ಪರ್ಯಾಯಕ್ಕೆ ಸಜ್ಜುಗೊಂಡ “ಕೃಷ್ಣನಗರಿ’
Team Udayavani, Jan 16, 2018, 4:47 PM IST
ಉಡುಪಿ: ಉಡುಪಿಯ ಶ್ರೀಕೃಷ್ಣಪೂಜಾ ನಿರ್ವಹಣೆಗಾಗಿ ಗುರುವಾರ ಸರ್ವಜ್ಞ ಪೀಠವನ್ನೇರಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಶ್ರೀಕೃಷ್ಣಪೂಜಾ ಪರ್ಯಾಯಕ್ಕೆ ಕೃಷ್ಣನಗರಿ ಸಜ್ಜುಗೊಂಡಿದೆ.
ವೈಭವದಿಂದ ಸಂಪನ್ನಗೊಳ್ಳಲಿರುವ ಪರ್ಯಾಯೋತ್ಸವ ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಈಗಾಗಲೇ ಆಗಮಿಸಿದ್ದು, ಬಹುತೇಕ ಹೊಟೇಲ್ಗಳ ವಸತಿಗೃಹಗಳು ಭರ್ತಿಗೊಂಡಿವೆ. ಶನಿವಾರ, ರವಿವಾರ, ಸೋಮವಾರ ಹೀಗೆ ಮೂರು ದಿನಗಳು ರಜೆಗಳಿರುವುದರಿಂದ ಸರಕಾರಿ ನೌಕರರು, ಬ್ಯಾಂಕ್ ಸೇರಿದಂತೆ ವಿವಿಧ ಕಚೇರಿಗಳ ನೌಕರರು ಉಡುಪಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೂ ಬಂದು ಪರ್ಯಾಯ ವೀಕ್ಷಣೆಗೆ ಕಾಯುತ್ತಿದ್ದಾರೆ.
ಉಡುಪಿ ಪರ್ಯಾಯಕ್ಕೆ ಬಹು ಹಿಂದಿನಿಂದಲೂ ಉಡುಪಿಯ ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳು, ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಇನ್ನಿತರ ಎಲ್ಲ ಸಂಘ-ಸಂಸ್ಥೆಗಳು ತಮ್ಮದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ವ್ಯಾಪಾರೋದ್ಯಮಿಗಳು, ಶಾಲಾ-ಕಾಲೇಜು, ಕಚೇರಿಗಳು ರಜೆ ಸಾರಿ ಉತ್ಸವದಲ್ಲಿ ಪಾಲ್ಗೊಂಡು ಪರ್ಯಾಯದ ಮೆರಗನ್ನು ಹೆಚ್ಚಿಸಿದರೆ, ವ್ಯಾಪಾರೋದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು ಬೇರೆ ಬೇರೆ ರೀತಿಯಲ್ಲಿ ತಮ್ಮದೇ ಆದ ಸೇವೆಯೋ ಎಂಬಂತೆ ಪ್ರಾಯೋಜಕತ್ವ ನೀಡುವ ಮೂಲಕ ಪರ್ಯಾಯೋತ್ಸವ ಸಾಂಗವಾಗಿ ನೆರವೇರುವುದಕ್ಕೆ ಪೂರಕವಾಗುತ್ತಿದ್ದಾರೆ.
ಸ್ವಚ್ಛತೆಗೂ ದೊರೆಯಲಿ ಆದ್ಯತೆ
ಶ್ರೀಕೃಷ್ಣಮಠ ನಾಡಿನ ಪ್ರಮುಖ ಪುಣ್ಯಕ್ಷೇತ್ರ. ಇತ್ತೀಚಿನ ವರ್ಷಗಳಲ್ಲಂತೂ ಇಲ್ಲಿಗೆ ಆಗಮಿಸುತ್ತಿರುವ ಯಾತ್ರಾರ್ಥಿಗಳ ಸಂಖ್ಯೆ ಅತ್ಯಧಿಕ. ಇದರಿಂದಾಗಿ ಸಹಜವಾಗಿಯೇ ಇಲ್ಲಿ ಮೂಲ ಸೌಕರ್ಯದ ಅಗತ್ಯ ಹೆಚ್ಚುತ್ತಲೇ ಇದೆ. ನಗರಸಭೆ, ಮಠ, ಶ್ರೀಕೃಷ್ಣ ಪ್ರತಿಷ್ಠಾನಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಸ್ವಚ್ಛತೆಯ ಕುರಿತು ಇನ್ನಷ್ಟು ವಿಶೇಷವಾಗಿ ಮುತುವರ್ಜಿ ವಹಿಸಿದರೆ ಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗಲಿದೆ.
