ಐದು ವರ್ಷಗಳಿಂದಲೂ ಮುನ್ನಡೆ!
Team Udayavani, May 25, 2019, 6:00 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಮತದಾರರ ನಾಡಿಮಿಡಿತ ಒಂದೇ ತೆರನಾಗಿ ಮುಂದುವರಿಯುತ್ತಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ, ಕುಂದಾಪುರ ಹೊರತುಪಡಿಸಿ ಬೈಂದೂರು, ಕಾಪು, ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ವಿಜಯಿಯಾಗಿ ದ್ದರು. ಆಗಿನ ಸರಕಾರದ ಆರಂಭ ಕಾಲದಲ್ಲಿ ವಿನಯ ಕುಮಾರ ಸೊರಕೆ ಸಚಿವರಾದರೆ, ಉತ್ತರಾರ್ಧದಲ್ಲಿ ಪ್ರಮೋದ್ ಮಧ್ವರಾಜ್ ಸಚಿವರಾದರು.
2014ರ ಲೋಕಸಭಾ ಚುನಾವಣೆ ಯಲ್ಲಿ ಮೋದಿ ಗಾಳಿ ಬೀಸಲು ಆರಂಭವಾಯಿತು. ಆಗ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಶೋಭಾ ಈಗ ಮತ್ತೆ ದಾಖಲೆ ಸೃಷ್ಟಿಸಿ ವಿಜಯಿಯಾಗಿದ್ದಾರೆ. ಈ ಮಧ್ಯೆ 2018ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ದಾಖಲೆ ನಿರ್ಮಿಸಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಉಳಿದೆಡೆ ಬಿಜೆಪಿ ಪಾರಮ್ಯ ಸಾಧಿಸಿತು.
ಇದಕ್ಕೂ ಹಿಂದೆ ಉಡುಪಿ ನಗರಸಭೆ ಕಾಂಗ್ರೆಸ್ ಕೈಯಲ್ಲಿತ್ತು. ನಗರಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಗತವೈಭವವನ್ನು ಮರು ಸ್ಥಾಪಿಸಿತು. ಬಿಜೆಪಿ ಸಾಧಿಸಿದ ಹಿಡಿತ ಈಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿಯೂ ಮುಂದುವರಿದಿದೆ.
ಮೋದಿಯವರ ಕಠಿನ ನಿರ್ಧಾರ ಗಳು, ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ, ಆಡಳಿತದಲ್ಲಿ ಬಿಗು ಧೋರಣೆ ಜನರ ಮೇಲೆ ಪ್ರಭಾವ ಬೀರುವಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಸಂಘಟ ನಾತ್ಮಕವಾಗಿ ಬಿಜೆಪಿಯು ಸಕ್ರಿಯ ವಾಗಿದೆ. ಇದಕ್ಕೆ ಉದಾಹರಣೆ ಶೋಭಾ ಬಗ್ಗೆ ಮೊದಲು ಇದ್ದ ವಿರೋಧಗಳನ್ನು ಅಡಗಿಸಿದ್ದು. ಕಾರ್ಯಕರ್ತರು, ನಾಯಕರಿಗೆ ಅಸಮಾಧಾನವಿದ್ದರೂ ಪಕ್ಷ ಹಿತ ಮುಖ್ಯ ಎಂದು ನಾಯಕರು, ಕಾರ್ಯಕರ್ತರು ತೋರಿಸಿ ಕೊಟ್ಟಿರುವುದು ಬಿಜೆಪಿ ಭೀಮ ಬಲ ತುಂಬಿದೆ. ಮತಗಟ್ಟೆ ವಾರು ಕಾರ್ಯಕರ್ತರ ಪಡೆ, ಅವರಿಗೊಬ್ಬ ನಾಯಕ, ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ ಬಿಜೆಪಿ ದಾಪುಗಾಲಿಗೆ ಇಂಬು ನೀಡುತ್ತಿದೆ.
ಪರಿಣಾಮ ಬೀರದ ಬಲ
ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಸ್ಥಾಪನೆಯಾಯಿತು. ಜಿಲ್ಲೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾದ ಪ್ರತಾಪಚಂದ್ರ ಶೆಟ್ಟಿಯವರು ಸಭಾಪತಿಯಾದರೆ, ಕರಾವಳಿ ಮೂಲದ ಡಾ| ಜಯಮಾಲಾ ಉಸ್ತುವಾರಿ ಸಚಿವರಾದರು. ಆದರೆ ಸರಕಾರದ ಈ ಬಲ ಮತ್ತೆ ನಡೆದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಮೇಲೆ ಪರಿಣಾಮ ಬೀರಲಿಲ್ಲ.