ಸರಕಾರಿ ಉದ್ಯೋಗಕ್ಕಾಗಿ ಕನ್ನಡಿಗರಿಂದ ಟ್ವಿಟರ್ ಅಭಿಯಾನ
Team Udayavani, May 5, 2019, 6:27 AM IST
ಸಾಂದರ್ಭಿಕ ಚಿತ್ರ.
ಉಡುಪಿ: ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗ ಬೇಕು ಎಂದು ಆಗ್ರಹಿಸಿ ಟ್ವಿಟರ್ನಲ್ಲಿ #karnataka jobs for kannadigas ಎಂಬ ಹ್ಯಾಶ್ಟ್ಯಾಗ್ ಅಭಿಯಾನ ಮೇ 4ರಂದು ಸಂಜೆ 6 ಗಂಟೆಗೆ ಆರಂಭವಾಗಿದೆ.
ಕರುನಾಡ ಸೇವಕರು ಮತ್ತು ಇತರ ಕನ್ನಡಪರ ಸಂಘಟನೆಗಳ ಸಹಯೋಗ ದೊಂದಿಗೆ ನಡೆಯಲಿದೆ. ರಾಜ್ಯದಲ್ಲಿ ಸಿಗುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಕನ್ನಡ ತಿಳಿಯದವರನ್ನು ರಾಜ್ಯದ ಬ್ಯಾಂಕ್ಗಳಿಗೆ ಕೆಲಸಕ್ಕೆ ನೇಮಿಸುವುದು ಸರಿಯೇ ಎಂದು ಟ್ವಿಟಿಗರು ಪ್ರಶ್ನಿಸುತ್ತಿದ್ದಾರೆ.
ನಮ್ಮ ಹಕ್ಕು
ಇದು ಸರ್ವಾಧಿಕಾರ ಅಲ್ಲ, ಅವರ ಹಕ್ಕು ಎಂದು ಹೇಳುವ ಮೂಲಕ ರಾಜ್ಯದಲ್ಲಿರುವ ಎಲ್ಲ ಸರಕಾರಿ ಕೆಲಸಗಳು ಕನ್ನಡಿಗರಿಗೆ ಸಿಗಬೇಕೆಂಬ ಆಶಯ ಹೊಂದಲಾಗಿದೆ. ಐಬಿಪಿಎಸ್ ನಿಯಮಗಳ ಬದಲಾವಣೆಯಿಂದ 5 ವರ್ಷದಲ್ಲಿ ಕನ್ನಡಿಗರಿಗೆ ಈಗಾಗಲೇ ಹಲವು ಸಾವಿರ ಉದ್ಯೋಗಾವಕಾಶಗಳು ಕೈತಪ್ಪಿವೆ. ಈಗಿರುವ ಪರಿಸ್ಥಿತಿ ಮುಂದುವರಿದರೆ ಸಣ್ಣಪುಟ್ಟ ಕೆಲಸಗಳಲ್ಲೂ ಇತರ ಭಾಷೆಯ ಕಾರ್ಮಿಕರು ತುಂಬುವ ಸಾಧ್ಯತೆ ಇದೆ. ಆದ್ದರಿಂದ ಬಹಳಷ್ಟು ಜನರು ಈ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಗುತ್ತಿದೆ.
ಅಭಿಯಾನಕ್ಕೆ ಸಿಎಂ ಬೆಂಬಲ
ಬೆಂಗಳೂರು: “ಕರ್ನಾಟಕ ಜಾಬ್ಸ್ ಫಾರ್ ಕನ್ನಡಿಗಾಸ್’ ಟ್ವಿಟ್ಟರ್ ಅಭಿಯಾನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು ಎಂದು ಅವರು ಟ್ವಿಟರ್ ಮೂಲಕ ಹೇಳಿದ್ದಾರೆ.
“ಕರ್ನಾಟಕ ಜಾಬ್ಸ್ ಫಾರ್ ಕನ್ನಡಿಗಾಸ್’ ಎನ್ನುವ ಹ್ಯಾಶ್ಟ್ಯಾಗ್ ಬಳಸುವ ಮೂಲಕ ಕನ್ನಡಿಗರು ಭಾರೀ ಪ್ರಮಾಣದಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಈ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ ಆಗಿದೆ. ರಾಜ್ಯದಲ್ಲಿ ಕನ್ನಡಿಗರಿಗೆ ಸರಕಾರಿ, ಸರಕಾರಿ ಸ್ವಾಮ್ಯ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದು ಮೊದಲಿನಿಂದಲೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿ ರುವುದನ್ನು ಸ್ಮರಿಸಬಹುದು.