ತ್ರಾಸಿ – ಹೊಸಪೇಟೆ : ತಡೆಗೋಡೆ ಕಾಮಗಾರಿ ಶುರು
Team Udayavani, Mar 21, 2019, 1:00 AM IST
ಕುಂದಾಪುರ: ತ್ರಾಸಿಯ ಹೊಸಪೇಟೆ ಸಮುದ್ರ ತೀರದಲ್ಲಿ ಉಂಟಾದ ಅಕಾಲಿಕ ಕಡಲ್ಕೊರೆತ ಉಂಟಾದ ಬಳಿಕ ಎಚ್ಚೆತ್ತ ಅಧಿಕಾರಿಗಳು, ಈಗ ತಡೆಗೋಡೆ ನಿರ್ಮಾಣ ಕಾಮಗಾರಿ ಯನ್ನು ಕೈಗೆತ್ತಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಹೊಸಪೇಟೆ ಕಡಲ ತೀರದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿತ್ತು. ತಡೆಗೋಡೆ ನಿರ್ಮಾಣಕ್ಕೆ 2 ವರ್ಷಗಳ ಹಿಂದೆ ಶಿಲೆ ಕಲ್ಲುಗಳನ್ನು ತಂದು ಹಾಕಿದ್ದು ಕಾಮಗಾರಿ ಆರಂಭಿಸಿರಲಿಲ್ಲ. ಈ ಬಗ್ಗೆ “ಉದಯವಾಣಿ’ ವರದಿಯನ್ನು ಪ್ರಕಟಿಸಿತ್ತು.
ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಬಂದರು ಇಲಾಖೆಯ ಅಧಿಕಾರಿಗಳು ಅಲ್ಲಿನ ಜನರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮವಾಗಿ ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ತ್ರಾಸಿ- ಮರವಂತೆ ಕಡಲ ತೀರದಲ್ಲಿ ನಡೆಯುತ್ತಿರುವ ಸುಸ್ಥಿರ ಕಡಲ ತೀರ ನಿರ್ವಹಣೆ ಯೋಜನೆಯಿಂದ ಹೊಸಪೇಟೆ ಭಾಗದ ಸಮುದ್ರ ತೀರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ ಎಂದು ಇಲ್ಲಿನ ಮೀನುಗಾರರು ಆರೋಪಿಸಿದ್ದು, ಮಳೆಗಾಲದಲ್ಲಿ ಕಡಲ್ಕೊರೆತ ತೀವ್ರತೆ ಇನ್ನಷ್ಟು ಹೆಚ್ಚಾಗುವ ಭೀತಿ ಕಾಡುತ್ತಿದೆ. ಅದಕ್ಕಾಗಿ ಮಳೆಗಾಲ ಆರಂಭಕ್ಕೂ ಮುನ್ನ ತಡೆಗೋಡೆ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಆಗ್ರಹಿಸಿದ್ದಾರೆ.