ಜನತಂತ್ರದ ಹಬ್ಬ: ಅಧಿಕಾರಿಗಳು, ಸಿಬಂದಿ ಜಾಗರಣೆ
ಮನೆಯೂ ಕಚೇರಿಯೂ ಆದ ಉಡುಪಿಯ ಡಿಮಸ್ಟರಿಂಗ್ ಕೇಂದ್ರ
Team Udayavani, Apr 21, 2019, 6:30 AM IST
ಉಡುಪಿ: ಕಣ್ಣುಜ್ಜುತ್ತಾ ಕೈಯಲ್ಲಿರುವ ಕಡತಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಕಂಪ್ಯೂಟರ್ ಪರದೆಯನ್ನು ಎವೆಯಿಕ್ಕದೆ ದಿಟ್ಟಿಸುತ್ತಿರುವ ತಂತ್ರಜ್ಞರು, ಹದ್ದಿನ ಕಣ್ಣಿನಂತೆ ದಿಟ್ಟಿ ಹಾಯಿಸುವ ಪ್ಯಾರಾಮಿಲಿಟರಿ, ಸಶಸ್ತ್ರ ಪೊಲೀಸರ ದಂಡು..
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತಯಂತ್ರ (ಇವಿಎಂ) ಗಳನ್ನು ಸಂಗ್ರಹಿಸಿಡಲಾದ ಉಡುಪಿ ಅಜ್ಜರಕಾಡಿನ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯೊಳಗಿನ ಪ್ರಾಂಗಣದಲ್ಲಿ ಮತದಾನ ಮುಗಿದ ಬಳಿಕ ಕಂಡುಬಂದ ದೃಶ್ಯವಿದು.
ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ನಿತ್ಯ ಚುನಾವಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೂರಾರು ಅಧಿಕಾರಿಗಳು, ಸಿಬಂದಿ ಪೈಕಿ ಸುಮಾರು 150ರಷ್ಟು ಮಂದಿ ಗುರುವಾರ ಬೆಳಗ್ಗೆ 6ರಿಂದ ಶುಕ್ರವಾರ ಅಪರಾಹ್ನ 3 ಗಂಟೆಯವರೆಗೂ ಬಿಡುವಿಲ್ಲದೆ ದುಡಿದಿದ್ದಾರೆ.
ಮತಯಂತ್ರಕ್ಕಾಗಿ ಕಾಯುತ್ತಾ…
ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಸಹಿತ ಜಿಲ್ಲಾ ಕೇಂದ್ರದಿಂದ ದೂರ ಇದ್ದ ಮತಗಟ್ಟೆಗಳ ಮತಯಂತ್ರಗಳು ಸೇರಿದಂತೆ ಎಲ್ಲ ಮತಯಂತ್ರಗಳು ಶುಕ್ರವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಉಡುಪಿಯ ಸ್ಟ್ರಾಂಗ್ ರೂಂ ತಲುಪಿದ್ದವು. ಉಡುಪಿ ನಗರದ ಹನುಮಂತನಗರ ಮತಗಟ್ಟೆಯ ಮತಯಂತ್ರ ಮೊದಲು ಸ್ಟ್ರಾಂಗ್ ರೂಂ ತಲುಪಿತ್ತು. ಅನಂತರ ಒಂದೊಂದೇ ಮತಗಟ್ಟೆಗಳಿಂದ ಮತಯಂತ್ರಗಳು ಬರುತ್ತಲೇ ಇದ್ದವು. ಮತಯಂತ್ರಗಳಿಗೆ ಸಂಬಂಧಿಸಿ ದಾಖಲೆ ಪರಿಶೀಲಿಸುವ ಪ್ರಕ್ರಿಯೆಯನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿದ್ದ ಅಧಿಕಾರಿಗಳು ನಿರಂತರವಾಗಿ ನಡೆಸುತ್ತಲೇ ಇದ್ದರು.
