪರ್ಯಾಯದ ವಿಶೇಷ. 2010 ಮಾರ್ಚ್‌ನಲ್ಲಿ ಆರಂಭಗೊಂಡ ‘ಆರೋಗ್ಯನಿಧಿ’ ಯೋಜನೆ ಮೂಲಕ 21 ತಿಂಗಳು 63 ಲಕ್ಷ ರೂ.ಗಳನ್ನು ಬಡರೋಗಿಗಳ ಚಿಕಿತ್ಸೆಗೆ ನೀಡಿದರು.ನೈವೇದ್ಯ ಸಿದ್ಧಪಡಿಸುವ ಪಾಕಶಾಲೆ, ಭೋಜನ ಶಾಲೆಯ ಅಡುಗೆ ಶಾಲೆ ನವೀಕರಣ, ಮಧ್ವಸರೋವರದ ನೀರಿನ ಶುಚಿತ್ವ ಕಾಪಾಡಲು ಶುದ್ಧೀಕರಣ ಯಂತ್ರ ಘಟಕದ ಸಮರ್ಪಣೆ.


ಸಂಗೀತೋಪಕರಣ ಸಂಗ್ರಹಕಾರ

ಶ್ರೀ ಲಕ್ಷ್ಮೀವರತೀರ್ಥರಿಗೆ ಸಂಗೀತ, ಸಂಗೀತೋಪಕರಣಗಳ ಬಗೆಗಿನ ಆಸಕ್ತಿ ದೊಡ್ಡದು. 1982ರಿಂದ ವಿವಿಧ ಸಂಗೀತೋಪಕರಣಗಳ ಸಂಗ್ರಹಕ್ಕೆ ತೊಡಗಿದರು. ವೀಣೆ, ಸಿತಾರ್‌, ತಬಲಾ, ಮೃದಂಗ, ನಾಗಸ್ವರ, ಸ್ಯಾಕ್ಸೋಫೋನ್‌, ಕ್ಲಾರಿಯೋನೆಟ್‌ ಹೀಗೆ ಹತ್ತಾರು ವರ ಇವರ ಸಂಗ್ರಹಕ್ಕೆ ಸೇರಿದವು. 2,600 ರೀತಿಯಲ್ಲಿ ಧ್ವನಿ ಹೊರಸೂಸುವ ಒಂದು ಕಿಟ್‌ ಇದೆ. ಇದರಲ್ಲಿ ಕಾಡಿನಲ್ಲಿ ಹಕ್ಕಿಗಳ ಚಿಲಿಪಿಲಿಯಿಂದ ಹಿಡಿದು ಹಿಂದಿನ ಕಾಲದ ಲೆಗ್‌ ಹಾರ್ಮೋನಿಯಂ ತನಕದ ಎಲ್ಲ ಧ್ವನಿಗಳೂ ಲಭ್ಯ. 25ರಿಂದ 30 ಲಕ್ಷ ರೂ. ಮೌಲ್ಯದ ಸಂಗೀತೋಪಕರಣಗಳು ಅವರ ಸಂಗ್ರಹದಲ್ಲಿವೆ. ಯಾವುದೇ ಹೊಸ ವಾದ್ಯಗಳನ್ನು ಕಂಡರೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಸೂಕ್ತ ಮತ್ತು ವಿಶಿಷ್ಟವೆನಿಸಿದಲ್ಲಿ ಅದನ್ನು ಹಣ ಕೊಟ್ಟು ತಮ್ಮ ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತಿದ್ದರು. 

ಅಬ್ಜಾರಣ್ಯದ ಅಭಿವೃದ್ಧಿ
‘ಅಬ್ಜಾರಣ್ಯ’ ಉಡುಪಿಯ ಪೌರಾಣಿಕ ಕತೆಯನ್ನು ಸಾರುವ ಪ್ರಾಚೀನ ತಾಣ. ಉಡುಪಿ ನಗರದ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿರುವ ಇದು ಶೀರೂರು ಮಠಕ್ಕೆ ಸೇರಿದ ಸ್ಥಳ. ಇಲ್ಲಿನ ನಾಗನಗುಡಿಯನ್ನು ಅಷ್ಟಪಟ್ಟಿ ಆಕೃತಿಯಲ್ಲಿ ಅಭಿವೃದ್ಧಿಪಡಿಸಿದ ಶ್ರೀಪಾದರು ಸರೋವರವನ್ನೂ ಅಭಿವೃದ್ಧಿಪಡಿಸಿದ್ದರು.

