ರಾಜ್ಯದಲ್ಲಿ ಮೂರು ದಿನ ಮಳೆ ಸಂಭವ
Team Udayavani, Mar 14, 2017, 11:02 AM IST
ಬೆಂಗಳೂರು: ರಾಜ್ಯದ ವಿವಿಧ ಪ್ರದೇಶದಲ್ಲಿ ಇನ್ನು ಮೂರು ದಿನ ಸಿಡಿಲು ಸಹಿತ ಮಳೆಯಾಗುವ ಸಂಭವ ಇದೆ. ಈ ಬಾರಿ ರಾಜ್ಯದ ಹೆಚ್ಚಿನ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಕಳೆದ ವಾರ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿತ್ತು. ಕರಾವಳಿಯಲ್ಲಿ ಮಳೆಯಾಗಿರಲಿಲ್ಲ.
ಮಾ. 15 ಮತ್ತು 16ರಂದು ಕರಾವಳಿ ಸಹಿತ ರಾಜ್ಯದ ಹಲವೆಡೆ ಹಾಗೂ 17, 18ರಂದು ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆ ಸುರಿಯುವ ನಿರೀಕ್ಷೆ ಹೊಂದಲಾಗಿದೆ. ಮಳೆಯೊಂದಿಗೆ ಸಿಡಿಲಿನ ಅಬ್ಬರವೂ ಇರಲಿದೆ ಎಂದು ಹವಾಮಾನ ಇಲಾಖೆ ಪ್ರಕಟನೆ ತಿಳಿಸಿದೆ.
ಮತ್ತೆ ಚಳಿ ವಾತಾವರಣ: ಹಗಲಿನಲ್ಲಿ ಬಿಸಿಲು ಮತ್ತು ಸೆಕೆ ಇದ್ದರೂ ರಾತ್ರಿ ವೇಳೆ ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಚಳಿ ವಾತಾವರಣ ಇತ್ತು. ಮುಖ್ಯವಾಗಿ ಉತ್ತರ ಒಳನಾಡಿನಲ್ಲಿ ತಾಪಮಾನ ಸಾಕಷ್ಟು ಕುಸಿದಿದೆ.
ವಿಜಯಪುರದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ಡಿ.ಸೆ. ಕಡಿಮೆ ಇದ್ದು, ರವಿವಾರ 34 ಡಿ.ಸೆ. ದಾಖಲಾಗಿತ್ತು.
ಕನಿಷ್ಠ ತಾಪಮಾನವೂ ತೀರಾ ಕಡಿಮೆಯಾಗಿದ್ದು, ಸಾಮಾನ್ಯಕ್ಕಿತ 8 ಡಿ.ಸೆ. ಇಳಿಕೆಯಾಗಿ 14 ಡಿ.ಸೆ. ದಾಖಲಾಗಿ ಚಳಿ ಇತ್ತು.
ಉಳಿದಂತೆ ಬಾಗಲಕೋಟೆ, ಕಲಬುರ್ಗಿ, ಬೆಳಗಾವಿ ವಿಮಾನ ನಿಲ್ದಾಣ, ಬೆಳಗಾವಿ ನಗರದಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇತ್ತು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಕನಿಷ್ಠ ತಾಪಮಾನ 8 ಡಿ.ಸೆ.ಗೆ ಕುಸಿದಿತ್ತು.
ಕರಾವಳಿಯಲ್ಲೂ ಇಳಿಕೆ: ಕರಾವಳಿಯ ಕನಿಷ್ಠ ತಾಪಮಾನ ಕೂಡ ಸಾಮಾನ್ಯಕ್ಕಿಂತ 2 ಡಿ.ಸೆ. ಇಳಿಕೆಯಾಗಿದೆ. ಮಂಗಳೂರಿನ ಈ ಅವಯಲ್ಲಿನ ಸಾಮಾನ್ಯ ಕನಿಷ್ಠ ತಾಪಮಾನ 24 ಡಿ.ಸೆ. ಆಗಿದ್ದರೆ ಈ ಬಾರಿ 22 ಡಿ.ಸೆ. ದಾಖಲಾಗಿದೆ. ಹೊನ್ನಾವರದಲ್ಲಿ ರವಿವಾರ 6 ಡಿ.ಸೆ. ಇಳಿಕೆಯಾಗಿದ್ದರೆ, ಸೋಮವಾರ 4 ಡಿ.ಸೆ.ಇಳಿಕೆಯಾಗಿತ್ತು. ಇಲ್ಲಿನ ಈ ಅವಧಿಯ ಸಾಮಾನ್ಯ ತಾಪಮಾನ 23 ಡಿ.ಸೆ. ಆಗಿದ್ದು, ರವಿವಾರ ಇಲ್ಲಿ 17 ಡಿ.ಸೆ. ಮತ್ತು ಸೋಮವಾರ 19 ಡಿ.ಸೆ. ದಾಖಲಾಗಿತ್ತು. ಶಿರಾಲಿ, ಕಾರವಾರದಲ್ಲೂ ಕನಿಷ್ಠ ತಾಪಮಾನ 3 ಡಿ.ಸೆ. ಇಳಿಕೆಯಾಗಿದೆ.