ಡಸ್ಟ್ಬಿನ್ – ಶೌಚಾಲಯ ಬಳಸಿ
ಶ್ರೀ ಕೃಷ್ಣಮಠದ ಸುತ್ತಮುತ್ತ ಇರುವ ಒಳಚರಂಡಿಯ ಕಾಮಗಾರಿ ಅಲ್ಲಲ್ಲಿ ನಡೆದಿದೆಯಾದರೂ ಪೂರ್ಣ ಪ್ರಮಾಣದ ಕೆಲಸಗಳಾಗಿಲ್ಲ. ಕಲ್ಸಂಕ ತೋಡನ್ನು ಮುಚ್ಚುವ ನಿಟ್ಟಿನಲ್ಲಿಯೂ ಒಂದಿಷ್ಟು ಕೆಲಸ ನಡೆದಿದೆ. ಆದರೆ ಇನ್ನೂ ಬಾಕಿ ಇದೆ. ನಾರ್ತ್ ಶಾಲೆ ಬಳಿ ನಗರಸಭೆ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಇತ್ತೀಚೆಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.
ದೂರದೂರುಗಳಿಂದ ಶ್ರೀಕೃಷ್ಣಮಠ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರು ತಿಂಡಿ ತಿನಿಸುಗಳ ಪೊಟ್ಟಣಗಳು, ಕುಡಿಯುವ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಉಡುಪಿಯ ಅಂದಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು. ಕಾಗದದ ಚೂರುಗಳು, ಪ್ಲಾಸ್ಟಿಕ್ ಚೀಲಗಳು, ಬಿಸ್ಲೆರಿ ಸೇರಿದಂತೆ ವಿವಿಧ ಪಾನೀಯ ಬಾಟಲಿಗಳನ್ನು ವ್ಯವಸ್ಥೆಗೊಳಿಸಲಾದ ಡಸ್ಟ್ಬಿನ್ನಲ್ಲಿಯೇ ಹಾಕುವುದರ ಮೂಲಕ ನಗರದ ಅಂದಕ್ಕೆ ಪ್ರಾಧಾನ್ಯತೆ ನೀಡುವುದಲ್ಲದೆ, ಪರ್ಯಾಯದ ಸೊಬಗನ್ನು ಹೆಚ್ಚಿಸಲು ಸಹಕರಿಸಬೇಕಾದ ಅನಿವಾರ್ಯತೆ ಇದೆ.
ವಿದ್ಯಾರ್ಥಿಗಳ ತಂಡ ನಿರೀಕ್ಷೆ
ನಗರವನ್ನು ಸ್ವತ್ಛಗೊಳಿಸುವ, ಮೂಲಸೌಕರ್ಯ ಒದಗಿಸುವ ಕಾರ್ಯದಲ್ಲಿ ನಗರಸಭೆ ತೊಡಗಿಸಿಕೊಂಡಿದೆ. ಪರ್ಯಾಯ ಮೆರವಣಿಗೆ ಸಂದರ್ಭದಲ್ಲಿಯೂ ಸ್ವತ್ಛತೆಗೆಗಾಗಿ ಸುಮಾರು 40ರಷ್ಟು ಪೌರಕಾರ್ಮಿಕರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೆರವಣಿಗೆ ಸಾಗುವ ಮೊದಲು ಮತ್ತು ಸಾಗಿದ ಕೂಡಲೇ ಸ್ವತ್ಛತೆ ನಡೆಸಲಾಗುವುದು. ಅಲ್ಲದೆ ರಥಬೀದಿ ಪರಿಸರದಲ್ಲಿ ಸಾರ್ವಜನಿಕರು ತಿಂಡಿ ಮತ್ತಿತರ ವಸ್ತುಗಳ ಕಸವನ್ನು ಬಿಸಾಡದಂತೆ ನಿಗಾ ಇಡಲು ಮತ್ತು ಅವರಿಂದ ಕಸ ಸಂಗ್ರಹಿಸಿಕೊಳ್ಳಲು ಪೂರ್ಣಪ್ರಜ್ಞ ಕಾಲೇಜಿನ 100 ವಿದ್ಯಾರ್ಥಿಗಳ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಸ್ವಯಂಸೇವಕ ವಿದ್ಯಾರ್ಥಿಗಳು ಸಹಕರಿಸುವ ನಿರೀಕ್ಷೆ ಇದೆ. ಸಾರ್ವಜನಿಕರು ಕೂಡ ಸ್ವಚ್ಛತೆ ಕಡೆಗೆ ಗಮನ ನೀಡಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಪರಿಸರ ಎಂಜಿನಿಯರ್ ರಾಘವೇಂದ್ರ ಅವರು ಮನವಿ ಮಾಡಿದ್ದಾರೆ.
