ಕುಂದಾಪುರ: ಅಂಗಡಿಗೆ ನುಗ್ಗಿ ಎಟಿಎಂ ಕಾರ್ಡ್ ಕದ್ದು ಹಣ ಎಗರಿಸಿದ ಕಳ್ಳರು
Team Udayavani, Sep 22, 2019, 11:23 AM IST
ಕೊಲ್ಲೂರು: ಅಂಗಡಿಯ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳೊಂದಿಗೆ ಎಟಿಎಂ ಕಾರ್ಡ್ ಕದ್ದು 40 ಸಾವಿರ ಹಣ ಎಗರಿಸಿದ ಘಟನೆ ಕೋಟೇಶ್ವರದ ಗೋಪಾಡಿಯಲ್ಲಿ ನಡೆದಿದೆ.
ಕೋಟೇಶ್ವರ- ವಕ್ವಾಡಿ ರಸ್ತೆಯ ಗೋಪಾಡಿಯ ರಾಜೀವ ಎಂಬವರಿಗೆ ಸೇರಿದ ಶ್ರೀರಾಮ್ ಜನರಲ್ ಸ್ಟೋರ್ ನಲ್ಲಿ ಶನಿವಾರ ತಡರಾತ್ರಿ ಈ ಕಳ್ಳತನ ನಡೆದಿದೆ.
ಘಟನೆಯ ವಿವರ: ಅಂಗಡಿಯ ಹಿಂದಿನ ಬಾಗಿಲನ್ನು ಮುರಿದ ಕಳ್ಳರು ಅಂಗಡಿಯಲ್ಲಿದ್ದಸಿಗರೇಟ್ ಸೇರಿದಂತೆ ಹಲವು ವಸ್ತುಗಳನ್ನು ಬಾಕ್ಸ್ ಸಹಿತ ಹೊತ್ತೊಯ್ದಿದ್ದಾರೆ. ಅಂಗಡಿಯಲ್ಲಿದ್ದ ಆರು ಸಾವಿರ ಹಣವೂ ಕಳ್ಳತನವಾಗಿದೆ.
ಅಂಗಡಿಯೊಳಗೆ ಬಹಳಷ್ಟು ತಡಕಾಡಿದ್ದ ಕಳ್ಳರು ಕಪಾಟಿನಲ್ಲಿ ಇರಿಸಲಾಗಿದ್ದ ಎಟಿಎಂ ಕಾರ್ಡ್ ಅನ್ನು ಕೂಡಾ ಎಗರಿಸಿದ್ದಾರೆ. ರಾಜೀವ ಅವರು ಎರಡು ದಿನಗಳ ಹಿಂದಷ್ಟೇ ಹೊಸ ಎಟಿಎಂ ಕಾರ್ಡು ಪಡೆದಿದ್ದರು. ಹೀಗಾಗಿ ಅದರ ಪಿನ್ ನಂಬರ್ ಇದ್ದ ಚೀಟಿಯನ್ನು ಕಾರ್ಡ್ ಜೊತೆಗೆ ಇರಿಸಿದ್ದು. ಹೀಗಾಗಿ ಕಾರ್ಡ್ ಜೊತೆಗೆ ಪಿನ್ ಕೂಡಾ ಪಡೆದ ಕಳ್ಳರು ರಾತ್ರೋರಾತ್ರಿ ಉಡುಪಿ ಸಮೀಪದ ಎಟಿಎಂ ಒಂದರಿಂದ 40 ಸಾವಿರ ಹಣ ಎಗರಿಸಿದ್ದಾರೆ.
ಕುಂದಾಪುರ ಠಾಣಾ ಪೊಲೀಸರು ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.