ಮಳೆ ನೀರು ಚರಂಡಿ ಸುಸ್ಥಿತಿಗೆ ತರಲು ಪ್ರಯತ್ನ
ಉಡುಪಿ ನಗರಸಭೆ ಸಿಬಂದಿಯಿಂದ ದುರಸ್ತಿ ಕೆಲಸ
Team Udayavani, Jun 15, 2019, 5:29 AM IST
ಉಡುಪಿ: ಶುಕ್ರವಾರ ಉಡುಪಿ ನಗರ ವ್ಯಾಪ್ತಿಯಲ್ಲಿ ಮಳೆ ಬಿಡುವು ಮಾಡಿತ್ತು. ನಗರಸಭೆ ಸಿಬಂದಿ ಮಳೆ ನೀರು ಹರಿಯುವ ಚರಂಡಿಗಳನ್ನು ಸುಸ್ಥಿತಿಗೆ ತರುವ ಪ್ರಯತ್ನ ನಡೆಸಿದರು.
ಮನೆ, ಅಂಗಡಿಗಳಿಗೆ ನೀರು ನುಗ್ಗಿರುವ ಕುಂಜಿಬೆಟ್ಟು ಪರಿಸರದಲ್ಲಿ ಚರಂಡಿ ಕಾಮಗಾರಿ ನಡೆಸಲಾಯಿತು. ಇಲ್ಲಿ ಒಳಚರಂಡಿ ನೀರು ಕೂಡ ಮಳೆ ನೀರಿನೊಂದಿಗೆ ಸೇರಿ ಸಮಸ್ಯೆ ಯಾಗಿದೆ.
ಉಡುಪಿ-ಮಣಿಪಾಲ ರಸ್ತೆಯ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಎರಡು ಬದಿಗಳಲ್ಲಿ ಕೂಡ ಸಂಚಾರ ಅವ್ಯವಸ್ಥೆ ಮುಂದುವರಿದಿದೆ. ಕೆಸರು, ಹೊಂಡಮಯ ರಸ್ತೆ ಅಪಾಯಕಾರಿ ಯಾಗಿಯೇ ಇದೆ. ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಕೆಳಕ್ಕೆ ಬರುವಲ್ಲಿ ಉದ್ದಕ್ಕೂ ರಸ್ತೆಯಲ್ಲಿ ಕೆಸರು ಹಾಗೆಯೇ ಉಳಿದುಕೊಂಡಿದೆ. ದ್ವಿಚಕ್ರ ವಾಹನ ಸವಾರರಿಗೆ ಇದು ಸವಾಲಾಗಿದೆ.
ಶಾಸಕ ರಘುಪತಿ ಭಟ್ ಭೇಟಿ
ಉಡುಪಿ-ಮಣಿಪಾಲ ಹೆದ್ದಾರಿಯ ಕುಂಜಿಬೆಟ್ಟು ಭಾಗದಲ್ಲಿ ಚರಂಡಿ ಅವ್ಯವಸ್ಥೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಶಾಸಕ ಕೆ.ರಘುಪತಿ ಭಟ್ ಅವರು ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಮಂಜುನಾಥ ನಾಯಕ್, ನಗರಸಭಾ ಸದಸ್ಯ ಗಿರೀಶ್ ಅಂಚನ್ ಮತ್ತಿತರರು ಹಾಜರಿದ್ದರು.