‘ಶ್ರೀ ಲಕ್ಷ್ಮೀಂದ್ರತೀರ್ಥ ಆ್ಯಕ್ಟ್’ ರಾಮನವಮಿ ಉತ್ಸವದ ಹಿನ್ನೆಲೆ
1940ರ ದಶಕದಲ್ಲಿ ಉಡುಪಿಯ ಶ್ರೀಕೃಷ್ಣ ಮಠವನ್ನು ಸರಕಾರೀಕರಣಗೊಳಿಸುವ ಸರಕಾರದ ನಿಲುವಿಗೆ ವಿರುದ್ಧವಾಗಿ ಶ್ರೀ ಶೀರೂರು ಮಠದ ಅಂದಿನ ಶ್ರೀ ಲಕ್ಷ್ಮೀಂದ್ರತೀರ್ಥರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಈ ಸಂಕೀರ್ಣ ಸನ್ನಿವೇಶದಲ್ಲಿ ಉಡುಪಿಯ ಮಠಾಧೀಶರು ಶ್ರೀ ಶೀರೂರು ಮುಖ್ಯಪ್ರಾಣ ದೇವರ ಸನ್ನಿಧಾನಕ್ಕೆ ಆಗಮಿಸಿ ಮನೋಭೀಷ್ಠವನ್ನು ಈಡೇರಿಸಿಕೊಡುವಂತೆ ಪ್ರಾರ್ಥಿಸುತ್ತಾರೆ. ಶ್ರೀ ಲಕ್ಷ್ಮೀಂದ್ರತೀರ್ಥರು ಮುಖ್ಯಪ್ರಾಣ ದೇವರಿಗೆ ನೂತನ ರಥವನ್ನು ಸಮರ್ಪಿಸಿ ಪ್ರತಿ ವರ್ಷ ರಾಮನವಮಿಯಂದು ಮುಖ್ಯಪ್ರಾಣ ದೇವರ ರಥೋತ್ಸವ ನಡೆಸುವ ಹರಕೆಯನ್ನು ನಿವೇದಿಸಿ ರಥೋತ್ಸವವನ್ನು ಪ್ರಾರಂಭಿಸುತ್ತಾರೆ. ಸುಮಾರು 15 ವರ್ಷಗಳ ಸುದೀರ್ಘ‌ ಕಾನೂನು ಸಮರದಲ್ಲಿ ಶ್ರೀ ಲಕ್ಷ್ಮೀಂದ್ರತೀರ್ಥರ ಮನವಿಯನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸುತ್ತದೆ. ಕಾನೂನು ಅಧ್ಯಯನಕ್ಕೆ ‘ಶ್ರೀ ಲಕ್ಷ್ಮೀಂದ್ರತೀರ್ಥ ಆ್ಯಕ್ಟ್’ ಎನ್ನುವ ನೂತನ ಅಧ್ಯಾಯವು ಸೇರ್ಪಡೆಗೊಳ್ಳುತ್ತದೆ.