ಚಿಕ್ಕಮಗಳೂರು ಜಿಲ್ಲೆಯ ಮತಯಂತ್ರಗಳು ಡಿಮಸ್ಟರಿಂಗ್ ಕೇಂದ್ರ ತಲುಪುವಾಗ ಮಧ್ಯಾಹ್ನ 1.30 !. ನಿದ್ದೆ ಬಿಟ್ಟಿದ್ದ ಅಧಿಕಾರಿ, ಸಿಬಂದಿ ಅದುವರೆಗೂ ಡಿಮಸ್ಟರಿಂಗ್ ಕೇಂದ್ರದ ಇತರ ಕೆಲಸಗಳನ್ನು ನಿರ್ವಹಿಸುತ್ತಾ ಇದ್ದರು. ಅನಂತರ ಚಿಕ್ಕಮಗಳೂರಿನ ಇವಿಎಂಗಳಿಗೆ ಸಂಬಂಧಿಸಿದ ಕೆಲಸ ಆರಂಭಿಸಿದರು. ಇದು ಮುಗಿಯವಾಗ ಅಪರಾಹ್ನ 3 ಗಂಟೆ. ಸ್ವತಃ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಎಡಿಸಿ ವಿದ್ಯಾ ಕುಮಾರಿ ಅವರು ಕೂಡ ಇತರ ಅಧಿಕಾರಿ ಸಿಬಂದಿಯ ಜತೆ ಬಳಲಿಕೆ ತೋರ್ಪಡಿಸದೆ ಕರ್ತವ್ಯ ನಿರತರಾಗಿದ್ದರು. ಎಡಿಸಿ ರಾತ್ರಿಯಿಡೀ ತನ್ನ ಸಿಬಂದಿಯ ಜತೆಗಿದ್ದರು. ಡಿಸಿ ಮತ್ತು ಎಸ್ಪಿ ಎರಡು ಮೂರು ಬಾರಿ ಕೇಂದ್ರದಿಂದ ನಿರ್ಗಮಿಸಿ ಮತ್ತೆ ವಾಪಸ್ಸಾಗಿದ್ದರು. ಕೆಲವು ಮಹಿಳಾ ಸಿಬಂದಿಯನ್ನು ರಾತ್ರಿ ವೇಳೆ ಮನೆಗೆ ಕಳುಹಿಸಿ ಬೆಳಗ್ಗೆ ಬೇಗ ಕೇಂದ್ರಕ್ಕೆ ಕರೆಸಿಕೊಳ್ಳಲಾಯಿತು.
ತಹಶೀಲ್ದಾರ್, ಸಹಾಯಕ ಚುನಾವಣಾಧಿಕಾರಿ, ಪೊಲೀಸರ ಬೆಂಗಾವಲು ವಾಹನದೊಂದಿಗೆ ಚಿಕ್ಕಮಗಳೂರಿನ ಮತಯಂತ್ರಗಳನ್ನು ತರಲಾಯಿತು. ವಾಹನಕ್ಕೆ ಅಳವಡಿಸಲಾಗಿದ್ದ ಜಿಪಿಎಸ್ನ ಮುಖಾಂತರ ಕೇಂದ್ರದಿಂದಲೇ ಹಿರಿಯ ಅಧಿಕಾರಿಗಳು ಗಮನವಿರಿಸಿದ್ದರು.
ಅಣಕು ಸ್ಲಿಪ್ಗ್ಳೂ ಸ್ಟ್ರಾಂಗ್ ರೂಮ್ಗೆ
ಮತದಾನದ ಮೊದಲು ನಡೆದಿದ್ದ ಅಣಕು ಮತದಾನದ ಸ್ಲಿಪ್ಗ್ಳನ್ನು ಕೂಡ ಈ ಬಾರಿ ಸ್ಟ್ರಾಂಗ್ ರೂಮ್ನಲ್ಲಿಯೇ ಇಡಲಾಗುತ್ತದೆ. ಈ ಹಿಂದೆ ಇವುಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿತ್ತು.
ವಿದ್ಯುತ್ ಸಂಪರ್ಕ ಕಡಿತ
ಸ್ಟ್ರಾಂಗ್ ರೂಮ್ನೊಳಗೆ ಜನರೇಟರ್ ಸೇರಿದಂತೆ ಯಾವುದೇ ರೀತಿಯ
ವಿದ್ಯುತ್ಛಕ್ತಿ ಇರದಂತೆ ನೋಡಿಕೊಳ್ಳಲಾಗಿದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ ಆಗಮಿಸಿ ಕೊಠಡಿಯ ಎಲ್ಲ ರೀತಿಯ ವಿದ್ಯುತ್ ಸಂಪರ್ಕಗಳನ್ನು ಕಡಿದು ಹಾಕಿರುವ ಬಗ್ಗೆ ದೃಢೀಕರಣ ಪತ್ರ ನೀಡಿದರು. ಯಾವುದೇ ರೀತಿಯ ವಿದ್ಯುತ್ ಇದ್ದರೂ ಶಾರ್ಟ್ ಸರ್ಕ್ನೂಟ್ ಆಗಿ ಮತಯಂತ್ರಗಳಿಗೆ ಹಾನಿಯಾಗುವ ಅಪಾಯ ಇರುವುದರಿಂದ ಈ ರೀತಿಯ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
2 ಗಂಟೆ ನಿದ್ದೆ
“ರಾತ್ರಿ ಇಡೀ ಜಾಗರಣೆಯಲ್ಲಿದ್ದೆ. ಕೆಲವು ಮಹಿಳಾ ಸಿಬಂದಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದೆವು. ನಾನು ಬೆಳಗ್ಗೆ 5 ಗಂಟೆಗೆ ಮನೆಗೆ ತೆರಳಿದೆ. ಸ್ವಲ್ಪ ನಿದ್ದೆ ಮಾಡಿದೆ. 7 ಗಂಟೆಗೆ ವಾಪಸಾದೆ’ ಎಂದು ಓರ್ವ ಮಹಿಳಾ ನೋಡಲ್ ಅಧಿಕಾರಿ ಹೇಳಿದರು.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