ಮಲ್ಪೆ ಮುಖ್ಯ ರಸ್ತೆ: ಆಯ ತಪ್ಪಿದರೆ ಅಪಾಯ ಖಚಿತ
ದ್ವಿಚಕ್ರ ಸವಾರರಿಗೆ ಮೃತ್ಯುಕೂಪವಾಗಿ ಕಾಡುತ್ತಿದೆ ಕಾಂಕ್ರೀಟ್ ರಸ್ತೆಯ ಇಕ್ಕೆಲಗಳು
Team Udayavani, Oct 14, 2019, 5:01 AM IST
ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಆದಿವುಡುಪಿ- ಮಲ್ಪೆ ಮುಖ್ಯರಸ್ತೆಯ ಕಲ್ಮಾಡಿಯಿಂದ ಮಲ್ಪೆ ಬಸ್ಸು ನಿಲ್ದಾಣದ ವರೆಗೆ ಸುಮಾರು ಒಂದೂವರೆ ಕಿ. ಮೀ. ಅಂತರದ ಕಾಂಕ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣಗೊಂಡು ದ್ವಿಚಕ್ರ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಪ್ರಮುಖ ಮೀನುಗಾರಿಕೆ ವಾಣಿಜ್ಯ ಬಂದರು, ಪ್ರವಾಸಿ ಕೇಂದ್ರವಾದ ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯೂ ಇದಾಗಿರುವುದರಿಂದ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ.
ಎಲ್ಲಿಲ್ಲಿ ಹೊಂಡಗಳು ಇವೆ ?
ಇಲ್ಲಿನ ಫಿಶರೀಸ್ ಶಾಲೆ ಬಳಿಯ ಪೆಟ್ರೋಲ್ ಬಂಕಿನಿಂದ ಹಿಡಿದು ಮುಖ್ಯ ಬಸ್ಸು ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಹೊಂಡಗಳದ್ದೇ ಕಾರುಬಾರು. 200 ಮೀಟರ್ ಉದ್ದ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಭೀಮ ಗಾತ್ರದ ಹೊಂಡ 50ಕ್ಕೂ ಹೆಚ್ಚು ಇವೆೆ. ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಎದುರು, ಏಳೂರು ಮೊಗವೀರ ಭವನ, ರೋಯಲ್ ಬಾರ್ ಮುಂಭಾಗ, ಮೂರು ರಸ್ತೆ ಕೂಡುವಲ್ಲಿ, ಕಾರ್ತಿಕ್ ಬಿಲ್ಡಿಂಗ್ ಬಳಿಯಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿವೆ. ಇಲ್ಲಿನ ದ್ವಿಚಕ್ರ ವಾಹನಗಳು ಬಿಡಿ, ಕಾರುಗಳ ಚಕ್ರವೂ ಹೊಂಡಕ್ಕೆ ಬಿದ್ದರೆ ತಬ್ಬಿಬ್ಟಾಗುವ ಸ್ಥಿತಿ ಇದೆ. ಈ ಅಪಾಯಕಾರಿ ರಸ್ತೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯ.
ತೇಪೆಯೂ ನಡೆದಿಲ್ಲ
ರಸ್ತೆಯ ಬದಿಯಲ್ಲಿ ನಿರ್ಮಾಣವಾದ ಹೊಂಡವನ್ನು ಈ ಬಾರಿ ಮಳೆಗಾಲದ ಮೊದಲು ಆಡಳಿತ ಕನಿಷ್ಠ ತೇಪೆ ಮಾಡುವ ಪ್ರಯತ್ನವನ್ನು ನಡೆಸಿಲ್ಲ. ರಸ್ತೆಯ ಬದಿಯ ಹೊಂಡದಲ್ಲಿ ಮಳೆ ನೀರು ನಿಂತು ಹಲವಾರು ಬೈಕ್ ಸವಾರರು ರಸ್ತೆಯ ಅಂಚಿಗೆ ಬಂದು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಅನೇಕ ಘಟನೆಗಳು ನಡೆದಿವೆ.
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಇರುವುದರಿಂದ ಹಲವಾರು ವರ್ಷಗಳಿಂದ ನನೆ ಗುದಿಗೆ ಬಿದ್ದ ಈ ರಸ್ತೆಯನ್ನು ವಿಸ್ತರಣೆಗೊಳಿಸಲು ಈಗ ಸೂಕ್ತ ಕಾಲ. ಜನಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಅಭಿವೃದ್ಧಿಪಡಿಸಬೇಕೆಂಬ ಆಗ್ರಹ ನಾಗರಿಕರದ್ದು.
ಸಂಚಾರಕ್ಕೆ ಸಂಚಕಾರ
ಮಲ್ಪೆ ಮುಖ್ಯರಸ್ತೆಯಲ್ಲಿ ಒಂದೆಡೆ ವಾಹನಗಳ ಓಡಾಟ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಒಂದೆಡೆಯಾದರೆ ಮತ್ತೂಂದಡೆ ರಸ್ತೆಯ ಬದಿಯ ದೊಡ್ಡ ಹೊಂಡಗಳಿಂದ ಮುಖ್ಯರಸ್ತೆಯಲ್ಲಿ ಹೋಗುವುದು ಒಂದು ಸಾಹಸವಾಗುತ್ತದೆ. ಸಂಚಾರಕ್ಕೆ ಸಂಚಕಾರವನ್ನು ತರುವ ಹೊಂಡಗಳನ್ನು ಮುಚ್ಚುವ ಕೆಲಸ ಅತೀ ಶೀಘ್ರದಲ್ಲಿ ಆಗಬೇಕಾಗಿದೆ.
-ಪ್ರದೀಪ್ ಟಿ. ಸುವರ್ಣ, ದ್ವಿಚಕ್ರ ಸವಾರರು