ತಾವೇ ಕಾರು ಡ್ರೈವ್‌ ಮಾಡಿದ್ದರು!
ಶೀರೂರು ಶ್ರೀಗಳ ವ್ಯಕ್ತಿತ್ವ ವಿಭಿನ್ನ ಎಂಬುದಕ್ಕೆ ಪರ್ಯಾಯ ಮೆರವಣಿಗೆಯೂ ಸಾಕ್ಷಿ. ಪ್ರತಿ ಪರ್ಯಾಯ ಮೆರವಣಿಗೆಯಲ್ಲಿಯೂ ಅವರು ಸಾಂಪ್ರದಾಯಿಕ ದಿರಿಸು ಧರಿಸಿ ಆಕರ್ಷಕ ರಥದ ಮಾದರಿಯ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಪರ್ಯಾಯ ಮೆರವಣಿಗೆಯಲ್ಲಿ ಅವರು ವಿಶೇಷ ಆಕರ್ಷಣೆಯಾಗಿರುತ್ತಿದ್ದರು. ಸೋಮವಾರದಂದು ಶೀರೂರು ಮೂಲಮಠ ಪರಿಸರದಲ್ಲಿ ನಡೆದಿದ್ದ ವನಮಹೋತ್ಸವ ಸಂದರ್ಭದಲ್ಲಿ ಶೀರೂರು ಶ್ರೀಗಳು ತಮ್ಮ ಪಾಜೆರೊ ಕಾರನ್ನು ತಾವೇ ಡ್ರೈವ್‌ ಮಾಡಿದ್ದರು.

ವಾದ್ಯ ಸಂಗೀತ ಕುತೂಹಲಿ
ಮೊದಲ ಪರ್ಯಾಯದ ಅವಧಿಯಲ್ಲಿ (1978-80ರ) ಸಂತ ಭದ್ರಗಿರಿ ಕೇಶವದಾಸರು ಒಂದು ಅಡಿ ಅಗಲದ ಕ್ಯಾಸಿಯೋ ಕೀಬೋರ್ಡ್‌ನಲ್ಲಿ ಹರಿಕಥೆ ನಡೆಸಿಕೊಟ್ಟಾಗ ಶ್ರೀಗಳಿಗೂ ಕೀಬೋರ್ಡ್‌ ಮೇಲೆ ಕುತೂಹಲ ಬೆಳೆಯಿತು. ಅದೇ ಆಸಕ್ತಿ ಶ್ರೀಪಾದರನ್ನು ಕೀಬೋರ್ಡ್‌ನಲ್ಲಿ ನಿಷ್ಣಾತರನ್ನಾಗಿಸಿತು. ಜತೆ ವೀಣೆ, ಕೊಳಲು, ಡ್ರಮ್‌ ವಾದನವನ್ನು ಅಭ್ಯಸಿಸಿದ್ದಾರೆ. 

ಶಿಕ್ಷಣ, ಕಲೆಗೆ ಪ್ರೋತ್ಸಾಹ 
ಹಲವು ಶಾಲೆಗಳ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ‘ಶ್ರೀಕೃಷ್ಣವಿದ್ಯಾನಿಧಿ’ ಯೋಜನೆ ಸ್ಥಾಪಿಸಿದರು. ಸುಮಾರು 35 ಲ.ರೂ. ವಿದ್ಯಾರ್ಥಿವೇತನ ವಿತರಣೆ, ಶೀರೂರು ಮೂಲಮಠದ ಸಮೀಪದ ಹರಿಖಂಡಿಗೆ ಶಾಲೆಗೆ ಸ್ವಾಗತ ಗೋಪುರ ಕಟ್ಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಶೇಷ ಪ್ರಾಶಸ್ತ್ಯ ನೀಡಿದ್ದರು. ಪ್ರಸಿದ್ಧ ಯಕ್ಷಗಾನ ತಂಡಗಳು 200ಕ್ಕೂ ಹೆಚ್ಚು ದಿನಗಳಲ್ಲಿ ಪ್ರದರ್ಶನ ನೀಡಿವೆ. ಶಿವಮಣಿ, ಪ್ರವೀಣ್‌ ಗೋಡ್ಖಿಂಡಿಯಂತಹ ಪ್ರಸಿದ್ಧ ಕಲಾವಿದರು ಕಲಾಸೇವೆಗೆ ಅವಕಾಶ ಕಲ್ಪಿಸಿದ್ದು ವಿಶೇಷ. ಇನ್ನೂ ವಿಶಿಷ್ಟ ಎಂಬಂತೆ ಇತ್ತೀಚೆಗಷ್ಟೇ ಶೀರೂರಿನಲ್ಲಿ ತಮ್ಮ ಭಕ್ತ ಸಂಗೀತಗಾರ ಶಿವಮಣಿಯ ಸಂಗೀತ ಅಕಾಡೆಮಿಗೆ 5 ಎಕ್ರೆ ಜಾಗ ನೀಡಿದ್ದರು.  