ಭಯ ಭಕ್ತಿಯ ಶ್ರದ್ಧಾಕೇಂದ್ರವಾದ ಉಡುಪಿಯಲ್ಲಿ ಪರ್ಯಾಯೋತ್ಸವಕ್ಕೆ ಬರುವ ಭಕ್ತರು, ಪ್ರವಾಸಿಗರು ಸ್ವತ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಲ್ಲಿ ಡಸ್ಟ್ಬಿನ್, ಶೌಚಾಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ. ತನ್ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ “ಸ್ವಚ್ಛ ಭಾರತ ಅಭಿಯಾನ’ಕ್ಕೂ ಮನ್ನಣೆ ನೀಡಿದಂತಾಗುತ್ತದೆ.
ಮೆರವಣಿಗೆ ಸಂದರ್ಭ ಸ್ವಚ್ಛತೆ
ಜ. 18ರಂದು ಮುಂಜಾನೆ ಸರಿಸುಮಾರು 3 ಗಂಟೆಯ ಹೊತ್ತಿಗೆ ವೈವಿಧ್ಯಮಯ ಸಾಂಸ್ಕೃತಿಕ ವೈಭವಗಳೊಂದಿಗೆ ಸಾಗಿಬರುವ ಪರ್ಯಾಯ ಮೆರವಣಿಗೆ ಮುಗಿದ ನಂತರ ಪಟ್ಟದ ದೇವರು ಮತ್ತು ಸ್ವಾಮೀಜಿಯವರು ಮೆರವಣಿಗೆಯಲ್ಲಿ ಸಾಗಿ ಬರುವ ಮೊದಲು ಜೋಡುಕಟ್ಟೆಯಿಂದ ಶ್ರೀ ಕೃಷ್ಣಮಠದ ವರೆಗಿನ ರಸ್ತೆಯನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸುವ ಕಾರ್ಯ ಹಮ್ಮಿಕೊಂಡಿರುವುದು ಈ ಬಾರಿಯ ವಿಶೇಷತೆ. ಈ ಜವಾಬ್ದಾರಿಯ ಪ್ರಾಯೋಜಕತ್ವ ವಹಿಸಿಕೊಂಡವರು ಈಗಾಗಲೇ ಕಳೆದೊಂದು ವರ್ಷದಿಂದ ವಾರಕ್ಕೊಮ್ಮೆ ನಗರ ಸ್ವತ್ಛತೆಯಲ್ಲಿ ಕೈಜೋಡಿಸುತ್ತಿರುವ “ಗಾಂಧಿ ಆಸ್ಪತ್ರೆ ಉಡುಪಿ’. ಅನಂತರ ಸ್ವಚ್ಛಗೊಳಿಸಲಾದ ರಸ್ತೆಯಲ್ಲಿ ಶ್ರೀಪಾದರ ವೈಭವೋಪೇತ ಮೆರವಣಿಗೆ ಸಾಗಿ ಬರಲಿದೆ. ಶ್ರೀ ಪಲಿಮಾರು ಪರ್ಯಾಯ ಸಮಿತಿ ವತಿಯಿಂದಲೇ ಪಾರ್ಕಿಂಗ್ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಭಕ್ತರ ಅನುಕೂಲತೆಗಾಗಿ 12 ತಾತ್ಕಾಲಿಕ ಶೌಚಾಲಯಗಳನ್ನು ವ್ಯವಸ್ಥೆಗೊಳಿಸಲಾಗುವುದು. ಜ. 17ರ ರಾತ್ರಿ ಮತ್ತು 18ರ ಮಧ್ಯಾಹ್ನ ಊಟದ ಸಂದರ್ಭ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಪ್ರದೇಶದಲ್ಲಿ ಸಾಕಷ್ಟು ಡಸ್ಟ್ಬಿನ್ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಶ್ರೀ ಪಲಿಮಾರು ಪರ್ಯಾಯ ಸಮಿತಿಯವರು ತಿಳಿಸಿದ್ದಾರೆ.
ಎಸ್.ಜಿ. ನಾಯ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