ಉಚ್ಚಿಲ ದಸರಾ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ ಪೂರ್ಣ
ಉಚ್ಚಿಲಕ್ಕೆ ಆಗಮಿಸಿದ ವಿವಿಧ ಟ್ಯಾಬ್ಲೋಗಳು, ಪುಷ್ಪಾರ್ಚನೆಗೆ ಸಿದ್ಧವಾಗಿದೆ ಹೆಲಿಕಾಪ್ಟರ್
Team Udayavani, Oct 5, 2022, 2:22 PM IST
ಉಚ್ಚಿಲ : ಉಚ್ಚಿಲ ದಸರಾ 2022 ರ ಪ್ರಯುಕ್ತ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ಥಂಭನ ಪೂರ್ವಕ ಶೋಭಾ ಯಾತ್ರೆಗೆ ಅಂತಿಮ ಹಂತದ ಸಿದ್ದತೆಗಳು ಭರದಿಂದ ನಡೆಯುತ್ತಿವೆ.
ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೋಗಳು ಈಗಾಗಲೇ ಮಹಾಲಕ್ಷ್ಮೀ ದೇವಸ್ಥಾನವನ್ನು ತಲುಪಿದ್ದು ಟ್ಯಾಬ್ಲೋಗಳಿಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.
ಕೇರಳ, ತಮಿಳುನಾಡು, ಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳೂ ಸೇರಿದಂತೆ ವಿವಿಧೆಡೆಗಳಿಂದ ಟ್ಯಾಬ್ಲೋಗಳು ಉಚ್ಚಿಲಕ್ಕೆ ಆಗಮಿಸಿವೆ.
ವಿವಿಧ ಭಜನಾ ತಂಡಗಳು, ಇಸ್ಕಾನ್ ಭಜನಾ ತಂಡಗಳು, ವಾದ್ಯ, ಬ್ಯಾಂಡ್, ಡೋಲು ಸಹಿತವಾಗಿ ವಿವಿಧ ಕಲಾ ತಂಡಗಳು ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಳುತ್ತಿದ್ದು ಸಂಜೆ 3.30 ಕ್ಕೆ ಶೋಭಾಯಾತ್ರೆ ಗೆ ಚಾಲನೆ ದೊರಕಲಿದೆ. ಬಳಿಕ ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ಮೂಲಕವಾಗಿ ಶೋಭಾ ಯಾತ್ರೆಯ ಮೆರವಣಿಗೆ ಸಾಗಲಿದೆ.
ಉಚ್ಚಿಲದಿಂದ ಹೊರಡುವ ಶೋಭಾಯಾತ್ರೆಯು ಎರ್ಮಾಳು, ಪಡುಬಿದ್ರಿ, ಹೆಜಮಾಡಿ ಟೋಲಗೇಟ್ ವರೆಗೆ ಸಾಗಿ ಅಲ್ಲಿಂದ ಪಡುಬಿದ್ತಿ, ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ ಮೂಲಕವಾಗಿ ಕಾಪು ಬೀಚ್ ಗೆ ಸಾಗಲಿದೆ.
ಶೋಭಾಯಾತ್ರೆ ಸಾಗುವ ಉದ್ದಕ್ಕೂ ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಕೊಪ್ಪಂಗಡಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಕೊಪ್ಪಲಂಗಡಿಯಿಂದ ಕಾಪು ಬೀಚ್ ವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ಸಾಗಲಿದೆ.
ಕಾಪು ಬೀಚ್ ನಲ್ಲಿ ಕಾಶಿ ಮಾದರಿಯಲ್ಲಿ ಬೃಹತ್ ಗಂಗಾರತಿ ಬೆಳಗಿ, ಹತ್ತು ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿಯೊಂದಿಗೆ ಜಲಸ್ಥಂಭನಕ್ಕೆ ಚಾಲನೆ ನೀಡಲಾಗುತ್ತದೆ.
ಅಲ್ಲಿಂದ ವಿದ್ಯುತ್ ದೀಪಾಲಂಕಾರದೊಂದಿಗೆ ಅಲಂಕರಿಸಲಾಗುವ ಮೀನುಗಾರಿಕಾ ಬೋಟ್ ಗಳಲ್ಲಿ ವಿಗ್ರಹಗಳನ್ನು ಸಮುದ್ರ ಮದ್ಯ ಭಾಗಕ್ಕೆ ಕೊಂಡೊಯ್ದು ಅಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಗಿತ್ತದೆ.
ಶೋಭಾಯಾತ್ರೆ ಮೆರವಣಿಗೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಶಿಸ್ತುಬದ್ಧ ರೀತಿಯ ಮೆರವಣಿಗೆ ಆಯೋಜನೆಗೆ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಉಚ್ಚಿಲ ದಸರಾ 2022 ರ ನೇತೃತ್ವ ವಹಿಸಿರುವ ನಾಡೋಜ ಡಾ. ಜಿ. ಶಂಕರ್ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಹೊಸ ರಾಜಕೀಯ ಲೆಕ್ಕಾಚಾರ: ಟಿಆರ್ಎಸ್ ಗೆ ಮರು ನಾಮಕರಣ ಮಾಡಿದ ರಾವ್