ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದರೆ ಪ್ರಯೋಜನ
Team Udayavani, Feb 28, 2019, 1:00 AM IST
ಹೆಬ್ರಿ: ನೀರಿನ ಸಮಸ್ಯೆಯನ್ನೆದುರಿಸುತ್ತಿರುವ ಇಲ್ಲಿನ ಗ್ರಾ. ಪಂ. ವ್ಯಾಪ್ತಿಯಲ್ಲಿ ಚಾರ ಬಹುಗ್ರಾಮ ಕುಡಿಯುವ ಯೋಜನೆ ಮೇಲ್ದರ್ಜೆಗೆ ಏರಿದರೆ ಸಮಸ್ಯೆ ಸಂಪೂರ್ಣ ದೂರವಾಗಲು ಸಾಧ್ಯ. ಹೆಬ್ರಿ, ಚಾರ ಸುತ್ತಮುತ್ತಲಿನ ಗ್ರಾಮಗಳಿಗೆ ನೀರುಣಿಸುತ್ತಿರುವ ಚಾರ ಅಣೆಕಟ್ಟನ್ನು ಏರಿಸಿ ಹೆಚ್ಚಿನ ನೀರನ್ನು ನಿಲ್ಲುವ ಹಾಗೆ ಮಾಡಿದಲ್ಲಿ ನೀರಿನ ಅಭಾವದಿಂದ ಮುಕ್ತಿ ಪಡೆಯಬಹುದಾಗಿದೆ.
ಈ ವ್ಯಾಪ್ತಿಯಲ್ಲಿ 6,006 ಜನಸಂಖ್ಯೆಯಿದ್ದು 1,380 ಕುಟುಂಬಗಳು ಇವೆ. 742 ಖಾಸಗಿ ಬಾವಿಗಳು, 28 ಸರಕಾರಿ ಬಾವಿಗಳಿದ್ದು ಶೇ.50ರಷ್ಟು ಜನ ಪಂಚಾಯತ್ ನೀರನ್ನೇ ಅವಲಂಬಿಸಿದ್ದಾರೆ. ಪಂ. ವ್ಯಾಪ್ತಿಯಲ್ಲಿ 349ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ. ಕಳೆದ ಬಾರಿ ಸಮಸ್ಯೆ ಇದ್ದ ಪ್ರದೇಶಗಳಾದ ಬಂಗಾರುಗುಡ್ಡೆ,ಸಾಂತೋಳ್ಳಿ ಮೊದಲಾದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಯಾಗಿದೆ.
ಎಲ್ಲೆಲ್ಲಿ ಸಮಸ್ಯೆ
ಬಂಗಾರು ಗುಡ್ಡೆ ಸಾಂತೋಳ್ಳಿ, ಹಾಡಿಮನೆ ಮತ್ತು ಗಿಲ್ಲಾಳಿ ಪ್ರದೇಶಗಳಲ್ಲಿ ಪ್ರತಿವರ್ಷ ನೀರಿನ ಸಮಸ್ಯೆಯಿದ್ದು ಎಪ್ರಿಲ್ ಮೇ ತಿಂಗಳಲ್ಲಿ ಟ್ಯಾಂಕರ್ ನೀರಿನ ಮೂಲಕ ಪೂರೈಕೆ ಮಾಡಲಾಗುತ್ತದೆ. ಬಂಗಾರುಗುಡ್ಡೆಯಲ್ಲಿ ಕೇವಲ ಒಂದು ಬೋರ್ವೆಲ್ ಇದ್ದು ಇಲ್ಲಿ ವಾಟರ್ ಟ್ಯಾಂಕ್ ನಿರ್ಮಾಣವಾದರೆ ಸಮಸ್ಯೆ ಕೊಂಚ ಮಟ್ಟಿಗೆ ದೂರವಾಗುತ್ತದೆ. ಶಿವಪುರ ಗ್ರಾ.ಪಂ. ವ್ಯಾಪ್ತಿಯ, ಕಾಳಾಯಿ, ಕೆರೆಬೆಟ್ಟು , ಕಜಾನೆ, ಮೂರ್ಸಾಲು, ಯಡ್ಡೆ, ಗಾಳಿಗುಡ್ಡೆ ಇತ್ಯಾದಿ ಪ್ರದೇಶ ಹಾಗೂ ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲೋನಿ ,ಕುಡಿಬೈಲು, ಮಾತ್ಕಲ್ಲು, ಹಾಲಿಕೊಡ್ಲು ,ಕಾನ್ಬೆಟ್ಟು ಜೆಡ್ಡು ,ಸೆಳ್ಳೆ ಕಟ್ಟೆ, ದೇವಳ ಬೈಲು, ಚಿನ್ನಾರ ಕಟ್ಟೆ, ದೂಪದ ಕಟ್ಟೆ, ಬೇಳಂಜೆ ಐದು ಸೆನ್ಸ್, ಕೆಪ್ಪೆಕೆರೆ, ಕಮ¤, ದಾಸನಗುಡ್ಡೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಚಾರಾ ಗ್ರಾ.ಪಂ. ವ್ಯಾಪ್ತಿಯ ಮಂಡಾಡಿಜೆಡ್ಡು, ಹುತ್ತುರ್ಕೆ, ಗಾಂಧಿನಗರ, ತೆಂಕಬೆಟ್ಟು, ಜೋಮುÉಮಕ್ಕಿ, ಗೋವೆಹಾಡಿ, ಗರಡಿ ಬೆಟ್ಟು, ಮೇಲ್ ಮಂಡಾಡಿ, ಕನ್ಯಾನ ಕಾರಾಡಿ, ನೀರ್ ತೋಟ್ಲು, ವಿದ್ಯಾನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದು ಟ್ಯಾಂಕರ್ನಲ್ಲಿ ನೀರು ಪೂರೈಸಲಾಗುತ್ತದೆ.
