ಟ್ಯಾಕ್ಸಿಮೆನ್ ಅಸೋಸಿಯೇಷನ್ ಬೇಡಿಕೆ ಈಡೇರಿಕೆ
ಉಡುಪಿ ಶಾಸಕ ರಘುಪತಿ ಭಟ್ ಭರವಸೆ
Team Udayavani, Sep 24, 2019, 5:20 AM IST
ಉಡುಪಿ: ಮ್ಯಾಕ್ಸಿಕ್ಯಾಬ್ನಲ್ಲಿ ಈಗ ಇರುವ 12+1 ಪರವಾನಿಗೆಯ ಬದಲು ಅಧಿಕೃತವಾಗಿ 19+1 ಸೀಟು ಸಾಮರ್ಥ್ಯಕ್ಕೆ ಪರವಾನಿಗೆ ನೀಡಬೇಕು ಎಂಬ ಬೇಡಿಕೆಯನ್ನು ಈಡೇರಿಸುವ ಕುರಿತು ಸಾರಿಗೆ ಸಚಿವರ ಜತೆ ಚರ್ಚಿಸುವುದಾಗಿ ಶಾಸಕ ಕೆ.ರಘುಪತಿ ಭಟ್ ಭರವಸೆ ನೀಡಿದ್ದಾರೆ.
ಅಸೋಸಿಯೇಷನ್ ಜಿಲ್ಲಾಧ್ಯಕ್ಷರೂ ಆಗಿರುವ ಭಟ್ ಅವರು ಸೋಮವಾರ ಉಡುಪಿಯ ಲಕ್ಷ್ಮೀ ಸಭಾಭವನದಲ್ಲಿ ಜರಗಿದ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ತುರ್ತುಸಭೆಯಲ್ಲಿ ಮಾತನಾಡಿದರು. ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ನವರ ಸಮಸ್ಯೆಗಳ ಅರಿವಿದೆ. ಅಸೋಸಿಯೇಷನ್ನ ನಿಯೋಗವನ್ನು ಕೂಡಲೇ ಸಾರಿಗೆ ಸಚಿವರ ಬಳಿ ಕರೆದೊಯ್ಯುತ್ತೇನೆ ಎಂದು ಶಾಸಕರು ತಿಳಿಸಿದರು.
ಕಾರ್ಯಾಧ್ಯಕ್ಷ ಪಿ.ಹರಿದಾಸ್ ಭಟ್ ಅವರು ಮಾತನಾಡಿ, “ಮ್ಯಾಕ್ಸಿ ಕ್ಯಾಬ್ನವರಿಗೆ ಪೊಲೀಸರು ಅಲ್ಲಲ್ಲಿ ತೊಂದರೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 25,000 ಮ್ಯಾಕ್ಸಿಕ್ಯಾಬ್ಗಳಿವೆ. ಇವುಗಳನ್ನು 19+1 ಮಾಡಿ ಅಧಿಕೃತಗೊಳಿಸುವುದರಿಂದ ಸರಕಾರಕ್ಕೆ ತೆರಿಗೆ ಆದಾಯವೂ ಹೆಚ್ಚಾಗ ಲಿದೆ. ಮ್ಯಾಕ್ಸಿಕ್ಯಾಬ್ನವರ ಮೇಲೆ ಅನಗತ್ಯ ಕಿರುಕುಳವೂ ತಪ್ಪುತ್ತದೆ’ ಎಂದರು.
ಪ್ರವಾಸಿತಾಣಗಳು, ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಹೋದರೆ ಭಾರೀ ತೊಂದರೆ ಎದುರಿಸುವಂತಾಗಿದೆ. ಮಂತ್ರಾಲಯದಲ್ಲಿ ಇತ್ತೀಚೆಗೆ 12 ಮಂದಿ ಇದ್ದ ಮ್ಯಾಕ್ಸಿ ಕ್ಯಾಬ್ನವರಿಗೆ 60,000 ರೂ. ದಂಡ ವಿಧಿಸಲಾಗಿದೆ ಎಂದು ಓರ್ವ ಮ್ಯಾಕ್ಸಿ ಕ್ಯಾಬ್ ಚಾಲಕರು ಅಲವತ್ತುಕೊಂಡರು. ಇದೇ ರೀತಿ 25,000 ರೂ., 40,000 ರೂ.ಗಳನ್ನು ಕೂಡ ವಸೂಲಿ ಮಾಡಲಾಗಿದೆ ಎಂದು ಅನೇಕ ಮಂದಿ ಚಾಲಕರು ಅಹವಾಲು ಸಲ್ಲಿಸಿದರು.
ಒಗ್ಗಟ್ಟಿನ ಹೋರಾಟ
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್ ಅವರು ಮಾತನಾಡಿ “ಮ್ಯಾಕ್ಸಿಕ್ಯಾಬ್ನವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಲ್ಲಿ ಸದ್ಯಕ್ಕೆ 19+1 ಸೀಟು ಸಮಾರ್ಥ್ಯದ ವಿಚಾರ ಪ್ರಮುಖವಾಗಿದೆ. ಇದನ್ನು ಸರಕಾರದ ಗಮನಕ್ಕೆ ತರುವುದಕ್ಕಾಗಿ ತುರ್ತು ಸಭೆ ಕರೆದಿದ್ದೇವೆ. ಬೇಡಿಕೆ ಈಡೇರಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ. ಮ್ಯಾಕ್ಸಿ ಕ್ಯಾಬ್ ಚಾಲಕರು ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಗಳನ್ನು ಪಡೆದುಕೊಳ್ಳಬೇಕು ಎಂದರು.
ಕೋಶಾಧಿಕಾರಿ ಪ್ರಕಾಶ್ ಅಡಿಗ, ಉಪಾಧ್ಯಕ್ಷರಾದ ಸತೀಶ್ ನಾಯ್ಕ ,ರಾಘವೇಂದ್ರ ಸೋಮಯಾಜಿ, ದ.ಕ ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯ ದರ್ಶಿ ಆನಂದ್, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದ ಅಸೋಸಿ ಯೇಷನ್ ಪದಾಧಿಕಾರಿಗಳು ಇದ್ದರು.