ಗ್ರಾಮೀಣ ಅಂಚೆ ನೌಕರರ ಮುಷ್ಕರ
Team Udayavani, Aug 17, 2017, 7:25 AM IST
ಉಡುಪಿ: ಕಮಲೇಶ್ಚಂದ್ರ ವರದಿ ಕೂಡಲೇ ಅನುಷ್ಠಾನವಾಗಬೇಕು. ಜಿಡಿಎಸ್ ನೌಕರರಿಗೆ 8ಗಂಟೆ ಖಾಯಂ ನೌಕರಾತಿ ಪರಿಗಣಿಸಬೇಕು. ನಿಚ್ಚಳ ನಿವೃತ್ತಿ ವೇತನ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ಆ. 16ರಂದು ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ಧಿಷ್ಠಾವಧಿ ಮುಷ್ಕರವನ್ನು ಆರಂಭಿಸಿದರು.
ಇಲಾಖಾ ವರಿಷ್ಠರು 2011ರಲ್ಲಿ ಆದೇಶ ಮಾಡಿದಂತೆ ಮಾರ್ಚ್ 2014ರ ಅನಂತರ ನಿವೃತ್ತರಾಗುವ ನೌಕರರಿಗೆ ನಿವೃತ್ತಿ ವೇತನ ನೀಡಬೇಕು ಹಾಗೂ ಅಧಿಕಾರಿಗಳು ಟಾರ್ಗೆಟ್ನೆಪದಲ್ಲಿ ನೌಕರರ ಮೇಲೆ ಮಾಡುವ ಶೋಷಣೆಯನ್ನು ನಿಲ್ಲಿಸಬೇಕೆಂದು ಸದಸ್ಯರು ಬೇಡಿಕೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಸವ ಬಿಲ್ಲವ, ಕಾರ್ಯದರ್ಶಿ ಸಂತೋಷ್ ಮಧ್ಯಸ್ಥ, ಕೋಶಾಧಿಕಾರಿ ರಾಮನಾಥ ಪ್ರಮುಖರಾದ ಪ್ರಮೀಳಾ ಫೆರ್ನಾಂಡಿಸ್, ಅನಿತಾ, ಪೂರ್ಣಿಮಾ, ಶಕುಂತಳಾ, ಮೊಯ್ಲಿ, ರೈತಸಂಘದ ರಂಗನಾಥ ಶೆಟ್ಟಿ, ಭಾಸ್ಕರ ಶೆಟ್ಟಿ, ಶಂಕರ್ ಶೆಟ್ಟಿ, ಇಸಿ ಸದಸ್ಯ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.