ಉಡುಪಿ-ಮಣಿಪಾಲ: ಹೆದ್ದಾರಿ ವಿಸ್ತಾರ, ಸವಾರರು ತತ್ತರ
Team Udayavani, Mar 13, 2019, 1:00 AM IST
ಉಡುಪಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆ¨ªಾರಿ 169(ಎ) ಚತುಷ್ಪಥ ಯೋಜನೆ ಸಂಬಂಧಿಸಿ ಕಡಿಯಾಳಿಯಿಂದ ಪರ್ಕಳವರೆಗೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸದೆ ಇರುವ ಕಾರಣ ಸವಾರರು ಗೊಂದಲಕ್ಕೀಡಾಗುತ್ತಿದ್ದಾರೆ.
ಎಲ್ಲೆಂದರಲ್ಲಿ ನಿಲುಗಡೆ
ಬಸ್ಸು ತಂಗುದಾಣಗಳು ಇಲ್ಲದ ಕಾರಣ ಸರ್ವಿಸ್ ಬಸ್ಗಳು ಪ್ರಯಾಣಿಕರು ಇದ್ದ ಕಡೆ ಏಕಾಏಕಿ ಯಾವುದೇ ಸೂಚನೆ ನೀಡದೆ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಹಿಂಬದಿಯಿಂದ ಬರುವ ಬೈಕ್ ಸವಾರರು ಬಸ್ಸುಗಳಿಗೆ ಢಿಕ್ಕಿ ಹೊಡೆಯುವ ಘಟನೆಗಳು ಇಲ್ಲಿ ಸಂಭವಿಸುತ್ತಿವೆ. ಮಣಿಪಾಲ ರಸ್ತೆ ಸರಿ ಇಲ್ಲದಿರುವುದರಿಂದ ಮಂಗಳೂರಿಂದ ಬರುವ ಎಕ್ಸ್ಪ್ರೆಸ್ ಬಸ್ಗಳೂ ಉಡುಪಿ ನಿಲುಗಡೆಗೆ ಸೀಮಿತವಾಗಿವೆ. ಸಿಟಿ ಹಾಗೂ ಸರ್ವಿಸ್ ಬಸ್ಸುಗಳು ಮಾತ್ರ ಓಡಾಡುತ್ತಿವೆ
ರಸ್ತೆ ದಾಟುವುದು ಕಷ್ಟ
ಬಹುತೇಕ ಏಕಮುಖ ರಸ್ತೆಯಾದ ಕಾರಣ ರಸ್ತೆ ದಾಟಲೂ ಹರಸಾಹಸ ಪಡಬೇಕಾಗುತ್ತದೆ. ಇನ್ನು ಕ್ಯೂರಿಂಗ್ ಸಮಯದಲ್ಲಂತೂ ಅದರ ಮೇಲೆ ನಡೆದಾಡಲು ಹರಸಾಹಸ ಪಡಬೇಕಾಗುತ್ತದೆ.
ಮಣಿಪಾಲ ಧೂಳುಮಯ
ಮಣ್ಣು, ಜಲ್ಲಿಕಲ್ಲುಹುಡಿ ಮಿಶ್ರಿತ ಧೂಳಿನಿಂದ ವಾಹನ ಸವಾರರು ಸಹಿತ ಪ್ರಯಾಣಿಕರು ಕಂಗೆಟ್ಟು ಹೋಗಿದ್ದಾರೆ. ಶೀತ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಸಾಮಾನ್ಯವಾಗಿವೆ.
ಟ್ರಾಫಿಕ್ ಜಾಮ್
ಟ್ರಾಫಿಕ್ ಜಾಮ್ ಉಡುಪಿಯಿಂದ ಮಣಿಪಾಲಕ್ಕೆ 10ರಿಂದ 15 ನಿಮಿಷ ತಗಲುವ ಸಮಯ ಪ್ರಸ್ತುತ 20ರಿಂದ 30 ನಿಮಿಷ ತೆಗೆದುಕೊಳ್ಳುತ್ತಿದೆ. ಮಣಿಪಾಲದಿಂದ ಪರ್ಕಳದ ವರೆಗೆ ನಿಧಾನ ಸಂಚಾರ ಇದೆ. ಇನ್ನು ಇಂದ್ರಾಳಿಯಲ್ಲಿ ರಸ್ತೆ ವಿಸ್ತರಣೆಗೆ ಏರಿಕೆ ಮಾಡಿದ ಕಾರಣ ಒಂದು ಬದಿ ಇಳಿಜಾರಾಗಿದೆ.
ಏಕಮುಖ ಸಂಚಾರ ಇಲ್ಲಿದ್ದು, ಉಡುಪಿಯಿಂದ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ತೆರಳುವವರು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮಣಿಪಾಲದಲ್ಲಿ ಸಿಂಡಿಕೇಟ್ ಸರ್ಕಲ್ನಿಂದ ವಾಹನ ಸವಾರರು ತಿಳಿಯದೆ ಕಾಂಕ್ರೀಟ್ ರಸ್ತೆಯಲ್ಲಿ ಬಂದರೆ ಸಿಂಡಿಕೇಟ್ ಬ್ಯಾಂಕ್, ಇಂಡಸ್ಟ್ರಿಯಲ್ ಏರಿಯಾ ಕಡೆ ತಿರುಗಲು ಕಾಂಕ್ರೀಟ್ನಿಂದ ಇಳಿಸಲು ಸಮಸ್ಯೆ ಇದೆ. ಕ್ಯಾನ್ಸರ್ ಆಸ್ಪತ್ರೆ ಪಕ್ಕ ಬಲಗಡೆಗೆ ತಿರುಗುವುದು, ಯುನಿವರ್ಸಿಟಿ ಕಡೆಗೆ ಬರುವುದು ಕಷ್ಟಕರವಾಗಿದ್ದು ನಿತ್ಯ ವಾಹನ ಸವಾರರ ಜಟಾಪಟಿಗೂ ಕಾರಣವಾಗಿದೆ.
ಮಳೆಗಾಲದಲ್ಲಿ ಇನ್ನೂ ಸಮಸ್ಯೆ?
ಮಳೆಗಾಲದಲ್ಲಿ ಹೊಂಡಗಳಲ್ಲಿ ಮಳೆನೀರು ನಿಲ್ಲುವ ಕಾರಣ ವಾಹನ ಸವಾರಿ ಕಷ್ಟಕರವಾಗಿರಲಿದೆ. ಹೊಂಡಗಳಲ್ಲಿ ನೀರು ನಿಲ್ಲುವುದು, ಇದನ್ನು ಅರಿಯದೆ ವಾಹನಗಳು ಸಿಲುಕುವ ಅಪಾಯವಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಳೆಗಾಲಕ್ಕೂ ಮುನ್ನ ಎಚ್ಚೆತ್ತು ಕಾಮಗಾರಿಗೆ ವೇಗ ನೀಡಬೇಕಿದೆ.
ಮಳೆಗಾಲಕ್ಕೆ ಮುನ್ನ ಸಮತಟ್ಟು
ಈಗಾಗಲೇ ಶೇ.15ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ರಸ್ತುತ ಅಗೆದಿರುವ ಹೊಂಡಗಳನ್ನು ಮಳೆಗಾಲಕ್ಕೆ ಮುನ್ನ ಸಮತಟ್ಟು ಮಾಡಲಾಗುವುದು.
– ಮಂಜುನಾಥ ನಾಯಕ್ ಎಂಜಿನಿಯರ್, ರಾ.ಹೆ.