ಹಿಂದೂ ವಿರೋಧಿ ಸರಕಾರಕ್ಕೆ ಚುನಾವಣೆಯಲ್ಲಿ ಉತ್ತರ
Team Udayavani, Jan 14, 2018, 2:38 PM IST
ಉಡುಪಿ: ಬಿಜೆಪಿ ಮತ್ತು ಸಂಘ ಪರಿವಾರವನ್ನು ಉಗ್ರವಾದಿಗಳೆಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನು ಖಂಡಿಸಿ ಅವರಿಬ್ಬರು ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಶನಿವಾರ ಜಿಲ್ಲಾ ಬಿಜೆಪಿ ಸದಸ್ಯರಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿ, ಆರ್ಎಸ್ಎಸ್ನಿಂದ ಕೊಡುಗೆಗಳೇ ಇಲ್ಲವೆಂದು ಹೇಳುವ ಕಾಂಗ್ರೆಸ್ಸಿಗರಿಗೆ ಇತಿಹಾಸವೇ ಗೊತ್ತಿಲ್ಲ. ಇಂದು ಉಗ್ರರೆಂದು ಹೇಳಲಾಗುತ್ತಿರುವ ಆರ್ಎಸ್ಎಸ್ ಸ್ವಯಂ ಸೇವಕರಿಗೆ ಮಾಜಿ ಪ್ರಧಾನಿ ನೆಹರೂ ಅವರು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅವಕಾಶ ಕೊಟ್ಟದ್ದನ್ನು ಮರೆತಿದ್ದಾರೆ. ಹಿಂದೂಗಳ ಅವಹೇಳನ ನಿಲ್ಲಿಸಿ. ಇಂತಹ ಹಿಂದೂ ವಿರೋಧಿ ಚಟುವಟಿಕೆಗೆ ಬರುವ ಚುನಾವಣೆಯಲ್ಲಿ ಉತ್ತಮ ಉತ್ತರ ಸಿಗಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಸಂತೋಷ ಮರಕಾಲ, ಶರತ್ ಮಡಿವಾಳ ಮುಂತಾದದವರ ಹತ್ಯೆಯಾದಾಗ ಬಿಜೆಪಿ,ಆರ್ಎಸ್ಎಸ್ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವೇ? ಹಿಂದೂ ಧರ್ಮದ ಬಗ್ಗೆ ನಿಮಗೆ ನಿಜವಾದ ಅಭಿಮಾನ ಇದ್ದರೆ ಪರ್ಯಾಯ ಪೇಜಾವರ ಶ್ರೀಗಳ ಆಹ್ವಾನವನನ್ನು ಧಿಕ್ಕರಿಸಿದ ಮುಖ್ಯಮಂತ್ರಿಗಳ ಬದುಕಿಗೆ ಅರ್ಥ ಗೊತ್ತಿಲ್ಲ. ಇದನ್ನು ಹಿಂದೂ ವಿರೋಧಿಯನ್ನದೇ ಮತ್ತೇನನ್ನಬೇಕು ಎಂದು ಅವರು ಪ್ರಶ್ನಿಸಿದರು.
ಉಡುಪಿ ಜಿ. ಪಂ, ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷ ಶಿಲಾ ಶೆಟ್ಟಿ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ನಯನಾ ಗಣೇಶ್, ಸುವರ್ದನ ನಾಯಕ್, ಉಪೇಂದ್ರ ನಾಯ್ಕ, ಶೀಶಾ ನಾಯ್ಕ, ಹೆರ್ಗ ಅಕ್ಷಿತ್ ಶೆಟ್ಟಿ, ಪ್ರಭಾಕರ ಪೂಜಾರಿ, ಸುರೇಶ್ ನಾಯಕ್ ಕುಯಿಲಾಡಿ, ಶ್ರೀಕಾಂತ್ ನಾಯ್ಕ ಉಪಸ್ಥಿತರಿದ್ದರು.