ಚಿತ್ರಕಲೆಯೆಂದರೆ ಅಚ್ಚುಮೆಚ್ಚು
ಚಿತ್ರಕಲೆಯಲ್ಲಿ ಇವರಿಗಿದ್ದ ಆಸಕ್ತಿ ಅಪಾರ. ಯಾವುದೇ ಕಲೆಯಾಗಲೀ, ಮಾಧ್ಯಮವಾಗಲೀ ಅದರ ಕುರಿತು ಮಾತನಾಡಬಲ್ಲವರಾಗಿದ್ದರು. ಛಾಯಾಚಿತ್ರಗ್ರಹಣದಲ್ಲಿ ವಿಶೇಷ ಆಸಕ್ತಿ ಇತ್ತು. ಹೀಗಾಗಿ 1994-96, 2010-12ರ ಪರ್ಯಾಯದಲ್ಲಿ ಆ ಹೆಚ್ಚಿನ ಸಂಭ್ರಮದ ಕ್ಷಣಗಳನ್ನು ಪ್ರಸಿದ್ಧ ಛಾಯಾಚಿತ್ರಗಾರರಿಂದ ದಾಖಲಿಸಿ ವೆಬ್‌ಸೈಟ್‌ ಮೂಲಕ ಭಕ್ತರಿಗೆ ಪಸರಿಸಿದ್ದನ್ನು ಸ್ಮರಿಸಬಹುದು. 

ಅಲಂಕಾರದಲ್ಲಿ ನಿಸ್ಸೀಮರು

ಶೀರೂರು ಶ್ರೀ ಶ್ರೀಕೃಷ್ಣನ ಅಲಂಕಾರದಲ್ಲಿ ನಿಸ್ಸೀಮರು. ಶ್ರೀ ವಾದಿರಾಜರು 365 ದಿನ 365 ವಿಧದ ಅಲಂಕಾರಗಳನ್ನು ಮಾಡಿದ್ದರು ಎಂಬ ಉಲ್ಲೇಖವಿದೆ. ಅದರಂತೆ ಶೀರೂರು ಶ್ರೀಗಳೂ ರಾಮಾಯಣ, ಮಹಾಭಾರತ, ಭಾಗವತಗಳ ಸಹಿತ, ಶ್ರೀಕೃಷ್ಣನ ವ್ಯಕ್ತಿತ್ವಗಳನ್ನು ವಿವರಿಸುವ ಗ್ರಂಥಗಳ ಆಧಾರದಲ್ಲಿ ದಿನಕ್ಕೊಂದು ಬಗೆಯಲ್ಲಿ ಕೃಷ್ಣನನ್ನು ಅಲಂಕರಿಸಿದ್ದರು. ಅದೂ ಅವರ ವಿಶೇಷ.

ತಂತ್ರಜ್ಞಾನದಲ್ಲೂ ಆಸಕ್ತಿ
ಪೂಜೆ ಪಾಠ ಹೊರತು ವಿರಾಮದ ಅವಧಿಯಲ್ಲಿ ವಿದ್ಯುತ್‌, ತಾಂತ್ರಿಕತೆ ಇರುವ ವಸ್ತು ಸಿಕ್ಕಿದರೆ ಅದರ ಚಲನೆ, ನಿರ್ಮಾಣ ಸೂತ್ರ ತಿಳಿಯುವ ಕುತೂಹಲವಿತ್ತು. ಯಾವುದೇ ತಾಂತ್ರಿಕ ವಸ್ತು ಸಿಗಲಿ, ಅದನ್ನು ತೆರೆದು ಅದರ ಸಂರಚನೆಯನ್ನು ಅರಿಯವರೆಗೂ ಸುಮ್ಮನಿರುತ್ತಿರಲಿಲ್ಲ. 

