ಉಡುಪಿ ಜಿಲ್ಲೆ 11 ಕೇಂದ್ರಗಳಲ್ಲಿ ಸುಗಮ ಸಿಇಟಿ
Team Udayavani, Apr 30, 2019, 6:30 AM IST
ಉಡುಪಿ: ಉಡುಪಿ ಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿರುವ 2019ನೇ ಸಾಮಾನ್ಯ ಪ್ರವೇಶ ಪರೀಕ್ಷೆಯು ಸೋಮವಾರ ಆರಂಭಗೊಂಡಿತು.
ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜು, ಎಂಜಿಎಂ ಪ.ಪೂ. ಕಾಲೇಜು, ಬಾಲಕಿಯರ ಸರಕಾರಿ ಪ.ಪೂ. ಕಾಲೇಜು, ಸರಕಾರಿ ಪ.ಪೂ. ಕಾಲೇಜು, ವಿದ್ಯೋದಯ ಪ.ಪೂ. ಕಾಲೇಜು, ಮಣಿಪಾಲ ಪ.ಪೂ. ಕಾಲೇಜು, ಕುಂದಾಪುರದ ಸರಕಾರಿ ಪ.ಪೂ. ಕಾಲೇಜು, ಭಂಡಾರ್ಕಾರ್ ಪ.ಪೂ. ಕಾಲೇಜು, ಆರ್.ಎನ್.ಶೆಟ್ಟಿ ಕಾಲೇಜು, ಕಾರ್ಕಳದ ಭುವನೇಂದ್ರ ಪ.ಪೂ. ಕಾಲೇಜು, ಸರಕಾರಿ ಕಾಲೇಜುಗಳಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆದವು. ಬೆಳಗ್ಗೆ ಜೀವಶಾಸ್ತ್ರ ಮತ್ತು ಅಪರಾಹ್ನ ಗಣಿತ ಪರೀಕ್ಷೆಗಳು ನಡೆದವು.
ಒಟ್ಟು 4,769 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಉಡುಪಿ ಜಿಲ್ಲಾ ಖಜಾನೆಯಿಂದ ಸಂಬಂಧ ಪಟ್ಟ ಪರೀûಾ ಕೇಂದ್ರಗಳಿಗೆ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪ್ರಾಂಶುಪಾಲರೊಳಗೊಂಡ ತ್ರಿಸದಸ್ಯ ಸಮಿತಿಯವರು ತೆಗೆದುಕೊಂಡು ಹೋದರು. ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳ ತಹಶೀಲ್ದಾರರ ಜಿಪಿಎಸ್ ಅಳವಡಿಸಲಾದ ವಾಹನಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಯಿತು. ಪರೀûಾ ಕೇಂದ್ರಗಳಿಗೆ ಅಗತ್ಯ ಪೋಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಸಾಮಾನ್ಯ ಪ್ರವೇಶ ಪರೀಕ್ಷೆ ಪರಿಣಾಮಕಾರಿ ಹಾಗೂ ಲೋಪ ರಹಿತವಾಗಿ ನಡೆಸಲು ಜಿಲ್ಲಾಡಳಿತ ತೆಗೆದುಕೊಂಡ ಕ್ರಮದಂತೆ ಯಾವುದೇ ಸಮಸ್ಯೆಗಳಿಲ್ಲದೆ ಪರೀಕ್ಷೆ ನಡೆಯಿತು ಎಂದು ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಷಿ ಹೇಳಿದ್ದಾರೆ. ಮಂಗಳವಾರವೂ ಪರೀಕ್ಷೆ ನಡೆಯಲಿದೆ.