ಶ್ರೀನಿವಾಸ ಪೂಜಾರಿಗೆ ಟಿಕೆಟ್ ಖಚಿತ
ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಚರ್ಚೆ
Team Udayavani, Nov 16, 2021, 5:55 AM IST
ಉಡುಪಿ: ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಮೊದಲ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯಾಗಿದ್ದು, ಎರಡನೇ ಅಭ್ಯರ್ಥಿಯ ಆಯ್ಕೆ ಸಂಬಂಧ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀನಿವಾಸ ಪೂಜಾರಿಯವರ ಹೆಸರನ್ನು ಮೂರ್ನಾಲ್ಕು ದಿನದಲ್ಲಿ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಎರ ಡನೇ ಅಭ್ಯರ್ಥಿ ನಿಲ್ಲಿಸುವ ಸಂಬಂಧ ಚರ್ಚೆ ನಡೆಸಲಿದ್ದೇವೆ. ಯಾವುದೇ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ. ಒಂದೊಮ್ಮೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇದ್ದರೂ ಒಂದನೇ ಅಭ್ಯರ್ಥಿಗೆ ಎಲ್ಲ ಪ್ರಾಶಸ್ತ್ಯ ಮತ ಗಳನ್ನು ಹಾಕಿಸಲು ಪ್ರಯತ್ನ ಮಾಡಲಾಗುವುದು ಎಂದರು.
ನ. 19: ಜನಸ್ವರಾಜ್ ಸಮಾವೇಶ
ನ. 19ರ ಬೆಳಗ್ಗೆ 11ಕ್ಕೆ ಉಡುಪಿಯ ಪುರಭವನ ದಲ್ಲಿ ನಡೆ ಯುವ ಜನಸ್ವರಾಜ್ ಸಮಾ ವೇಶದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್. ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್ ಕುಮಾರ್ ಸಹಿತ ವಾಗಿ ಶಾಸಕರು, ಜನ ಪ್ರತಿನಿಧಿಗಳು ಭಾಗ ವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಮನೋಹರ ಕಲ್ಮಾಡಿ, ಮಾಧ್ಯಮ ಪ್ರಕೋಷ್ಠದ ಶ್ರೀನಿಧಿ ಹೆಗ್ಡೆ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಸಹ ವಕ್ತಾರ ಶಿವಕುಮಾರ್ ಹಾಗೂ ಕಾರ್ಯಾಲಯ ಕಾರ್ಯ ದರ್ಶಿ ಸತ್ಯಾನಂದ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಪದಚ್ಯುತಿಯ ಹಂತದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್?
ಬಸ್ ಪ್ರಯಾಣ ದರ ಇಳಿಸುವ ಪ್ರಸ್ತಾವ ಇಲ್ಲ
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಹೆಚ್ಚೇನು ಏರಿಕೆ ಮಾಡಿಲ್ಲ. ಈಗ ಬಸ್ಪ್ರಯಾಣ ದರ ಇಳಿಸುವ ಪ್ರಸ್ತಾವನೆ ಇಲ್ಲ. ಡೀಸೆಲ್ ದರ ಇನ್ನು ಕಡಿಮೆಯಾಗಿ ಲೀಟರಿಗೆ 75ರಿಂದ 80ರೂ. ಬಂದಾಗ ಕಡಿಮೆ ಮಾಡುತ್ತೇವೆ. ಈಗ ಕಡಿಮೆ ಮಾಡಿದರೆ, ಉದ್ಯಮ ನಡೆಸುವುದು ಕಷ್ಟ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರ. ಕಾರ್ಯದರ್ಶಿಯೂ ಆದ ಸುರೇಶ ನಾಯಕ್ ತಿಳಿಸಿದರು.
ಪ್ರಮೋದ್ ಬಂದರೆ ಸ್ವಾಗತ
ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಬರುವ ವದಂತಿ ಕಳೆದ ಅನೇಕ ತಿಂಗಳಿಂದ ಚಾಲ್ತಿಯಲ್ಲಿದೆ. ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬಂದರೆ ಸ್ವಾಗತವಿದೆ. ಈ ಬಗ್ಗೆ ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಬೇಕಾಗುತ್ತದೆ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಏಕಾಏಕಿ ಪಕ್ಷಕ್ಕೆ ಸೇರ್ಪಡೆ ಸಾಧ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆಯನ್ನು ಅವರು ಖಂಡಿಸಿದರು.