ಉದ್ಯಾವರ : 8 ಪವನ್ ಚಿನ್ನ ಕದ್ದೊಯ್ದ ಫಕೀರ !
Team Udayavani, Jan 27, 2018, 11:12 AM IST
ಕಾಪು: ಭಿಕ್ಷೆಯ ನೆಪದಲ್ಲಿ ಮುಸ್ಲಿಂ ಮಹಿಳೆಯರಿದ್ದ ಮನೆಯೊಳಗೆ ಪ್ರವೇಶಿಸಿದ ಫಕೀರನೋರ್ವ, ಮನೆಯವರನ್ನು ವಂಚಿಸಿ 8 ಪವನ್ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉದ್ಯಾವರ ಗ್ರಾಮದ ಬೈಲುಜಿಡ್ಡೆಯ ಆಯಿಷಾ ಅವರ ಮನೆಯಲ್ಲಿ ಗುರುವಾರ ಘಟನೆ ನಡೆದಿದೆ.
ಘಟನೆ ವಿವರ
ಗುರುವಾರ ಮಧ್ಯಾಹ್ನ ಆಯಿಷಾ ಮತ್ತವರ ಅತ್ತೆ ಮನೆಯಲ್ಲಿದ್ದ ವೇಳೆ ಆಗಮಿಸಿದ ಫಕೀರ ಈಕೃತ್ಯವೆಸಗಿದ್ದಾನೆ. ಭಿಕ್ಷೆ ನೀಡಿದ ಸಂದರ್ಭ ಮನೆಯಲ್ಲಿ ಮಹಿಳೆಯರಿಬ್ಬರೇ ಇರುವುದನ್ನು ದೃಢಪಡಿಸಿಕೊಂಡು ಅವರನ್ನು ಧರ್ಮ ಮತ್ತು ನಂಬಿಕೆಯ ಆಧಾರದಲ್ಲಿ ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದ. ಮನೆಯೊಳಗೆ ಬಂದ ಫಕೀರ ಬಳಿಕ ಮನೆಯವರನ್ನು ಒಂದೊಂದೇ ವಿಚಾರದಲ್ಲಿ ಮಾತುಕತೆಗೆಳೆದು, ನೀವು ಒಳಗೆ ಇಟ್ಟಿರುವ ಚಿನ್ನ ನಾಪತ್ತೆಯಾಗಿದೆ. ನಿಮಗದು ತಿಳಿದಿದೆಯೇ ಎಂದು ಪ್ರಶ್ನಿಸಿದ. ಈ ವೇಳೆ ಆಯಿಷಾ ಚಿನ್ನ ಇಟ್ಟಲ್ಲೇ ಇದೆ ಎಂದು ಹೇಳಿದ್ದು, ಅದನ್ನು ತೋರಿಸುವಂತೆ ಕೇಳಿದಾಗ ಅದನ್ನು ತಂದು ತೋರಿಸಿದ್ದರು.
ಹೊಗೆಯೆಬ್ಬಿಸಿ ಚಿನ್ನ ಮಾಯ
ಆಗ ಈ ಚಿನ್ನ ಕಳೆದು ಹೋಗುವ ಭೀತಿಯಲ್ಲಿದೆ. ಇದು ನಿಮ್ಮಿಂದ ಕಳೆದು ಹೋಗದ ರೀತಿಯಲ್ಲಿ ಮಾಡುತ್ತೇನೆ ಎಂದು ನಂಬಿಸಿ, ಅದನ್ನು ಪಡೆದು ತನ್ನಲ್ಲಿದ್ದ ಮಣ್ಣಿನ ಗಡಿಗೆಯೊಳಗೆ ಹಾಕಿದ್ದು, ಬಳಿಕ ಬೆಂಕಿ ಮತ್ತು ಹೊಗೆಯೆಬ್ಬಿಸಿ ಮನೆಯವರ ಕೈಗೆ ನೀಡಿ, ಬಳಿಕ ಮನೆಯಿಂದ ತೆರಳಿದ್ದ. ಫಕೀರ ಮನೆಯಿಂದ ಹೊರಟು ಹೋದ ಬಳಿಕ ಗಡಿಗೆಯನ್ನು ತೆರೆದು ನೋಡಿದಾಗ ಮೋಸ ಹೋಗಿರುವ ವಿಚಾರ ತಿಳಿಯಿತು. ಬಳಿಕ ಕಾಪು ಪೊಲೀಸ್ ಠಾಣೆಗೆ ಆಗಮಿ ದೂರು ನೀಡಿದ್ದಾರೆ.
ಪಕ್ಕದ ಮನೆಯ ಸಿಸಿಕೆಮರಾದಲ್ಲಿ ಸೆರೆಯಾಗಿದ್ದ ಫಕೀರನ ಭಾವಚಿತ್ರವನ್ನು ಪೊಲೀಸರು ಸಂಗ್ರಹಿಸಿದ್ದು, ಆತನ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.