ಕೊಮೆ : ಸಮುದ್ರಕ್ಕಿಳಿದ ಬೆಂಗಳೂರಿನ ಓರ್ವ ನೀರುಪಾಲು
Team Udayavani, May 17, 2019, 6:16 PM IST
ತೆಕ್ಕಟ್ಟೆ: ಸಮುದ್ರದಲ್ಲಿ ಆಟವಾಡಲು ಹೋದ ಬೆಂಗಳೂರು ಮೂಲದ ಓರ್ವ ನೀರುಪಾಲಾದ ಘಟನೆ ಶುಕ್ರವಾರ ಸಂಜೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕೊಮೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಸುಮಾರು 15 ಜನರಿದ್ದ ತಂಡ ಸಮುದ್ರಕ್ಕಿಳಿದಿತ್ತು. ನೀರಿನ ಅಬ್ಬರ ಜೋರಾಗಿದ್ದ ಕಾರಣ ಸ್ಥಳೀಯರು ನೀರಿಗಿಳಿಯದಂತೆ ಎಚ್ಚರಿಸಿದ್ದರೂ ಕೂಡ ಲೆಕ್ಕಿಸದೆ ತಂಡ ನೀರಿಗೆ ಇಳಿದು ಮೋಜು ಮಾಡಿತ್ತು ಎನ್ನಲಾಗಿದೆ.
ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯ ನಡೆಸಿದರೂ ಕೂಡ ನೀರಿನ ಅಬ್ಬರ ಜಾಸ್ತಿ ಇದ್ದ ಕಾರಣ ಎಲ್ಲರನ್ನು ಬದುಕಿಸಲು ಸಾಧ್ಯವಾಗಿಲ್ಲ. ಸ್ಥಳೀಯರ ರಕ್ಷಣಾ ಕಾರ್ಯದ ಮೂಲಕ ಇಬ್ಬರನ್ನು ರಕ್ಷಿಸಿದ್ದು ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಮಹಾಬಲ ಬಂಗೇರ, ಸಂತೋಷ್, ಗಣೇಶ ಪೂಜಾರಿ, ನಾಗರಾಜ್, ಸಂದೀಪ್, ಸಂಪತ್ ಮತ್ತು ರಾಘವೇಂದ್ರ ಅವರಿದ್ದ ತಂಡ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.