ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ಕೆಲಸ ಪೂರ್ಣ: ಪೇಜಾವರ ಶ್ರೀ
Team Udayavani, Nov 30, 2017, 9:24 AM IST
ಉಡುಪಿ: ಪಂಚಮ ಪರ್ಯಾಯ ಅವಧಿಯಲ್ಲಿ ಹಾಕಿಕೊಂಡಿದ್ದ ವಿವಿಧ ಯೋಜನೆಗಳಲ್ಲಿ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ಎಲ್ಲವೂ ಪೂರ್ಣ ಗೊಂಡಿವೆ. ಇತರ ಕೆಲವು ಯೋಜಿತ ಕಾರ್ಯಗಳು ಬಾಕಿ ಇವೆ. ಅವುಗಳನ್ನು ಪರ್ಯಾಯ ಅವಧಿಯ ಅನಂತರ ಪೂರ್ಣಗೊಳಿಸಲಾಗುವುದು ಎಂದು ಪರ್ಯಾಯ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ರಾಜಾಂಗಣ, ಎರಡು ಛತ್ರಗಳು, ಶ್ರೀಕೃಷ್ಣ ಮಠದ ಸುತ್ತು ಪೌಳಿ ಪುರ್ಣಗೊಂಡಿದೆ. ಸಂಸ್ಕೃತ ಸಮ್ಮೇಳನ, ಧರ್ಮಸಂಸದ್ ಕೂಡ ನಡೆದಿವೆ. ನಮ್ಮ ಆರ್ಥಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಎಲ್ಲ ಕಾರ್ಯಗಳು ನಡೆಯುತ್ತಿವೆ. ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಸಂಕಲ್ಪ ಪೂರ್ಣಗೊಂಡಿಲ್ಲ. ಪಾಜಕದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.
ವಾರದೊಳಗೆ ಮಧ್ವಾಂಗಣ ಪೂರ್ಣ
ರಾಜಾಂಗಣದ ಮೇಲ್ಭಾಗದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮಧ್ವಾಂಗಣದ ಕೆಲಸ ವಾರದೊಳಗೆ ಪೂರ್ಣಗೊಳ್ಳಲಿದೆ. ಅದರ ಉದ್ಘಾಟನೆಗೆ ರಾಜ್ನಾಥ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅನಂತ ಕುಮಾರ್ ಅವರನ್ನೂ ಆಹ್ವಾನಿಸ ಲಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲಾಗಿದೆ. ರಾಜಾಂಗಣವನ್ನು ಅಂದು ವಾಜಪೇಯಿ ಅವರು ಉದ್ಘಾಟಿಸಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆ ಸ್ವಾಮಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನಿರಾಕರಿಸಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಇಚ್ಛೆ. ಅನೇಕ ಕಾರ್ಯ ಕ್ರಮಗಳಲ್ಲಿ ಅವರೊಂದಿಗೆ ನಾನೂ ವೇದಿಕೆ ಹಂಚಿಕೊಂಡಿದ್ದೇನೆ ಎಂದರು.
ಸನ್ಯಾಸ ಸ್ವೀಕಾರದ 80ನೇ ವರ್ಧಂತಿ ನಡೆಯುತ್ತಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಭಗವಂತ ಆಯುಷ್ಯ ನೀಡಿದ್ದಾನೆ. ಅವನಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು.