ಅಜೆಕಾರು ಪರಿಸರದಲ್ಲಿ ಉತ್ತಮ ಮಳೆ: ಅಲ್ಲಲ್ಲಿ ಹಾನಿ
Team Udayavani, Jun 14, 2019, 6:00 AM IST
ಅಜೆಕಾರು: ಅಜೆಕಾರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಜೂ. 13ರಂದು ದಿನವಿಡೀ ಉತ್ತಮವಾಗಿ ಮಳೆ ಬಿದ್ದಿದ್ದು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ.
ಕೆಲವೆಡೆ ಗಾಳಿ ಸಹಿತ ಮಳೆ ಬಿದ್ದರೆ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಕೆರ್ವಾಶೆ, ಶಿರ್ಲಾಲು, ಅಂಡಾರು, ಮುನಿಯಾಲು, ಕುಕ್ಕುಜೆ, ಕಡ್ತಲ, ಮರ್ಣೆ, ಹಿರ್ಗಾನ, ಯರ್ಲಪಾಡಿ, ನೀರೆ, ಬೈಲೂರು ಪ್ರದೇಶಗಳಲ್ಲಿ ಉತ್ತಮವಾಗಿ ಸುರಿದ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ.
ನೀರು ನಿಂತು ಸಮಸ್ಯೆ
ಹಿರ್ಗಾನ ಪಂಚಾಯತ್ ವ್ಯಾಪ್ತಿಯ ಹಿರ್ಗಾನ ಚರ್ಚ್, ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಯ ಹಿರ್ಗಾನ ದುರ್ಗಾನಗರ ಬಳಿ, ಯರ್ಲಪಾಡಿ ಚಿಕ್ಕಲ್ಬೆಟ್ಟು ಸಂಪರ್ಕ ರಸ್ತೆ ಮುಂತಾದ ಕಡೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರು ಪರದಾಡಬೇಕಾಯಿತು.