ಈಜಿನಲ್ಲೂ ಸೈ  
ಕಡಲಲ್ಲಿ ಈಜಿ ವಿಶ್ವದಾಖಲೆ ಮಾಡಿರುವ ಗೋಪಾಲ ಖಾರ್ವಿಗೆ ಪ್ರೋತ್ಸಾಹ ನೀಡಲೆಂದು ಅವರೊಂದಿಗೆ ಮೈಲುಗಟ್ಟಲೆ ಈಜಿ ಅಲ್ಲೂ ತಮ್ಮ ಪ್ರಾವೀಣ್ಯ ಮೆರೆದಿದ್ದರು. 2008ರ ಸೂರ್ಯಗ್ರಹಣದಂದು ಸಮುದ್ರದಲ್ಲಿ 3 ಗಂಟೆ ಸೂರ್ಯಾಭಿಮುಖವಾಗಿ ಶವಾಸನದಲ್ಲಿ ಮಳೆಗಾಗಿ ‘ಪರ್ಜನ್ಯಮಂತ್ರ’ ಜಪಿಸಿದ್ದರು. ಇದೂ ವಿಶೇಷವೇ.


ಗಣ್ಯರ ಸಂತಾಪ

ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೇಯಸ್ಸಾಗಲಿ: ಪೇಜಾವರ ಶ್ರೀ
ಅತ್ಯಂತ ದುಃಖವಾಗಿದೆ. ನಮಗೆ ಅವರ ಮೇಲೆ ವೈಯಕ್ತಿಕವಾಗಿ ವಿಶ್ವಾಸವಿತ್ತು. ಅವರಿಗೆ ಶ್ರೇಯಸ್ಸನ್ನು ಪ್ರಾರ್ಥಿಸುತ್ತೇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ನೇರ ನಡೆಯ ಯತಿ: ಡಾ| ಹೆಗ್ಗಡೆ
ಸ್ವಾಮೀಜಿಯವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಸಂಸ್ಕೃತ ಮತ್ತು ಮಧ್ವ ತತ್ವಗಳಲ್ಲಿ ಘನ ವಿದ್ವಾಂಸರಾಗಿದ್ದು, ಪರ್ಯಾಯದ ಅವಧಿಯಲ್ಲಿ ನಿತ್ಯವೂ ಶ್ರೀಕೃಷ್ಣನಿಗೆ ವೈವಿಧ್ಯಮಯ ಅಲಂಕಾರಗಳನ್ನು ಮಾಡಿದ್ದರು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಜನಸಾಮಾನ್ಯರ ಸ್ವಾಮೀಜಿ: ಬಿಷಪ್‌
‘ಜನಸಾಮಾನ್ಯರ ಅಸಾಮಾನ್ಯ ಸ್ವಾಮೀಜಿ’ ಶೀರೂರು ಶ್ರೀಗಳು ತಮ್ಮ ಮೂರು ಪರ್ಯಾಯಗಳ ಅವಧಿಯಲ್ಲಿ ಅದನ್ನು ಸಾಬೀತು ಮಾಡಿದ್ದರು. ಎಲ್ಲ ಸಮುದಾಯದವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಮತ್ತು ನಿಯೋಜಿತ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.

