ಎಸ್ವಿಎಚ್ಪ.ಪೂ.ಕಾಲೇಜು ನೂತನ ಕಟ್ಟಡ ಲೋಕಾರ್ಪಣೆ
Team Udayavani, Oct 9, 2021, 12:23 PM IST
ಶಿರ್ವ: ಯಾವ ಶಿಕ್ಷಣ ಸಂಸ್ಥೆಯಿಂದ ಪ್ರಬುದ್ಧ ವಿದ್ಯಾರ್ಥಿಗಳು ಹೊರಬಂದು ಸಮಾಜಕ್ಕೆ ಕೊಡುಗೆ ನೀಡುತ್ತಾರೋ ಅಂತಹ ವಿದ್ಯಾಸಂಸ್ಥೆಯು ಗುಣಮಟ್ಟದ ಸಂಸ್ಥೆ ಎಂದು ಗುರುತಿಸಲ್ಪಡುತ್ತದೆ. ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ಎಂದು ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಅವರು ಅ. 8 ರಂದು ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದಿಂದ ಪ್ರವರ್ತಿತ ಇನ್ನಂಜೆಯ ಎಸ್ವಿಎಚ್ ಪ. ಪೂ.ಕಾಲೇಜಿನ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತ ಇನ್ನಂಜೆಯ ವಿದ್ಯಾ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ನಾಸಾದಂತಹ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಗೆ ಕೀರ್ತಿತಂದಿದ್ದಾರೆ.ಇಂದಿನ ಕಾಲಕ್ಕೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಇನ್ನಂಜೆಯ ವಿದ್ಯಾಸಂಸ್ಥೆ ಇನ್ನೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಸಮಾಜಮುಖಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯಅತಿಥಿ ಇನ್ನಂಜೆ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿ ಕರ್ನಾಟಕ ಬ್ಯಾಂಕ್ನ ಮಾಜಿ ಅಧ್ಯಕ್ಷ ಯು.ಕೆ.ಭಟ್ ಮಾತನಾಡಿ ತನ್ನ ವಿದ್ಯಾರ್ಥಿ ಜೀವನದ ಕಾಲದ ಶಿಕ್ಷಕರಲ್ಲಿ ಇದ್ದ ಬದ್ಧತೆ, ವಿದ್ಯಾರ್ಥಿಗಳ ಬಗ್ಗೆ ಇದ್ದ ಕಾಳಜಿಯ ಫಲವಾಗಿ ತಾನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು ಎಂದು ಹೇಳಿದರು.
ಬಿಳಿಯಾರು ಗೋವಿಂದ ಭಟ್, ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಪ್ರತಿನಿಧಿ ಬಿಳಿಯಾರು ಪದ್ಮನಾಭ ಭಟ್ ಶುಭ ಹಾರೈಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ ಸೋದೆ ಶ್ರೀ ವಾದಿರಾಜ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ವಿದ್ಯಾಭಿಮಾನಿಗಳು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರ ಕೋರಿ ಸಂಸ್ಥೆಯ ಬೆಳವಣಿಗೆಗಳ ಹಿಂದೆ ಸೋದೆ ಶ್ರೀಗಳ ಕತೃìತ್ವ ಶಕ್ತಿ ಕೆಲಸ ಮಾಡುತ್ತಿದ್ದು ,ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲ ಪುಂಡರೀಕಾಕ್ಷ ಕೊಡಂಚ ಸ್ವಾಗತಿಸಿದರು. ಹಿಂದಿ ಉಪನ್ಯಾಸಕ ರಾಜೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿ,ಎಸ್ವಿಎಚ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ನಟರಾಜ ಉಪಾಧ್ಯಾಯ ವಂದಿಸಿದರು.