ದೇಗುಲಗಳಲ್ಲಿ ಮುಂದುವರಿದ ಭಕ್ತಸಂದಣಿ
Team Udayavani, Apr 21, 2019, 6:10 AM IST
ಧಮಸ್ಥಳದಲ್ಲಿ ವಿಷು ಜಾತ್ರೆ ಪ್ರಯುಕ್ತ ನಂದಿಲಾಲಕಿಯಲ್ಲಿ ವಿಹಾರೋತ್ಸವದೊಂದಿಗೆ ಕಂಚಿಮಾರುಕಟ್ಟೆ ಉತ್ಸವ ಜರಗಿತು.
ಬೆಳ್ತಂಗಡಿ/ಕೊಲ್ಲೂರು:ಸರಣಿ ರಜೆ ಪರಿಣಾಮ ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಶನಿವಾರವೂ ಮುಂದುವರಿದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ 40 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕೊಲ್ಲೂರಿನಲ್ಲಿ 20 ಸಾವಿರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವಿಯ ದರ್ಶನ ಪಡೆದರು. ಮಧ್ಯಾಹ್ನ 12 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಧರ್ಮಸ್ಥಳದಲ್ಲಿ ವಿಷು ಜಾತ್ರ ಪ್ರಯುಕ್ತ ಶನಿವಾರ ದೇವರ ಕಟ್ಟೆ ಉತ್ಸವ ಜರಗಿತು. ಸರ್ವಪೂಜೆ, ಶತರುದ್ರಾಭಿಷೇಕ ಜರಗಿತು. ದೇವರ ದರ್ಶನಕ್ಕೆ, ಅನ್ನಪ್ರಸಾದಕ್ಕೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.
ಎ. 19ರಂದು ಶುಕ್ರವಾರ ರಾತ್ರಿ 8.30ಕ್ಕೆ ಉತ್ಸವ ಆರಂಭಗೊಂಡು ನಂದಿಲಾಲಕಿಯಲ್ಲಿ ವಿಹಾರೋತ್ಸವದೊಂದಿಗೆ ಕಂಚಿ ಮಾರು ಕಟ್ಟೆಯಲ್ಲಿ ಉತ್ಸವ ಜರಗಿತು. ಉತ್ಸವದಲ್ಲಿ ಊರ ಪರವೂರು ನೂರಾರು ಭಕ್ತರು ಉತ್ಸವ ಕಣ್ತುಂಬಿಕೊಂಡರು.
ದೇವಸ್ಥಾನದಲ್ಲಿ ಎ. 21ರಂದು
ರಾತ್ರಿ ಕೆರೆಕಟ್ಟೆ ಉತ್ಸವ, ಎ. 22ರಂದು ರಾತ್ರಿ ಚಂದ್ರಮಂಡಲ, ಗೌರಿ ಮಾರುಕಟ್ಟೆ ಉತ್ಸವ, ಎ. 23ರಂದು ರಾತ್ರಿ ಬ್ರಹ್ಮರಥೋತ್ಸವ ಭೂತಬಲಿ, ಎ.24ರಂದು ಬೆಳಗ್ಗೆ ಕವಟೋದ್ಘಾಟನೆ ರಾತ್ರಿ 6ಗಂಟೆಯಿಂದ ಅವಭೃಥ, ದರ್ಶನ ಬಲಿ, ಧ್ವಜಾವರೋಹಣ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ.