ಫೋನ್-ಇನ್ನಲ್ಲಿ ಎಸ್ಪಿ ಜತೆ ಮಾತನಾಡಿ
Team Udayavani, Sep 9, 2017, 6:05 AM IST
ಉಡುಪಿ: ಜಿಲ್ಲಾ ಎಸ್ಪಿ ಡಾ| ಸಂಜೀವ ಪಾಟೀಲ್ ಅವರ 4ನೇ ಫೋನ್-ಇನ್ ಕಾರ್ಯಕ್ರಮವು ಶನಿವಾರ ನಡೆಯಲಿದ್ದು, ಸಾರ್ವಜನಿಕರು ಮೌನಿಯಾಗಿದ್ದರೆ ಬದಲಾವಣೆ ಸಾಧ್ಯವಿಲ್ಲ. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಇರುವ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಮಾಹಿತಿಗಳ ಕುರಿತು ಎಸ್ಪಿಯವರಿಗೆ ಕರೆ ಮಾಡಿ ತಿಳಿಸಿದರೆ ಉತ್ತಮ.
ಗ್ರಾಮಗಳಿಂದ ಹಿಡಿದು ನಗರಗಳಲ್ಲಿನ ಕೆಲವೊಂದು ಸಮಸ್ಯೆಗಳು ಎಸ್ಪಿಯವರ ಗಮನಕ್ಕೆ ಬಾರದೆ ಇದ್ದು, ಸಮಸ್ಯೆ ಹಾಗೆಯೇ ಉಳಿದು ಬಿಡುತ್ತದೆ. ಇನ್ನು ಕೆಲವು ಸಮಸ್ಯೆಗಳು ಬೆಳೆಯುತ್ತಾ ಹೋಗುತ್ತದೆ. ಕೆಲವೊಂದು ವಾಹನಗಳ ಸವಾರರು ರಾತ್ರಿ ವೇಳೆಯಲ್ಲಿ ಕಣ್ಣಿಗೆ ಹೊಡೆಯುವಂತಹ ದೀಪಗಳನ್ನು ಹಾಕುತ್ತಾರೆ, ಜೀಬ್ರಾ ಕ್ರಾಸಿಂಗ್ನಲ್ಲಿ ಜನರು ಕ್ರಾಸಿಂಗ್ ಮಾಡುವಾಗ ವಾಹನದವರು ನಿಧಾನಿಸುವುದಿಲ್ಲ. ಅನಗತ್ಯ ರಸ್ತೆ ತಡೆಗಳು, ರಸ್ತೆ ತಿರುವುಗಳು, ಸೂಚನಾ ಫಲಕಗಳು ಮೊದಲಾದ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಮಾಹಿತಿ ನೀಡಬಹುದಾಗಿದೆ.
ಹಿಂದೆ ಗಾಂಜಾ ಮಾರಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿತ್ತು. ಈಗ ಗಾಂಜಾ ಸೇವಿಸಿರುವವರ ಮೇಲೂ ಪ್ರಕರಣ ದಾಖಲಿಸಿಕೊಳ್ಳಲು ಎಸ್ಪಿಯವರು ಸೂಚಿಸಿದ್ದಾರೆ. ಅದರಂತೆ ಪ್ರಕರಣವೂ ದಾಖಲಾಗುತ್ತಿದೆ. ಗಾಂಜಾ ಸೇವಿಸುವವರ ಮಾಹಿತಿಯು ಕೆಲ ಸಾರ್ವಜನಿಕರಿಗೆ ಇರುತ್ತದೆ. ಈ ಬಗ್ಗೆ ಎಸ್ಪಿಯವರ ಗಮನಕ್ಕೆ ತರಬಹುದು. ಈಗಾಗಲೇ ಮಟ್ಕಾ ದಂಧೆಯ ಕುರಿತು ಎಲ್ಲ ಕಡೆಯಿಂದಲೂ ಮಾಹಿತಿ ಬರುತ್ತಲಿದೆ. ಇದೇ ರೀತಿ ಇನ್ನೂ ಹಲವು ಅಕ್ರಮ ದಂಧೆಗಳು ಕಾರ್ಯಾಚರಿಸುತ್ತಿರಬಹುದು. ಇದು ಸ್ಥಳೀಯ ಮಟ್ಟದ ಅಧಿಕಾರಿಗಳ ಸುಪರ್ದಿಯಲ್ಲಿಯೇ ನಡೆಯುತ್ತಿದ್ದಿರಲೂಬಹುದು. ಮೇಲಧಿಕಾರಿಗಳ ಗಮನಕ್ಕೆ ಇದು ಬಾರದಿರಬಹುದು. ಇದನ್ನೂ ಸಹ ಎಸ್ಪಿಯವರ ಗಮನಕ್ಕೆ ತಂದರೆ ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಹೆಸರು ಗೌಪ್ಯತೆಗೆ
ಕೊಡುತ್ತಾರೆ ಒತ್ತು
ಎಸ್ಪಿಯವರ ಫೋನ್-ಇನ್ನಲ್ಲಿ ಎಲ್ಲ ದೂರು/ವಿಚಾರ/ಮಾಹಿತಿ ಗಳನ್ನು ಮುಕ್ತವಾಗಿ ಅವ ರೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಗೌಪ್ಯತೆ ಕಾಪಾಡಲಾಗುವುದು. ಮಾಹಿತಿ ತಿಳಿಸುವವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಲಾಗುವುದಿಲ್ಲ. ಫೋನ್-ಇನ್ನಲ್ಲಿ ಪತ್ರಕರ್ತರು ಭಾಗಿಯಾಗುತ್ತಾರಾದರೂ, ಅವರಿಗೆ ಸಹ ಕರೆ ಮಾಡಿದವರ ಹೆಸರು, ವಿಳಾಸದ ವಿವರವನ್ನು ಎಸ್ಪಿಯವರು ನೀಡದೆ ಗೌಪ್ಯವಾಗಿಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರಿಗೆ ಗೌಪ್ಯತೆಯ ಬಗ್ಗೆ ಯಾವುದೇ ಸಂದೇಹ ಬೇಡ. ಉತ್ತಮ ಸಮಾಜಕ್ಕಾಗಿ ಫೋನ್-ಇನ್ಗೆ ಕರೆ ಮಾಡಿ ಮಾಹಿತಿ ಕೊಡಿ. ಈ ಶನಿವಾರ ಕರೆ ಬ್ಯುಸಿ ಬಂದರೆ, ಕನೆಕ್ಟ್ ಆಗದಿದ್ದರೆ, ತಾಳ್ಮೆಯಿಂದಿರಿ. ಮತ್ತೂಂದು ಶನಿವಾರ ಬೆಳಗ್ಗೆ 10ಕ್ಕೆ ಸಿದ್ಧರಾಗಿರಿ.