ಉನ್ನತ ಮಟ್ಟದ ತನಿಖೆಯಾಗಲಿ: ಕೇಮಾರು ಶ್ರೀ
ಐದು ದಿನಗಳ ಹಿಂದೆ ಶ್ರೀಗಳ ಜತೆಗೆ ಮಾತನಾಡಿದ್ದೆ. ಪಟ್ಟದ ದೇವರ ವಿಚಾರವಾಗಿ ಬುಧವಾರ, ಗುರುವಾರದಂದು ಪ್ರಕರಣ ದಾಖಲಿಸುವವರಿದ್ದರು. ವಿಠ್ಠಲ ಎಂದು ಕನವರಿಸಿ, ಬಿಕ್ಕುತ್ತಿದ್ದರು. 48 ದಿನಗಳೊಳಗೆ ಪಟ್ಟದ ದೇವರು ಬೇಕು ಎಂದಿದ್ದರು. ಕಾನೂನು ಹೋರಾಟದಲ್ಲಿ ಜಯವಾಗುತ್ತದೆ ಎಂದು ವಕೀಲರೂ ಹೇಳಿದ್ದರು. ಮಡಿವಂತಿಕೆ ಬಿಟ್ಟು ಸಾಮಾನ್ಯರೊಂದಿಗೆ ಮುಕ್ತವಾಗಿದ್ದವರು ಅವರು. ಅದರಿಂದಲೇ ತೊಂದರೆಯಾಯಿತೇ ಎಂಬ ಸಂದೇಹ ನನ್ನನ್ನು ಕಾಡುತ್ತಿದೆ. ಉನ್ನತ ಮಟ್ಟದ ತನಿಖೆಯಾಗಬೇಕು, ಸರಕಾರ ಮಧ್ಯಪ್ರವೇಶಿಸಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಆಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಗೃಹಸಚಿವರ ಜತೆ ಮಾತಾನಾಡಿದ್ದೇನೆ: ಪ್ರಮೋದ್‌ 
ಅನಿರೀಕ್ಷಿತ ಅಗಲಿಕೆ. ಎಲ್ಲರಿಗೂ ನೋವಿನ ವಿಚಾರ. ಅಷ್ಟ ಮಠಾಧೀಶರ ಪೈಕಿ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದ ಸ್ವಾಮೀಜಿ. ಸಾವಿನ ಕುರಿತು ಅನೇಕ ವಿಚಾರಗಳ ಚರ್ಚೆಯಾಗುತ್ತಿದೆ. ನಾನು ಗುರುವಾರ ಬೆಳಗ್ಗೆ ಗೃಹಸಚಿವ ಪರಮೇಶ್ವರ್‌ ಹಾಗೂ ಎಸ್ಪಿ ಜತೆ ಮಾತನಾಡಿದ್ದೇನೆ,. ತನಿಖೆಗೂ ಮೊದಲು ಯಾರ ಮೇಲೂ ಅನುಮಾನ ಪಡಬಾರದು. ಎಷ್ಟೇ ಶ್ರೇಷ್ಠ ವ್ಯಕ್ತಿ ಇದರ ಹಿಂದೆ ಇದ್ದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಶೀರೂರು ಶ್ರೀಗಳ ಭಕ್ತನಾಗಿ ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

ಧೀರ, ಉದಾತ್ತ: ಸುಬ್ರಹ್ಮಣ್ಯ ಸ್ವಾಮೀಜಿ
ಶಿರೂರು ಶ್ರೀಗಳು ಸನಾತನ ಧರ್ಮ, ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು. ಧೀರ ಮತ್ತು ಉದಾತ್ತ ನಿಲುವಿನಿಂದ ಸಮಾಜಕ್ಕೆ ಹತ್ತಿರವಾಗಿದ್ದರು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸ್ಮರಿಸಿದ್ದಾರೆ.

ನಿಷ್ಪಕ್ಷ ತನಿಖೆಯಾಗಲಿ: ರಘುಪತಿ ಭಟ್‌
ಜನಸಾಮಾನ್ಯರ ಪ್ರೀತಿಗೆ ಪಾತ್ರರಾದ ಸ್ವಾಮೀಜಿ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಎಸ್‌ಪಿ ಜತೆಗೂ ಮಾತನಾಡಿದ್ದೇನೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ.

ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಶ್ರೀ ರಮಾನಂದ ಗುರೂಜಿ, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ‌ ರೆ| ಡಾ| ಜೆರಾಲ್ಡ್ ಲೋಬೋ, ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಲಾಲಾಜಿ ಮೆಂಡನ್‌, ಸಂಸದ ಪ್ರಹ್ಲಾದ ಜೋಶಿ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.