ಮಂಗನ ಕಾಯಿಲೆಯ ತೀವ್ರತೆ,ಗುಳೆ ಹೋಗುವ ಭಯ
Team Udayavani, Mar 10, 2019, 12:30 AM IST
ಉಡುಪಿ: ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲೂಕುಗಳಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆಯಾದರೂ ಸಾಗರದಲ್ಲಿ ಗುಳೆ ಹೋಗುವ ವರೆಗೆ ಕಾಯಿಲೆಯ ಬಿಸಿ ತಟ್ಟಿದೆ.
ಸಾಗರ ತಾಲೂಕಿನ ಅರಳಗೋಡು ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಗ್ರಾಮ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾದ 148 ಪ್ರಕರಣಗಳಲ್ಲಿ 136 ಇಲ್ಲಿಯವು. ಜನವರಿಯಲ್ಲಿ ಮಕ್ಕಳು ಶಾಲೆಗೆ ಹೋಗಲೂ ಹೆದರುತ್ತಿದ್ದರು. ಹಳ್ಳಿಗಳ ಜನರು ಊರನ್ನೇ ತೊರೆದು ಸಾಗರಕ್ಕೆ ಬಂದುಸಂಬಂಧಿಕರ ಮನೆಯಲ್ಲಿ ಉಳಿಯುತ್ತಿದ್ದರು. ಇವರು ಹಳ್ಳಿಗಳನ್ನು ಬಿಟ್ಟು ಬರುವುದೂ ಕಷ್ಟ; ಹೊಲ, ಗದ್ದೆ, ಜಾನುವಾರುಗಳನ್ನುಬಿಟ್ಟು ಹೇಗೆ ಬರುವುದೆಂಬ ಕಳವಳ. ಇದರ ಪರಿಣಾಮ ಆರೋಗ್ಯದ ಮೇಲಷ್ಟೇ ಅಲ್ಲ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಕ್ಷೇತ್ರಗಳ ಮೇಲೂ ಇದೆ.
ಉಡುಪಿ, ಉ.ಕ. ಜಿಲ್ಲೆಗೂ ವಿಸ್ತರಣೆ ಕಾಯಿಲೆ ನಿಧಾನವಾಗಿ ಉಡುಪಿ ಜಿಲ್ಲೆಗೂ ಹರಡಿದೆ.ಜಿಲ್ಲೆಯಲ್ಲಿ 207 ಮಂಗಗಳು ಸತ್ತಿವೆ. 51 ಜನರಿಗೆ ಪರೀಕ್ಷೆ ನಡೆಸಲಾಗಿದ್ದರೂ ಯಾರಿಗೂ ರೋಗ ಪತ್ತೆಯಾಗಿಲ್ಲ. ಕಾಯಿಲೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ,ಹೊನ್ನಾವರ ತಾ|ನ ಭಾಗಗಳಿಗೂ ವಿಸ್ತರಣೆಯಾಗಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ಮಾ.8ರ ವರೆಗೆ 238 ಜನರು ದಾಖಲಾಗಿದ್ದಾರೆ. ಇವರಲ್ಲಿ 97 ಜನರಿಗೆ ರೋಗ ಪತ್ತೆಯಾಗಿದೆ. 211 ಮಂದಿ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲ ಶಿವಮೊಗ್ಗ ಜಿಲ್ಲೆಯವರು.
ಚುನಾವಣೆ ಘೋಷಣೆಯಾದರೆ ಕಷ್ಟ
ಗ್ರಾಮಸ್ಥರಿಗೆ ಧೈರ್ಯ ಕೊಡಲು ಜಿಲ್ಲಾಧಿಕಾರಿ ದಯಾನಂದ ಅವರು ಒಂದು ದಿನ ಅರಳಗೋಡು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್ ಅವರೂ ಗ್ರಾಮವಾಸ್ತವ್ಯ ನಡೆಸಿದ್ದರು. ಸದ್ಯವೇ ಚುನಾವಣೆ ಘೋಷಣೆಯಾಗಲಿದ್ದು, ಬಳಿಕ ಅಧಿಕಾರಿ ವರ್ಗದ ಗಮನವೆಲ್ಲ ಇತ್ತ ಹರಿಯುವುದು ಅಸಂಭವ. “ನಮಗೆ ಚುನಾವಣೆ ಕರ್ತವ್ಯಗಳಿರುವುದಿಲ್ಲ’ ಎಂದು ಆರೋಗ್ಯ ಇಲಾಖೆಯವರು ಹೇಳಿದರೂ ಇತರ ಇಲಾಖೆಗಳ ಅಧಿಕಾರಿಗಳು, ಅಧಿಕಾರಸ್ಥರ ಗಮನ ರೋಗ ಸಂತ್ರಸ್ತರತ್ತ ಇರುವುದು ಅಸಾಧ್ಯ.
ಕೆಲಸಕ್ಕೆ ಹೋಗಲೂ ಭಯ
ಹಿಂದೆ ಆವಿನಹಳ್ಳಿಯಲ್ಲಿ ಮಂಗನಕಾಯಿಲೆ ಅಧಿಕ ಇತ್ತು. ಅಲ್ಲಿ ಕಡಿಮೆಯಾಗುವಾಗ ಅರಳಗೋಡಿನಲ್ಲಿ ಜಾಸ್ತಿಯಾಯಿತು. ಜನರು ಕೆಲಸಕ್ಕೆ ಹೋಗಲೂ ಹಿಂಜರಿಯುತ್ತಿದ್ದಾರೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಹಲವರು ಮೃತಪಟ್ಟಿದ್ದಾರೆ.
– ಸದಾನಂದ, ಅರಳಗೋಡು ನಿವಾಸಿ
ಇದು ವೈರಸ್ನಿಂದ ಬರುವ ಕಾಯಿಲೆ. ಡೆಂಗ್ಯೂನಷ್ಟು ಗಂಭೀರವಲ್ಲ. ನಿರ್ದಿಷ್ಟ ಔಷಧಗಳಿಲ್ಲ. ಪೂರಕ ಔಷಧ ನೀಡಲಾಗುತ್ತದೆ. ಶೇ. 90 ಮಂದಿ ಗುಣಮುಖರಾಗುತ್ತಾರೆ. ಆದರೆ ರೋಗಿಗೆ ಮಧುಮೇಹ ಇದ್ದರೆ, ಮದ್ಯಸೇವನೆಯಿಂದ ಅಂಗಾಂಗಗಳು ದುರ್ಬಲವಾಗಿದ್ದರೆ ಅಥವಾ ಇನ್ನಿತರ ಕಾಯಿಲೆಗಳಿದ್ದು, ಮಂಗನ ಕಾಯಿಲೆ ಬಂದರೆ ಸಾವಿಗೀಡಾಗುವ ಸಾಧ್ಯತೆ ಇದೆ.
– ಡಾ| ಪ್ರಶಾಂತ ಭಟ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ
ಸಾಗರ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನರ ಕೋರಿಕೆ ಮೇರೆಗೆ ಮಣಿಪಾಲ ಆಸ್ಪತ್ರೆಗೂ ದಾಖಲಿಸಲಾಗುತ್ತಿದೆ.
– ಡಾ| ಕಿರಣ್, ಉಪನಿರ್ದೇಶಕರು, ವೈರಲ್ ಡಯಾಗ್ನೊಸ್ಟಿಕ್ಸ್ ಲ್ಯಾಬೋರೇಟರಿ, ಶಿವಮೊಗ್ಗ
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