ಉಪಯೋಗವಿಲ್ಲದ ಕೊಳವೆ ಬಾವಿ
ಪಂಚಾಯತ್ ವ್ಯಾಪ್ತಿಯಲ್ಲಿ 38 ಕೊಳವೆ ಬಾವಿಗಳಿದ್ದರೂ ಈಗ ಕೇವಲ 4 ಮಾತ್ರ ಉಪಯೋಗಕ್ಕೆ ಪೂರಕವಾಗಿದೆ. ಇನ್ನುಳಿದವು ಕೇವಲ ಲೆಕ್ಕಕ್ಕಷ್ಟೇ ಎಂಬಂತಿದೆ ಪರಿಸ್ಥಿತಿ.
ಕಳೆದ ವರ್ಷ ಸ್ಥಿತಿ
ಕಳೆದ ವರ್ಷವೂ ನೀರಿನ ಸಮಸ್ಯೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬಿಗಡಾಯಿಸಿದ್ದು ಟ್ಯಾಂಕರ್ಗಳ ಮೂಲಕ ಖಾಸಗಿ ಬಾವಿಗಳಿಂದ ನೀರು ಪೂರೈಕೆ ಮಾಡಲಾಗಿದೆ.
ನದಿಗಳಿಗೆ ಅನಧಿಕೃತ ಪಂಪ್ ಬಳಕೆ
ಈ ಭಾಗದಲ್ಲಿ ಹರಿಯುವ ಸೀತಾನದಿಗೆ ಅನಧಿಕೃತವಾಗಿ ಕೆಲವೊಂದು ನೀರಿನ ಪಂಪ್ ಬಳಸಿ ನೀರನ್ನು ಅನಗತ್ಯ ವ್ಯಯ ಮಾಡಲಾಗುತ್ತಿದೆ. ಸ್ಥಳೀಯಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆ ದೂರವಾಗಬಹುದು.
ನೀರು ಒದಗಿಸಲಾಗುವುದು
ಪ್ರತಿವರ್ಷ ನೀರಿನ ಸಮಸ್ಯೆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತದೆ.ಅದೇ ರೀತಿ ಈ ವರ್ಷ ಕೂಡ ಸಮಸ್ಯೆ ಇರುವ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಇದ್ದವರು ಪಂಚಾಯತ್ ಸಂಪರ್ಕಿಸಬಹುದು.
– ವಿಜಯ ಪಂ.ಅಭಿವೃದ್ಧಿ ಅಧಿಕಾರಿ, ಹೆಬ್ರಿ ಗ್ರಾ.ಪಂ.
ಮಿತವಾಗಿ ಬಳಸಿ
ಈಗಾಗಲೇ ಪಂಚಾಯತ್ನಿಂದ ನಳ್ಳಿ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಜನರು ಅಗತ್ಯಕ್ಕಿಂತ ಹೆಚ್ಚಾಗಿ ನೀರನ್ನು ಬಳಸಿ ವ್ಯರ್ಥಮಾಡುತ್ತಿದ್ದಾರೆ. ಜನರು ನೀರಿನ ಸಂರಕ್ಷಣೆಗೆ ಪಂಚಾಯತ್ ಜತೆಗೆ ಕೈಜೋಡಿಸಬೇಕು. ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದಾಗ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲು ಸಾಧ್ಯ.
– ಎಚ್.ಕೆ.ಸುಧಾಕರ ಹೆಬ್ರಿ ಗ್ರಾ.ಪಂ. ಅಧ್ಯಕ್ಷರು
- ಉದಯಕುಮಾರ್ ಶೆಟ್ಟಿ