ಕೋಟ ಪಾಂಚಜನ್ಯ ಸಂಘ: ಅಂಬಾಗಿಲು ಕೆರೆ ಹೂಳೆತ್ತುವ ಕಾರ್ಯ
Team Udayavani, Jun 5, 2019, 6:02 AM IST
ಕೋಟ: ಸಾಕಷ್ಟು ಇತಿಹಾಸವಿರುವ ಕೋಟ ಅಂಬಾಗಿಲುಕೆರೆ ಈ ಬಾರಿ ಬತ್ತಿ ಬರಿದಾಗಿದೆ ಹಾಗೂ ಹೂಳುತುಂಬಿ ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿರಲಿಲ್ಲ. ಹೀಗಾಗಿ ಸ್ಥಳೀಯ ಪಾಂಚಜನ್ಯ ಸಂಘದ ಆಶ್ರಯದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ಕೆರೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಜೂ. 2ರಂದು ಚಾಲನೆ ನೀಡಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ, ಕೆರೆಗಳು ಗ್ರಾಮಾಂತರ ಭಾಗದ ಜೀವನಾಡಿಗಳು. ಇವುಗಳು ಬರಿದಾಗುತ್ತಿರುವುದು ವಿಷಾದನೀಯ. ಆದ್ದರಿಂದ ಪ್ರತಿಯೊಂದು ಊರಿನಲ್ಲಿರುವ ಇಂತಹ ಕೆರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮನಸ್ಸು ಮಾಡಬೇಕು ಎಂದರು.
ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಮಾತನಾಡಿ, ಹಿಂದೆ ಈ ಕೆರೆಯಲ್ಲಿ ಸದಾ ಕಾಲ ನೀರು ಶೇಖರಣೆಯಾಗಿರುತ್ತಿತ್ತು. ಇದರಿಂದ ಇಲ್ಲಿನ ಅಕ್ಕ-ಪಕ್ಕದ ಬಾವಿಗಳಲ್ಲಿ ಉತ್ತಮ ನೀರು, ಅಂತರ್ಜಲಮಟ್ಟ ಉತ್ತಮವಾಗಿರುತ್ತಿತ್ತು ಎಂದರು. ರವಿವಾರ ಆರಂಭಗೊಂಡ ಈ ಸ್ವತ್ಛತಾ ಕಾರ್ಯ ರಾತ್ರಿ ಹೊನಲುಬೆಳಕಿನಲ್ಲಿ ಮೂರು ದಿನಗಳಿಂದ ನಿರಂತರ ನಡೆಯುತ್ತಿದೆ.
ಸ್ಥಳೀಯರಾದ ಚಂದ್ರಶೇಖರ ಕಾರಂತ ಏಕದಂತ ಎಂಟರ್ಪ್ರೈಸಸ್, ಮಹಾಲಸ ಎಂಟರ್ಪ್ರೈಸಸ್ನ ನಿತ್ಯಾನಂದ ಶ್ಯಾನುಭಾಗ್, ಅಂಬಾಗಿಲುಕೆರೆ ಬೆಳಕುಮನೆ ಕುಟುಂಬಸ್ಥರು, ಲಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತ ಮಂಡಳಿಯವರು, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದವರು ಹಾಗೂ ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಪಾಂಚಜನ್ಯ ಸಂಘದ ಗೌರವಾಧ್ಯಕ್ಷ ರಾಮಚಂದ್ರ ಐತಾಳ, ಸಂಘದ ಸದಸ್ಯರು, ಸ್ಥಳೀಯರು ಸಹಕಾರ ನೀಡಿದ್ದರು.