ಉಡುಪಿ: ‘ಸಹಕಾರ ವೈಭವ-2018’ ಉದ್ಘಾಟನೆ
Team Udayavani, Dec 17, 2018, 12:44 PM IST
ಉಡುಪಿ : ಪ್ರತಿಯೋರ್ವರಲ್ಲಿಯೂ ಪ್ರತಿಭೆ ಇರುತ್ತದೆ. ಅದು ಹೊರಹೊಮ್ಮಬೇಕಾದರೆ ಸೂಕ್ತ ವೇದಿಕೆ, ಅವಕಾಶ ದೊರೆಯಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಡಿ.16ರಂದು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಹಕಾರಿ ಕ್ಷೇತ್ರದ ಸಿಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರ ಪ್ರತಿಭಾ ಸ್ಪರ್ಧೆ ‘ಸಹಕಾರ ವೈಭವ-2018’ ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಂತ ಹಳೆಯ ಬ್ಯಾಂಕ್ ಆಗಿದ್ದರೂ ನವೀನ ಕಾರ್ಯಕ್ರಮ, ಚಿಂತನೆಗಳ ಮೂಲಕ ಬ್ಯಾಂಕ್ ಮೆಚ್ಚುಗೆ ಗಳಿಸಿದೆ. ಇದೀಗ ಸಹಕಾರಿ ಕ್ಷೇತ್ರದಲ್ಲಿರುವವರ ಪ್ರತಿಭೆ ಅನಾವರಣಕ್ಕೂ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ದ.ಕ ಸಹಕಾರ ಮೀನುಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರು ಮಾತನಾಡಿ ‘ಮನೆ ಮಾತಾಗಿರುವ ಬಡಗಬೆಟ್ಟು ಸೊಸೈಟಿ ತನ್ನ ಶತಮಾನೋತ್ಸವವನ್ನು ಕೂಡ ಅರ್ಥಪೂರ್ಣವಾಗಿ ಆಚರಿಸಿ ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಹೇಳಿದರು.
ಪ್ರಥಮ ಪ್ರಯತ್ನ
ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ‘ಸೊಸೈಟಿ ಕೇವಲ ಹಣಕಾಸು ವ್ಯವಹಾರ, ಲಾಭಕ್ಕೆ ಮಾತ್ರವೇ ಆದ್ಯತೆ ಕೊಡದೆ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿದೆ. ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿರುವವರಿಗೆ ಅವರ ಪ್ರತಿಭೆ ತೋರ್ಪಡಿಸಲು ಅವಕಾಶ ಒದಗಿಸುವ ಉದ್ದೇಶದಿಂದ ಸಹಕಾರ ವೈಭವ ಹಮ್ಮಿಕೊಂಡಿದ್ದು ಇದಕ್ಕೆ ಅದ್ಭುತ ಸ್ಪಂದನೆ ದೊರೆತಿದೆ. ಪ್ರತಿಭೆ ಅನಾವರಣ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ದುಡಿಯುವವರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಹಿರಿಯ ಸಹಕಾರಿ ಧುರೀಣ ಕೃಷ್ಣರಾಜ ಸರಳಾಯ, ದುಬೈ ಅನಿವಾಸಿ ತುಳುವರ ತುಳುಕೂಟದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಉಪಾಧ್ಯಕ್ಷ ಎಲ್.ಉಮಾನಾಥ್, ರಘುರಾಮ ಶೆಟ್ಟಿ ಉಪಸ್ಥಿತರಿದ್ದರು. ಸೊಸೈಟಿಯ ಉದ್ಯಾವರ ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು.