ಅಂಧನಾದರೂ ಸಾಧಿಸುವ ಛಲದ ಶ್ರೀನಿವಾಸ
Team Udayavani, Jun 30, 2018, 6:00 AM IST
ಕಟಪಾಡಿ: ಹುಟ್ಟು ಅಂಧನಾದರೂ ಸಾಧನೆಗೆ ಕಿಂಚಿತ್ತೂ ಕಡಿಮೆ ಇಲ್ಲ. ಸ್ವಂತಕ್ಕೊಂದು ಕ್ಯಾಂಟೀನ್ ಇಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ಕೀಬೋರ್ಡ್ ನುಡಿಸುವ, ಕಾರು, ಸೈಕಲ್ ಹೊಡೆಯುವ, ಕಲಿಕೆಯಲ್ಲಿ ಬಿಎಸ್ಡಬ್ಲ್ಯೂ ಪದವಿ ಪಡೆದ ಛಲಗಾರ. ಇವರು ಉಡುಪಿ ಜಿಲ್ಲೆಯ ಉದ್ಯಾವರ ಶಂಭುಕಲ್ಲು ಹಳೆ ಗ್ಯಾಸ್ ಗೋಡೌನ್ ಬಳಿಯ ನಿವಾಸಿ ಗಣೇಶ ಪೂಜಾರಿ ಮತ್ತು ಜ್ಯೋತಿ ಅವರ ಪುತ್ರ ಶ್ರೀನಿವಾಸ ಪೂಜಾರಿ (23).
ಇವರು ಮಂಗಳೂರು ಉರ್ವ ಸ್ಟೋರ್ನ ರೋಮನ್, ಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲೆಯಲ್ಲಿ 10ನೇ ತರಗತಿ ಶಿಕ್ಷಣ ಪೂರೈಸಿದ್ದು, ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಬಿ.ಎಸ್.ಡಬ್ಲ್ಯೂ ಪದವಿ ಶಿಕ್ಷಣವನ್ನೂ ಪಡೆದಿದ್ದಾರೆ.
ಕೀಬೋರ್ಡ್ ಕಲಾವಿದ
ನೆಚ್ಚಿನ ಕೀಬೋರ್ಡ್ ನುಡಿಸುವ ಶ್ರೀನಿವಾಸ ಈವರೆಗೆ 70ಕ್ಕೂ ಅಧಿಕ ಆರ್ಕೆಸ್ಟ್ರಾ, ಭಜನ ಕಾರ್ಯಕ್ರಮಲ್ಲಿ ಭಾಗಿ ಯಾಗಿದ್ದಾರೆ.
ಮಿಮಿಕ್ರಿ ಪಟುವಾಗಿಯೂ
ಗುರುತಿಸಿಕೊಂಡಿದ್ದಾರೆ. ಜತೆಗೆ ಯೋಗ ಪಟುವೂ ಹೌದು. ಗಿಟಾರ್ ಕೂಡ ನುಡಿಸುತ್ತಾರೆ. ಇವರಲ್ಲಿದ್ದ ಕಲೆ ಗುರುತಿಸಿದ “ಹರ್ಷ’ ಸಂಸ್ಥೆಯ ಮಾಲಕ ಸೂರ್ಯಪ್ರಕಾಶ್ ಅವರು ಕೀಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದರು. ತುಳು ಕವನ, ಯಕ್ಷಗಾನ ಭಾಗವತಿಕೆಯ ಆಸಕ್ತಿಯೂ ಇವರದು.
ಕಾರು, ಸೈಕಲ್ ಸವಾರಿ
ಯಾರ ನೆರವೂ ಇಲ್ಲದೆ, ಪರಿಸರದ ತನ್ನ ಸ್ನೇಹಿತರ ಮನೆಗೆ ಸೈಕಲ್ ಸವಾರಿ ಮಾಡುವ ಶ್ರೀನಿವಾಸ ಕಾರು ಚಾಲನೆ ಕೂಡ ಮಾಡುತ್ತಾರೆ. ಟಚ್ಸ್ಕ್ರೀನ್ ಮೊಬೈಲ್ ಅನ್ನು ಆಪರೇಟ್ ಮಾಡುತ್ತಾರೆ.
ಕ್ಯಾಂಟೀನ್ ಮೂಲಕ ಸ್ವಾವಲಂಬಿ
ಅಂಗವಿಕಲರ ಇಲಾಖೆಯಿಂದ 35 ಸಾವಿರ ರೂ. ಸಾಲ ಪಡೆದು, ಸ್ನೇಹಿತರ ಸರಕಾರದಿಂದ 1 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟೀನ್ ಶುರುಮಾಡಿದ್ದು, ತಂದೆಯೊಂದಿಗೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಇವರಿಗೆ 1,400 ರೂ. ಮಾಸಾಶನ ಬರುತ್ತಿದೆ. ಸರಕಾರಿ ನೌಕರಿ ನಿಮಿತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪರೀಕ್ಷೆಯನ್ನು ಮೈಸೂರಿನಲ್ಲಿ ಬರೆದಿದ್ದು, 200ರಲ್ಲಿ 187 ಅಂಕ ಗಳಿಸಿದ್ದರೂ ನೌಕರಿಯ ಸೂಚನೆ ಲಭಿಸಿಲ್ಲ.
ಸ್ವಾವಲಂಬಿಯಾಗಿ ನೆರವಾಗುವ ಆಸೆ
ಸರಕಾರಿ ನೌಕರಿ ಪಡೆದು ಅಥವಾ ಸ್ವಾವಲಂಬಿಯಾಗಿ ಹೆತ್ತವರು ಮತ್ತು ಇಬ್ಬರು ತಂಗಿಯರಿರುವ ಕುಟುಂಬಕ್ಕೆ ನೆರವಾಗಬೇಕೆಂಬ ಮಹದಾಸೆ ಇದೆ.
– ಶ್ರೀನಿವಾಸ ಪೂಜಾರಿ
ಕೀಬೋರ್ಡ್ ಕಲಾವಿದ
– ವಿಜಯ ಆಚಾರ್ಯ ಉಚ್ಚಿಲ